ಭಟ್ಕಳ: ಇಲ್ಲಿನ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ವಸ್ಯ ವ್ರತದಲ್ಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಕೊನೆಯ ದಿನದ ಸೀಮೋಲ್ಲಂಘನ ಕಾರ್ಯಕ್ರಮ ಶುಕ್ರವಾರ ತಾಲೂಕಿನ ಸಾರದಹೊಳೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 9.30ಕ್ಕೆ ಕರಿಕಲ್ ಧ್ಯಾನ ಮಂದಿರದಿಂದ ತೆರೆದ ವಾಹನದ ಮೂಲಕ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಶ್ವೇತ ವಸ್ತ್ರ ಧರಿಸಿ ನೂರಾರು ಸಂಖ್ಯೆಯ ಬೈಕ್ ಸವಾರರು ಮೆರವಣಿಗೆಯಲ್ಲಿ ಶಿರಾಲಿ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಬಳಿಕ ಶ್ರೀಗಳು ಸಾರದಹೊಳೆ ನದಿ ತೀರದಲ್ಲಿ ಗಂಗಾಪೂಜೆ ಮಾಡುವ ಮೂಲಕ ಗಂಗಾರತಿ ಪೂಜೆ ಯಶಸ್ವಿಗೊಳಿಸಿದರು. ಶ್ರೀ ಹನುಮಂತ ದೇವರಿಗೆ ಶ್ರೀಗಳ ಸಮ್ಮುಖದಲ್ಲಿ ಪೂಜೆ ನಡೆಯಿತು. ನಂತರ ಸಾರದಹೊಳೆ ಹಳೇ ಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯು ಶ್ರೀಗಳನ್ನು ಗೌರವಿಸಿತು.
ಸಚಿವ ಮಂಕಾಳ ವೈದ್ಯ, ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ಹಳೇ ಕೋಟೆ ಹನುಮಂತ ದೇವಸ್ಥಾನ ಅಧ್ಯಕ್ಷ ಹಾಗೂ ನಾಮಧಾರಿ ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.