
ಶಿವಮೊಗ್ಗ: ಗೋಪಾಳ ಬಡಾವಣೆಯಲ್ಲಿ ಒಳಾಂಗಣ ಕ್ರೀಡಾಂಗಣ ಟೆನ್ನಿಸ್ ಕೋರ್ಟ್, ಈಜುಕೊಳ ಮುಂತಾದವುದನ್ನು ನಿರ್ಮಿಸುವ ಮೂಲಕ ಬಿಜೆಪಿ ಸರ್ಕಾರ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ವಾಯುವಿಹಾರಿಗಳು, ಪಾದಚಾರಿಗಳು, ಕ್ರೀಡಾಪಟುಗಳ ಬಳಿ ಮತಯಾಚಿಸಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ನೆಹರು ಕ್ರೀಡಾಂಗಣ ಸಾಕಷ್ಟು ಅಭಿವೃದ್ಧಿಯಾಗಿದೆ. ಆ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದೆ ಎಂದರು.
ವಾಜಪೇಯಿ ಬಡಾವಣೆಯಲ್ಲಿ ಹಾಕಿ ಸ್ಟೇಡಿಯಂ ಸೇರಿ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನೆಹರು ಒಳಾಂಗಣ ಕ್ರೀಡಾಂಗಣವನ್ನು ಕೂಡ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಇದು ಈ ಹಿಂದೆ ಇದ್ದ ಬಿಜೆಪಿ ಸರ್ಕಾರಕ್ಕೆ ಕ್ರೀಡೆಯ ಬಗ್ಗೆ ಇರುವ ಆಸಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಕೇವಲ ಜಿಲ್ಲಾ ಕೇಂದ್ರಕ್ಕೆ ಮಾತ್ರ ನಮ್ಮ ಸರ್ಕಾರ ಕ್ರೀಡಾಂಗಣ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿಲ್ಲ, ಶಿಕಾರಿಪುರ, ಶಿರಾಳಕೊಪ್ಪ ಸೇರಿ ತಾಲೂಕು ಕೇಂದ್ರಗಳಲ್ಲೂ ಕ್ರೀಡಾಪಟುಗಳಿಗೆ ಉತ್ತೇಜನ ಕೊಡುವಂತಹ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ನೆಹರು ಕ್ರೀಡಾಂಗಣವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಈ ಬಾರಿ ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರವನ್ನು ಮುಂದಿಟ್ಟುಕೊಂಡು ನಡೆಯುತ್ತಿದೆ. ಪ್ರತಿಯೊಬ್ಬ ಕೂಲಿ ಕಾರ್ಮಿಕ, ಆಟೋಚಾಲಕ, ಪಾನಿಪೂರಿ ಅಂಗಡಿಯವರು ಹೀಗೆ ಎಲ್ಲ ಸಮುದಾಯದವರು ಈ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಕು ಎಂದು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮೋದಿ ಅವರಿಗೆ ದೊಡ್ಡ ಮಟ್ಟದ ಬೆಂಬಲವನ್ನು ಈ ಚುನಾವಣೆಯಲ್ಲಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್, ಬಾಳೆಕಾಯಿ ಮೋಹನ್, ಮಹೇಶ್ಮೂರ್ತಿ, ವಿನೋದ್ಕುಮಾರ್, ದೀನದಯಾಳ್, ಮಾಲತೇಶ್, ಸೋಮೇಶ್, ಭಾನುಮತಿ, ಸಂತೋಷ್ ಬಳ್ಳೆಕೆರೆ, ರಾಹುಲ್ ಬಿದರೆ, ರುದ್ರೇಶ್, ಪ್ರಭಾಕರ್, ಮೋಹನ್, ದಿನೇಶ್, ಸತೀಶ್ ಶೆಟ್ಟಿ ಇತರರಿದ್ದರು.
ಮತ್ತೊಮ್ಮೆ ರಾಘಣ್ಣ, ಮತ್ತೊಮ್ಮೆ ಮೋದಿ
ಹೊಳೆ ಬಸ್ ನಿಲ್ದಾಣದಲ್ಲಿ ಬೀದಿಬದಿ ವ್ಯಾಪಾರಸ್ಥರನ್ನು ಹಾಗೂ ಕಟ್ಟಡ ಕಾರ್ಮಿಕರನ್ನು ಭೇಟಿ ಮಾಡಿ ಮತಯಾಚಿಸಿದರು. ಬಳಿಕ ಕುಂಬಾರಗುಂಡಿ, ಮಂಜುನಾಥ ಟಾಕೀಸ್ ರಸ್ತೆ, ಬಟ್ಟೆ ಮಾರುಕಟ್ಟೆ, ಅಲ್ಲಮಪ್ರಭು ಮೈದಾನ ಈ ಭಾಗದಲ್ಲಿ ಮತಯಾಚನೆಗೆ ತೆರಳಿದಾಗ ಅಲ್ಲಿ ನೆರೆದಿದ್ದವರು ರಾಘವೇಂದ್ರ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲದೇ ಮತ್ತೊಮ್ಮೆ ರಾಘಣ್ಣ, ಮತ್ತೊಮ್ಮೆ ಮೋದಿ ಎಂಬ ಘೋಷಣೆ ಕೂಗಿದರು. ಬಳಿಕ ಸಂಸದರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.