ಉಡುಪಿ: ಕವಿ ಮುದ್ದಣ ಮಾರ್ಗದ ನಗರಸಭೆ ಕಚೇರಿ ಮುಂಭಾಗದಲ್ಲಿ ಆಸ್ಪತ್ರೆ ನೆಲ ಮಹಡಿಗಾಗಿ ಭೂಮಿ ಅಗೆದು ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದ ಕಾರಣ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೃತಕ ಕೆರೆ ನಿರ್ಮಾಣವಾಗಿದೆ. ಪಕ್ಕದಲ್ಲೇ ಬಹುಮಹಡಿ ಕಟ್ಟಡಗಳಿದ್ದು, ಅಪಾಯ ಸಂಭವಿಸುವ ಭೀತಿ ಎದುರಾಗಿದೆ.
ಹಲವು ವರ್ಷಗಳಿಂದ ಕಾರ್ಯ ನಿರ್ವಸಿಸುತ್ತಿದ್ದ ಹಾಜಿ ಆಬ್ದುಲ್ಲಾ ಚಿಕಿತ್ಸಾಲಯ, ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ ಇದ್ದ ಜಾಗವನ್ನು ಬಿಆರ್ಎಸ್ ಆಸ್ಪತ್ರೆಗೆ ವಹಿಸಲಾಗಿದ್ದು, ಎರಡು ವರ್ಷಗಳ ಹಿಂದೆ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ವಿಶಾಲ ಸ್ಥಳದಲ್ಲಿ 50 ಅಡಿ ಆಳದ ಗುಂಡಿ ತೋಡಲಾಗಿದೆ. ಗುಂಡಿಯಲ್ಲಿ ಮಳೆ ನೀರು, ಒಸರು ನೀರು ಸಂಗ್ರಹಗೊಂಡಿದ್ದು, ಜಲಾಶಯದಂತೆ ಗೋಚರಿಸುತ್ತಿದೆ.

ಕೇಳುವವರೇ ಇಲ್ಲದ ಸ್ಥಿತಿ
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಆವಧಿಯಲ್ಲಿ ಸರ್ಕಾರಿ ಮಹಿಳಾ ಆಸ್ಪತ್ರೆಯನ್ನು ಬಿ.ಆರ್. ಶೆಟ್ಟಿ ನೇತೃತ್ವದ ಬಿಆರ್ಎಸ್ ಲೈಫ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಹಳೆಯ ಆಸ್ಪತ್ರೆ ಜಾಗದಲ್ಲಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಅದರ ಲಾಭಾಂಶದಲ್ಲಿ ಬಿಆರ್ಎಸ್ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯನಿರ್ವಹಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಬಿಆರ್ಎಸ್ ಸಂಸ್ಥೆ 3 ನೆಲ ಅಂತಸ್ತು ನಿರ್ಮಾಣಕ್ಕೆ ಮುಂದಾದ ಕಾರಣ ಝಡ್ ಆರ್ ಆರ್ ನಿಯಮದಂತೆ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿತ್ತು. ಇದರಿಂದ 2 ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ನೆಲ ಮಹಡಿಗಾಗಿ ಭೂಮಿ ಅಗೆದುಬಿಟ್ಟಿದ್ದರಿಂದ ನೀರು ತುಂಬಿ ನಗರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಬಿಆರ್ಎಸ್ ಸಂಸ್ಥೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವುದರಿಂದ ಈ ಸಮಸ್ಯೆ ಬಗ್ಗೆ ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ನೀರು ತೆಗೆಯುವವರಿಲ್ಲ
ಕಳೆದ ವರ್ಷ ಮಳೆಗಾಲದಲ್ಲೂ ನೀರು ತುಂಬಿತ್ತು. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆ ಪಡೆದ ಕಂಪನಿ ದೊಡ್ಡ ದೊಡ್ಡ ಪಂಪ್ಗಳನ್ನು ಬಳಸಿ ನೀರು ಖಾಲಿ ಮಾಡಿತ್ತು. ಆದರೆ ಈ ಬಾರಿ ನೀರು ಖಾಲಿ ಮಾಡುವವರೂ ಇಲ್ಲದಾಗಿದೆ. ಸುತ್ತಮುತ್ತಲಿನ ಕಟ್ಟಡಗಳ ಅಂಚಿನ ಸುತ್ತಲೂ ಮಣ್ಣು ಕುಸಿಯದಂತೆ ತಡೆಯೊಡ್ಡಲು ಯಾವುದೇ ತಡೆಗೋಡೆ ನಿರ್ಮಿಸಿಲ್ಲ. ಜೇಡಿಮಣ್ಣು ಮೆದುವಾಗಿರುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇದೆ. ಈ ಸ್ಥಳಕ್ಕೆ ತಾಗಿಕೊಂಡು ವಾಣಿಜ್ಯ ಸಂಕೀರ್ಣಗಳು, ಬಹುಮಹಡಿ ಕಟ್ಟಡ, ವಾಸದ ಮನೆಗಳು ಇವೆ. ಅಕಸ್ಮಾತ್ ಅತಿ ಮಳೆಯಿಂದ ನೀರಿನ ಮಟ್ಟ ಏರಿಕೆಯಾದರೆ ಅಕ್ಕ ಪಕ್ಕದ ಕಟ್ಟಡಗಳು ಉರುಳಿ ಬೀಳುವ ಅಪಾಯವಿದೆ. ಕೋಟೆ ಕೊಳ್ಳೆಹೊಡೆದ ಮೇಲೆ ದಿಡ್ಡಿಬಾಗಿಲು ಹಾಕುವ ಬದಲು ಜಿಲ್ಲಾಡಳಿತ ಹಾಗೂ ನಗರಸಭೆಗೆ ಮುನ್ನೆಚ್ಚರಿಕೆಯಿಂದ ದುರಂತಗಳನ್ನು ತಪ್ಪಿಸಬಹುದು ಎಂಬ ಅರಿವು ಮೂಡಿದರೆ ಉತ್ತಮ.
ಆಸ್ಪತ್ರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನೀರು ತುಂಬಿರುವ ಬಗ್ಗೆ ಬಿಆರ್ಎಸ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಆರೋಗ್ಯ ಇಲಾಖೆಗೂ ಪತ್ರ ಬರೆದು ಮಾಹಿತಿ ನೀಡಲಾಗಿದೆ. ನೀರು ತೆಗೆದರೆ ಹೆಚ್ಚು ಅಪಾಯ, ಮಣ್ಣು ಸವೆದು ಕುಸಿಯುವ ಭೀತಿ ಇದೆ ಎಂಬುದಾಗಿ ಇಂಜಿನಿಯರ್ಗಳು ಆಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಯಥಾಸ್ಥಿತಿ ಕಾಪಾಡಲಾಗಿದೆ.
ಉದಯ್ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರಸಭೆ
ಆಸ್ಪತ್ರೆ ನೆಲ ಮಹಡಿ ನಿರ್ಮಾಣ ಕಾಮಗಾರಿ ಅಪೂರ್ಣವಾಗಿದ್ದು, ಈ ಜಾಗದ ಸುತ್ತಲು ಎತ್ತರದವರೆಗೆ ಕಬ್ಬಿಣದ ಶೀಟಿನ ಬೇಲಿ ಹಾಕಿರುವುದರಿಂದ ಇಲ್ಲಿಯ ಸಮಸ್ಯೆ ಅಧಿಕಾರಿಗಳು, ಸಾರ್ವಜನಿಕರ ಅರಿವಿಗೆ ಬಾರದೆ ಅಜ್ಞಾತವಾಗಿದೆ. ತುರ್ತಾಗಿ ಜಿಲ್ಲಾಡಳಿತ, ನಗರಸಭೆ ಭೂ ವಿಜ್ಞಾನಿ, ಭೂಗರ್ಭ ಶಾಸ್ತ್ರಜ್ಞರ ಮೂಲಕ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ನಿತ್ಯಾನಂದ ಒಳಕಾಡು, ಸದಸ್ಯ, ಜಿಲ್ಲಾ ನಾಗರಿಕ ಸಮಿತಿ