ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಪಕ್ಷದ ಹಿತ ದೃಷ್ಟಿಯಿಂದ, ಸರ್ಕಾರದ ಹಿತ ದೃಷ್ಟಿಯಿಂದ ಏನು ತೀರ್ಮಾನ ಮಾಡಬೇಕೋ ಅದನ್ನು ವರಿಷ್ಠರು ಮಾಡುತ್ತಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ಸಚಿವ ಅಮಿತ್ ಷಾ ಜತೆ ಮಾತನಾಡಿದ್ದಾರೆ ಎಂದರು.
ಸಿ.ಎಂ. ಯಡಿಯೂರಪ್ಪ ಅವರು ದಾವೋಸ್ನಿಂದ ಮರಳಿದ ಕೂಡಲೇ ತ್ವರಿತವಾಗಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಈ ಮಧ್ಯೆ ದೆಹಲಿಗೆ ತೆರಳಿ ಪಕ್ಷದ ಹೊಸ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.
ಸಂಜಯ್ ರಾವತ್ ಹೇಳಿಕೆಗೆ ಕಿಡಿ
ಮಹಾರಾಷ್ಟ್ರ ಮತ್ತು ಕರ್ನಾಟಕ ವಿಚಾರದಲ್ಲಿ ಈಗಾಗಲೇ ಮಹಾಜನ್ ವರದಿ ಬಂದಿದೆ. ಪದೇಪದೆ ರಾಜಕೀಯ ಪ್ರೇರಿತವಾಗಿ ಪ್ರಚೋದಿಸುವುದನ್ನು ಅವರು ಬಿಡಬೇಕು. ಮತ್ತೆ ಮತ್ತೆ ಕೆದಕಬಾರದು. ಇತ್ಯರ್ಥವಾಗಿರುವ ವಿಚಾರ ಕೈಗೆತ್ತಿಕೊಂಡು ಭಾವನಾತ್ಮಕವಾಗಿ ಕೆರಳಿಸಿ ವಿವಾದ ಮಾಡಬಾರದು. ಸಾಕಷ್ಟು ತಿಳಿವಳಿಕೆ ಇರುವ ರಾವತ್ ಅವರಂಥವರು ಹೀಗೆ ಮಾತನಾಡಬಾರದು ಅಶ್ವಥ್ ನಾರಾಯಣ ಹೇಳಿದರು.