ಮದ್ದೂರು: ಉಪ್ಪಾರ ಸಮಾಜ ಸ್ವಹಿತಕ್ಕಿಂತಲೂ ಸರ್ವರ ಹಿತವನ್ನು ಬಯಸುವ ಸಮಾಜ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಡಳಿತ ಸಮಿತಿ ಹಾಗೂ ಭಗೀರಥ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಯುವಕರು ಮುನ್ನೆಡೆದು ಉತ್ತಮವಾದ ಶಿಕ್ಷಣ ಪಡೆದು ಸದೃಢ ಸಮಾಜ ಕಟ್ಟಲು ಮುಂದಾಗಬೇಕು ಹಾಗೂ ಸರ್ಕಾರ ನೀಡುವ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗುವ ಜತೆಗೆ ಸಮಾಜದ ಮುಖ್ಯವಾಹಿನಿಗೆ ಉಪ್ಪಾರ ಸಮಾಜ ಬರಬೇಕು ಎಂದು ಕಿವಿಮಾತು ಹೇಳಿದರು.
ಉಪ್ಪಾರ ಜನಾಂಗಕ್ಕೆ ಸಮುದಾಯ ಭವನ ಮತ್ತು ವಸತಿ ನಿಲಯಕ್ಕೆ ಸರ್ಕಾರದಿಂದ ಸೂಕ್ತ ನಿವೇಶನ ದೊರಕಿಸಿಕೊಡುವ ಜತೆಗೆ ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಪ್ಪಾರ ಜನಾಂಗದವರು ನನ್ನ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುವ ಮೂಲಕ ಗೆಲುವಿಗೆ ಶ್ರಮಿಸಿದ್ದೀರಿ, ನಿಮ್ಮ ಸೇವೆ ಮಾಡುವ ಮೂಲಕ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.
ಜೈ ಭಗೀರಥ ಸಂಘದ ಜಿಲ್ಲಾಧ್ಯಕ್ಷೆ ನಾಗರತ್ನಾ ಮಾತನಾಡಿ, ಭಗೀರಥ ಕೇವಲ ಉಪ್ಪಾರ ಸಮಾಜದ ಕುಲಗುರು ಮಾತ್ರವಲ್ಲ. ಈ ದೇವಋಷಿ ಇಡೀ ಮನುಕುಲಕ್ಕೆ ದೇವಗಂಗೆ ಹರಿಸಿ, ಸಮಸ್ತ ಜೀವ ಸಂಕುಲದ ಮಹಾನ್ ಚೇತನವಾಗಿದ್ದು, ನಮ್ಮೆಲ್ಲರ ಆದರ್ಶವಾಗಿದ್ದಾರೆ. ಉಪ್ಪಾರ ಸಮಾಜ ಸಾಮರಸ್ಯದ ಬದುಕಿಗೆ ಮಾದರಿಯಾಗಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜ ಮುಂದೆ ಬರಲು ಸರ್ಕಾರಗಳು ಅಗತ್ಯ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು. ಸಾಹಿತಿ ಬಿ.ವಿ.ಹಳ್ಳಿ ನಾರಾಯಣ ಭಗೀರಥ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಬಿಇಒ ಧನಂಜಯ, ಗ್ರಾಪಂ ಅಧ್ಯಕ್ಷ ಸಿದ್ದರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ಬಾಬು, ತಾಪಂ ಇಒ ರಾಮಲಿಂಗಯ್ಯ, ಡಿ.ದೇವರಾಜು ಅರಸು ಹಿಂದುಗಳ ವರ್ಗಗಳ ವೇದಿಕೆಯ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಇದ್ದರು.