ಚಿಕ್ಕಬಳ್ಳಾಪುರ: ಸಮರ್ಥ್ ಚಾಂಪಿಯನ್ ಶಿಪ್ ಅಂಧರ ಟ್ವಿ20 ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ಭಾರತ ತಂಡವು ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮುದ್ದೇನಹಳ್ಳಿಯಲ್ಲಿನ ಸಾಯಿಕೃಷ್ಣನ್ ಮೈದಾನದಲ್ಲಿ ದಣ ಆಫ್ರಿಕಾ ಹಾಗೂ ಭಾರತದ ನಡುವೆ 5 ಪಂದ್ಯಗಳ ಕ್ರಿಕೆಟ್ ಟೂರ್ನಿಮೆಂಟ್ ನಡೆಯಿತು. ಇದರ ಎಲ್ಲ ಪಂದ್ಯಗಳಲ್ಲೂ ಭಾರತ ತಂಡವು ಗೆಲುವಿನ ನಗೆ ಬೀರಿದೆ.
ಶುಕ್ರವಾರ ನಡೆದ ಐದನೇ ಹಾಗೂ ಅಂತಿಮ ಟ್ವಿ 20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಫ್ರಿಕಾ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತು. ಇದರಲ್ಲಿ ಲೆಸೆಡಿ ಎನ್ ಲೆಸುಫಿ 54 (47 ಎಸೆತ) ರನ್ ಗಳೊಂದಿಗೆ ಅರ್ಧ ಶತಕ ಬಾರಿಸಿದರು. ಎದುರಾಳಿ ನೀಡಿದ 143 ರನ್ ಗುರಿಯನ್ನು ಬೆನ್ನೆತ್ತಿದ ಭಾರತವು ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿತು. ಇದರ ನಡುವೆ ನಾಯಕ ದುರ್ಗಾ ರಾವ್ 60 ರನ್ (30 ಎಸೆತ)ಹಾಗೂ ದಾಂಡಿಗ ಲಾಲ್ ಪ್ರಸಾದ್ ಸೋರೆ 62 ರನ್ (41 ಎಸೆತ) ಇಬ್ಬರು 122 ರನ್ ಗಳ ಜೊತೆಯಾಟದಿಂದ 13 ಓವರ್ ಗಳಲ್ಲಿ ಗೆಲುವು ಕಂಡಿತು. ಇನ್ನು ಕ್ರೀಡಾಂಗಣದಲ್ಲಿ ನಡೆದ 5 ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸಿದ ಭಾರತವು ಸಮರ್ಥ್ ಅಂಧರ ಕ್ರಿಕೆಟ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
*ಕ್ರೀಡೆ ಶಕ್ತಿಯ ಪ್ರಬಲ ಅಭಿವ್ಯಕ್ತಿ
ಕ್ರೀಡೆಯು ದೈಹಿಕ ಇತಿ ಮಿತಿಗಳನ್ನು ಮೀರಿ ಮೈದೋರಿದಾಗ ಮಾನವ ಘನತೆ ಮತ್ತು ಆಂತರಿಕ ಶಕ್ತಿಯ ಪ್ರಬಲ ಅಭಿವ್ಯಕ್ತಿ ಎಂದು ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದ ಅವರು, ಒಳ್ಳೆಯ ಚಟುವಟಿಕೆಯು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
1983 ರ ವಿಶ್ವಕಪ್ ವಿಜೇತ ಭಾರತದ ತಂಡದ ವಿಕೆಟ್ ಕೀಪರ್ ಸೈಯದ್ ಕಿಮಾರ್ನಿ,ಭಾರತದ ಮೊದಲ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಸಮಾಜದ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಹುಂಡೈ ಸಂಸ್ಥೆಯ ಸಮರ್ಥನಂ ಟ್ರಸ್ಟ್ನ ಸ್ಥಾಪಕ ಹಾಗೂ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಜಿ. ಕಿವಡಸಣ್ಣವರ್, ಹುಂಡೈ ಮೋಟಾರ್ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಜೇ-ಯಂಗ್ ಪಾರ್ಕ್ಮತ್ತಿತರರು ಇದ್ದರು.