ಅರಕೇರಾ: ಸಮೀಪದ ವಾಚಾನಾಯ್ಕ ತಾಂಡಾ ಬಳಿ ಗುರುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಗಲಗ ಗ್ರಾಮದ ರಮೇಶ ದೊಡ್ಡ ಶಿವಪ್ಪ (35) ಮೃತ. ಸವಾರ ನರಸಣ್ಣ ಯಲ್ಲಪ್ಪ ತಲೆಗೆ ಪೆಟ್ಟಾಗಿದ್ದು, ರಿಮ್ಸ್ಗೆ ದಾಖಲಿಸಲಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ಬದುಕುಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಗಲಗ ಗ್ರಾಮದಿಂದ ರಾಯಚೂರಿಗೆ ತೆರಳುವಾಗ ವಾಚಾನಾಯ್ಕ ತಾಂಡಾ ಬಳಿ ಭತ್ತ ಕಟಾವು ಯಂತ್ರ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ.
ರಮೇಶ ಅವರು ಆಲ್ಕೋಡ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಂಗ್ಲ ಭಾಷೆ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷವಷ್ಟೇ ಮದುವೆಯಾಗಿತ್ತು, ಒಂದು ತಿಂಗಳ ಗಂಡು ಮಗುವಿದೆ. ಜಾಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಐ ಗುಂಡೂರಾವ್, ಎಎಸ್ಐ ರಾಜಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.