ಲಕ್ಷ್ಮೇಶ್ವರ: ಕಾರ್ಯಕರ್ತರ ಶ್ರಮ, ತ್ಯಾಗ ಹಾಗೂ ಸಮರ್ಪಣಾ ಮನೋಭಾವದಿಂದಾಗಿ ಬಿಜೆಪಿಯು ಜಗತ್ತಿನಲ್ಲಿಯೇ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿಗೆ ಕಾರ್ಯಾಕರ್ತರೇ ಜೀವಾಳವಾಗಿದ್ದಾರೆ. ಅನೇಕ ನೇತಾರರ ರಾಷ್ಟ್ರ ›ಹಿತದ ಚಿಂತನೆಯಿಂದಾಗಿ ರಚನೆಯಾದ ಭಾರತೀಯ ಜನತಾ ಪಾರ್ಟಿಯು ಹೆಮ್ಮರವಾಗಿ ಬೆಳೆದು, ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವೆಂಬ ಖ್ಯಾತಿ ಪಡೆದಿದೆ. ಪಕ್ಷದ ಬಲವರ್ಧನೆಗೆ ಕೊಡುಗೆ ನೀಡಿರುವ ಸಮಸ್ತ ಮುಖಂಡರು, ಕಾರ್ಯಕರ್ತರನ್ನು ಸ್ಮರಿಸಬೇಕು. ವಿಶ್ವದ ಅತಿದೊಡ್ಡ ರಾಜಕೀಯ ಕಾರ್ಯಕರ್ತರು, ಸದಸ್ಯರನ್ನು ಹೊಂದಿರುವ ಭಾರತೀಯ ಜನತಾ ಪಕ್ಷ ಸ್ಥಾಪನೆಗೊಂಡು 45 ವರ್ಷಗಳು ಕಳೆದಿವೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಶಾಮಾಪ್ರಸಾದ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿಯವರಂಥ ಮಹಾನ್ ನಾಯಕರ ತ್ಯಾಗ, ಸಂಘಟನೆ ಸ್ಮರಿಸಿದರು.
ಮಹಾನ್ ನಾಯಕರ ತ್ಯಾಗ, ಬಲಿದಾನ, ನೋವು, ಹತಾಸೆ, ಸೋಲುಗಳು, ಟೀಕೆಗಳಿಗೆ ಎದೆಗುಂದದೆ ಸೈದ್ಧಾಂತಿಕ ಹೋರಾಟದಿಂದ ಪಕ್ಷ ಹೆಮ್ಮರವಾಗಿ ಬೆಳೆದಿದೆ. ಈ ದಿನದಂದು ಒಗ್ಗಟ್ಟಿನಿಂದ ಪಕ್ಷದ ವಿಜಯಕ್ಕೆ ಸಂಕಲ್ಪ ಮಾಡೋಣ. ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ಪ್ರಧಾನಿ ನರೇಂದ್ರ ಮೋದಿಯವರು ನನಸು ಮಾಡುತ್ತಿದ್ದಾರೆ ಎಂದರು.
ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ರಾಮು ಪೂಜಾರ, ಶಿವಯೋಗಿ ಅಂಕಲಕೋಟಿ, ಬಿ.ಡಿ. ಪಲ್ಲೇದ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಗದಗ, ಸತೀಶ ಕಾಡಣ್ಣವರ, ವಿಜಯ ಕುಂಬಾರ, ಪ್ರವೀಣ ಬೋಮಲೆ ಅನಿಲ ಮುಲಗುಂದ, ಸಂತೋಷ ಜಾವೂರ, ಬಸವರಾಜ ಚಕ್ರಸಾಲಿ, ಭೀಮಪ್ಪ ಯಂಗಾಡಿ ಇತರರಿದ್ದರು.