ಭರಮಸಾಗರ: ಪಾಲಕರ ಶ್ರಮಕ್ಕೆ ತಕ್ಕ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸೂಕ್ತ ಗುರಿ ಇರಬೇಕು ಎಂದು ಹೊಸದುರ್ಗ ಕುಂಚಿಟಿಗರ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಇಲ್ಲಿನ ಎಸ್ಎಂಎಲ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ದಶಕದ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ದಿಶೆಯಲ್ಲಿ ಗುರಿ ಮುಖ್ಯ. ಅದನ್ನು ತಲುಪಲು ಸದಾ ಹಾತೊರೆಯಬೇಕು. ವಿದ್ಯೆಯಿಂದ ಮಾತ್ರ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಮಾತನಾಡಿ, ಎಲ್ಲರ ಸಹಕಾರದಿಂದ ಸಂಸ್ಥೆ ದಶಕದ ಸಂಭ್ರಮ ಆಚರಿಸುತ್ತಿದೆ ಎಂದರು.
ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಶಶಿ ಪಾಟೀಲ್, ಉದ್ಯಮಿ ಬಿ.ಟಿ.ನಿರಂಜನಮೂರ್ತಿ, ಸಾಹಿತಿ ಸಾದಿಕ್ ಉಲ್ಲಾ, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಸಾಹಿತಿ ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಕೆ.ಟಿ.ಶ್ರೀನಿವಾಸ್, ಪಿಡಿಒ ಶ್ರೀದೇವಿ, ಹನುಮಂತಪ್ಪ, ಸಿಆರ್ಪಿ ರಾಜೇಶ್ವರಿ, ಪಿಎಸ್ಐ ರಾಜು, ಸಂಗೀತ ಶಿಕ್ಷಕ ತೋಟಪ್ಪ ಉತ್ತಂಗಿ, ರತ್ನಮ್ಮ ಕೊಟ್ರೇಶ್ ಇದ್ದರು.