ಮೈಸೂರು: ವಿಶ್ವಕ್ಕೆ ಸಮಾನತೆಯ ಅಡಿಪಾಯ ಹಾಕಿದ್ದೇ ಡಾ.ಬಿ.ಆರ್.ಅಂಬೇಡ್ಕರ್ ಎಂದು ಹಿರಿಯ ಸಮಾಜವಾದಿ ಪಿ.ಜಿ.ಆರ್.ಸಿಂಧ್ಯಾ ಬಣ್ಣಿಸಿದರು.
ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಚಿಂತನೆಗಳು, ಸಾಮಾಜಿಕ ಕಾಳಜಿ, ಅಪಾರ ವಿದ್ವತ್ ಜ್ಞಾನದಿಂದಾಗಿ ಅವರಿಗೆ ಸಂವಿಧಾನ ರಚನೆ ಮಾಡುವಂತಹ ಸುವರ್ಣ ಅವಕಾಶ ಒದಗಿಬಂದಿತ್ತು. ಅದನ್ನು ಸದುಪಯೋಗ ಪಡಿಸಿಕೊಂಡ ಅವರು ವಿಶ್ವ ಮೆಚ್ಚುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಆ ಮೂಲಕ ವಿಶ್ವಕ್ಕೆ ಸಮಾನತೆ ಅಡಿಪಾಯ ಹಾಕಿಕೊಟ್ಟು, ರಾಷ್ಟ್ರ ಮಾತ್ರವಲ್ಲ, ವಿಶ್ವ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.
ದೇಶದ ಮಹಾ ನಾಯಕರಿಗೆ ಪ್ರೇರಣೆ ಕೊಟ್ಟವರು ಅಂಬೇಡ್ಕರ್. ಅವರ ಹೋರಾಟದ ಹಾದಿ, ವಿಚಾರವನ್ನು ವಿಮರ್ಶೆ ಮಾಡಿ ಅಭಿವ್ಯಕ್ತಿಗೊಳಿಸುತ್ತಿದ್ದ ಬಗೆ ಎಲ್ಲ ನಾಯಕರಿಗೆ ದಾರಿದೀಪವಾಗಿ ತೋರುತ್ತದೆ ಎಂದರು.
ಇಂದು ನಾವು ಸಮಾಜದಲ್ಲಿ ಎಲ್ಲ ಸೌಲಭ್ಯ ಅನುಭವಿಸುತ್ತಿದ್ದೇವೆ ಎಂದರೆ ಅದು ಸಂವಿಧಾನದಿಂದ ಮಾತ್ರ. ನಮ್ಮ ದೇಶದ ಸಂವಿಧಾನದಿಂದ ಸಮಾನತೆಯ ಅಂಶವನ್ನು ಇಡೀ ಪ್ರಪಂಚವೇ ಒಪ್ಪಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಅಲುಗಾಡಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಹಂತ ಹಂತವಾಗಿ ಸಂವಿಧಾನ ತೆಗೆದು ಹಾಕುವ ಅವರ ವಿಫಲ ಪ್ರಯತ್ನ ಎಂದಿಗೂ ನಡೆಯಬಾರದು ಎಂದು ಹೇಳಿದರು.
ಈ ಷಡ್ಯಂತ್ರದ ವಿರುದ್ಧ ಹೋರಾಟಗಳು ನಿರಂತರವಾಗಿರಬೇಕು. ಡಾ.ಅಂಬೇಡ್ಕರ್ ಹೇಳಿರುವ ವಿಚಾರಗಳು ಸಾರ್ವಕಾಲಿಕವಾಗಿ ಒಪ್ಪುವಂತಹದ್ದು. ಅಂಬೇಡ್ಕರ್ ವಿಚಾರಗಳನ್ನು ಚೆನ್ನಾಗಿ ಓದಿಕೊಳ್ಳಬೇಕು. ಆಗ ಮಾತ್ರ ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವಕೀಲ ಸುಧೀರ್ಕುಮಾರ್ ಮೊರಳ್ಳಿ ಮಾತನಾಡಿ, ಅಂಬೇಡ್ಕರ್ ತೀರಿಹೋದ ದಿನವಿಡೀ ಪ್ರಪಂಚವೇ ಸಂತಾಪ ಸೂಚಿಸಿತ್ತು. ಅವರ ಕುಟುಂಬ ವರ್ಗ ಅವರನ್ನು ಅವರ ಕರ್ಮ ಭೂಮಿಗೆ ಕೊಂಡೊಯ್ಯಬೇಕೋ ಅಥವಾ ದೆಹಲಿಯಲ್ಲೇ ಅಂತ್ಯಸಂಸ್ಕಾರ ನಡೆಸಬೇಕು ಎಂಬ ಚರ್ಚೆ ಮಾಡಿತು. ಈಗ ಬಿಜೆಪಿ ಅದನ್ನು ತಿರುಚಿ ಹೇಳುತ್ತಿದೆ ಟೀಕಿಸಿದರು.
ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಬಿಜೆಪಿ ಈಗ ಸಂವಿಧಾನ ಪುಸ್ತಕ ಹಿಡಿದು ಕಾರ್ಯಾಗಾರಗಳನ್ನು ನಡೆಸುತ್ತಿದೆ. ಗಾಂಧಿಯನ್ನು ಕೊಂದಾಗ ಸಂಭ್ರಮಿಸಿದ್ದ ಇದೇ ಜನರೇ ಅಂಬೇಡ್ಕರ್ ತೀರಿ ಹೋದಾಗಲೂ ಸಂಭ್ರಮಸಿದ್ದರು. ಇಂತಹ ಮನಸ್ಥಿತಿ ಇರುವವರನ್ನು ಸಮಾಜ ಎಂದಿಗೂ ಒಪ್ಪಿಕೊಳ್ಳಬಾರದು ಎಂದರು.
ಅದಿವಾಸಿಗಳಿಗೆ ಆಸ್ತಿಯ ಹಕ್ಕು ಕೊಟ್ಟ ಕಾರಣದಿಂದಾಗಿ ಈಗಿನ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಅಂಬೇಡ್ಕರ್ ಆಶಯಗಳಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸಂವಿಧಾನಬದ್ಧ ಸಮ ಸಮಾಜದ ನಿಜ ಪಕ್ಷವಾಗಿದೆ. ಈಗ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಆದರೆ, ಅಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಜನರಲ್ಲಿ ಕೂಡ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ್ಕುಮಾರ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಭಾರತಿಶಂಕರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಶಿವಣ್ಣ ಗುಡ್ಡಪ್ಪ, ಎಂ. ಶಿವಪ್ರಸಾದ್, ಮೈಸೂರು ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಸಿದ್ದರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ರಾಮು, ಮಾಜಿ ಮೇಯರ್ಗಳಾದ ಬಿ.ಕೆ.ಪ್ರಕಾಶ್, ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಹುಣಸೂರು ಬಸವಣ್ಣ, ಗಿರೀಶ್, ಯೋಗೇಶ್, ಈಶ್ವರ್ಚಕ್ಕಡಿ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ ಇತರರಿದ್ದರು.
