ತೇರದಾಳ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಜಿಟಿ,ಜಿಟಿ ಸುರಿಯುವ ಮಳೆಯಲ್ಲಿಯೇ ಪರಸ್ಪರ ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಮಧ್ಯಾಹ್ನದಿಂದಲೇ ಯುವಕರು ಬೈಕ್ ಗಳ ಮೂಲಕ ಬಿಜೆಪಿ ಧ್ವಜ ಕಟ್ಟಿಕೊಂಡು ಘೋಷಣೆಗಳನ್ನು ಕೂಗುತ್ತ ಪಟ್ಟಣದಲ್ಲಿ ಸಾಗಿದರು. ತದನಂತರ ಸ್ಥಳೀಯ ಹನುಮಾನ ದೇವಸ್ಥಾನ ಬಳಿಯ ವೃತ್ತದಲ್ಲಿ ಸೇರಿದ ಬಿಜೆಪಿ ಮುಖಂಡರು ವಾದ್ಯಗಳೊಂದಿಗೆ ಗೆಲುವಿನ ಖುಷಿಯನ್ನು ಹಂಚಿಕೊಂಡರು. ಸ್ಥಳೀಯ ಮುಖಂಡರು ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಪಟ್ಟಣದಲ್ಲಿ ಪೊಲೀಸರು ಬಿಗಿ ಬಂದೊಬಸ್ತ್ ಕೈಗೊಂಡಿದ್ದರು.