ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜ್ಞಾನದ ಬೆಳಕನ್ನು ಜಗತ್ತಿಗೇ ನೀಡಿದಂತಹ ಮಹಾನ್ ವ್ಯಕ್ತಿ ಗೌತಮ ಬುದ್ಧರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ’ಭಗವಾನ್ ಬುದ್ಧ’ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಭಗವಾನ್ ಬುದ್ಧರ ಜ್ಞಾನ ಇಡೀ ಜಗತ್ತಿಗೆ ಪಸರಿಸಿದೆ. ಅವರ ಶಾಂತಿ, ಸಹನೆ, ಸಹಬಾಳ್ವೆ ಸಂದೇಶಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಅವರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಬೇಕು ಎಂದು ಸಲಹೆ ನೀಡಿದರು.
ಗೌತಮ ಬುದ್ಧರ ಜಯಂತಿಯನ್ನು ಸರ್ಕಾರದಿಂದ ಪ್ರಥಮವಾಗಿ ಆಚರಿಸಲಾಗುತ್ತಿದೆ. ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯವನ್ನು ಸ್ಮರಿಸುವ ಉದ್ದೇಶದಿಂದ ಬುದ್ಧ ಜಯಂತಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜ್ಞಾನೋದಯ, ಕರುಣೆ ಮತ್ತು ಶಾಂತಿಯನ್ನು ಪರಿಗಣಿಸಲು ಇದು ಒಂದು ದಿನವಾಗಿದೆ. ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ಭೋದಿಸಿದ ಭಗವಾನ್ ಬುದ್ಧರ ತತ್ವ ಬೋಧನೆಗಳನ್ನು ಅರಿತರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯೂರಲಿದೆ ಎಂದರು.

ಸಂದೇಶದ ವಿವರಣೆ: ದಿವ್ಯ ಸಾನಿಧ್ಯರಾಗಿದ್ದ ಬೌದ್ಧ ಬಿಕ್ಕುಣಿ ಮಾತಾ ಮೈತ್ರಿ ಮಾತನಾಡಿ, ಬುದ್ಧನು ಹೇಳಿರುವ ಬೌದ್ಧ ಧರ್ಮದ 3 ಸಂದೇಶಗಳ ಬಗ್ಗೆ ಕಾರ್ಯಕ್ರಮದಲ್ಲಿ ವಿವರಣೆ ನೀಡಿದರು. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಅರಿತರೇ ಅದು ಮನುಷ್ಯರ ಮನಸ್ಸಿನ ಶುದ್ಧಿ ಮತ್ತು ಇದರಿಂದ ದುಃಖ ನಿವಾರಣೆ ಹೊಂದಲು ಸಾಧ್ಯವಾಗುತ್ತದೆ ಎಂದರು. ಬುದ್ಧನ ಸಂದೇಶಗಳು ಸರ್ವಕಾಲೀಕವಾಗಿದೆ ಮಹಾತ್ಮ ಬುದ್ಧನ ಬೋಧನೆಗಳು ಜೀವನದಲ್ಲಿ ಅಳವಡಿಸಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬುದ್ಧನ ಜೀವನ ಚರಿತ್ರೆ: ಪ್ರಾಚೀನ ಗ್ರಂಥಗಳ ಪ್ರಕಾರ, ಭಗವಾನ್ ಬುದ್ಧನು ರಾಜಕುಮಾರ ಸಿದ್ದಾರ್ಥ ಆಗಿ ಜನಿಸಿ, ಯಾವಾಗಲೂ ಐಷಾರಾಮಿ ಮತ್ತು ಭೌತಿಕ ಸಂತೋಷಗಳಿಂದ ತನ್ನ ಜೀವನವನ್ನು ಸಾಗಿಸುತ್ತಿದ್ದನು ಎಂದು ವಿಶೇಷ ಉಪನ್ಯಾಸ ನೀಡಿದ ವಕೀಲ ಮಹೇಶ್ ದಾಸ್ ಬುದ್ಧನ ಜೀವನ ಚರಿತ್ರೆಯನ್ನು ಪರಿಚಯಿಸಿ ಮಾತನಾಡಿದರು. ಒಮ್ಮೆ, ಬುದ್ಧನು ಒಬ್ಬ ಮುದುಕ, ಅಸ್ವಸ್ಥ ಮತ್ತು ಶವವನ್ನು ನೋಡಿದನು. ಒಬ್ಬ ಮನುಷ್ಯನ ದುಃಖದ ಹಿಂದಿನ ಕಾರಣಗಳನ್ನು ಹುಡುಕುವ ಪ್ರಚೋದನೆಯನ್ನು ಇದರಿಂದ ಪಡೆದುಕೊಂಡರು. ನಂತರ ಅವರು ಉತ್ತರಗಳನ್ನು ಪಡೆಯುವ ಹುಡುಕಾಟದಲ್ಲಿ 29 ನೇ ವಯಸ್ಸಿನಲ್ಲಿ ತನ್ನ ಮನೆಯನ್ನು ತೊರೆದು ಆಲದ ಮರದ ಕೆಳಗೆ ಕುಳಿತು ಜ್ಞಾನೋದಯವನ್ನು ಪಡೆಯಲು ಪ್ರಯತ್ನಿಸಿದರು. ಆಳವಾದ ಧ್ಯಾನದ ನಂತರ ಅವರು ತಮ್ಮ 35ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದುಕೊಂಡು ಮಹಾತ್ಮ ಬುದ್ಧ ಎಂದು ಕರೆಸಿಕೊಂಡರು ಎಂದು ವಿವರಿಸಿದರು. ಈ ಜ್ಞಾನದಿಂದ ಮಹಾತ್ಮ ಬುದ್ಧನು ಸಾಕಷ್ಟು ಬೋಧನೆಗಳನ್ನು ನೀಡಿದನು. ಅದನ್ನು ಎಲ್ಲರು ತಿಳಿದುಕೊಳ್ಳಬೇಕು ಈ ಮೂಲಕ ಬುದ್ಧನ ತತ್ಪಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.