ರಸ್ತೆ ಅಗಲೀಕರಣಕ್ಕೆ ಆಸ್ತಿ ಕಳೆದುಕೊಂಡವರ ಆಕ್ರೋಶ
ಶಾಸಕರಿಂದ ಅರ್ಹರಿಗೆ ಹಕ್ಕುಪತ್ರ ನೀಡುವ ಭರವಸೆ
ಗುಡಿಬಂಡೆ: ಹತ್ತು ವರ್ಷಗಳ ಹಿಂದೆ ಗುಡಿಬಂಡೆ ಮುಖ್ಯರಸ್ತೆ ಅಗಲೀಕರಣದ ವೇಳೆ ಆಸ್ತಿ ಕಳೆದುಕೊಂಡವರಿಗೆ ನಿವೇಶನ ನೀಡುವುದು ಕರ್ತವ್ಯ. ಆರು ತಿಂಗಳೊಳಗೆ ಮನೆ ಕಳೆದುಕೊಂಡವರಿಗೆ ಹಾಗೂ ಪಟ್ಟಣದ ನಿವೇಶನ ರಹಿತರರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಭರವಸೆ ನೀಡಿದರು.
ಪಟ್ಟಣದ ಬ್ರಾಹ್ಮಣರ ಹಳ್ಳಿಗೆ ಹೋಗುವ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ಆಶ್ರಯ ಯೋಜನೆಯಡಿ ಉಚಿತ ನಿವೇಶನಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿ, ಈಗಾಗಲೇ ನಿವೇಶನ ಕಳೆದುಕೊಂಡವರಿಗೆ ಮೊದಲ ಹಂತದಲ್ಲಿ 54 ಹಕ್ಕುಪತ್ರಗಳನ್ನು ನೀಡಲು ಕಳೆದ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಇಂದು 40 ಹಕ್ಕುಪತ್ರ ವಿತರಿಸಲಾಗುತ್ತಿದೆ. ಲಾನುಭವಿಗಳ ಪಟ್ಟಿಯಲ್ಲಿ ಲೋಪದೋಷಗಳಿವೆ. ಅಗಲೀಕರಣದ ವೇಳೆ ಆಸ್ತಿ ಕಳೆದುಕೊಳ್ಳದವರಿಗೂ ಹಕ್ಕುಪತ್ರ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶನ ಸಿಕ್ಕಿಲ್ಲ ಎಂಬ ದೂರುಗಳಿವೆ. ಪಟ್ಟಿಯಲ್ಲಿರುವ ಅನರ್ಹರನ್ನು ತೆಗೆದು ಅರ್ಹರಿಗೆ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪಟ್ಟಣದ ಸಮೀಪದಲ್ಲಿ ಜಮೀನು ಗುರುತಿಸಿದ್ದು, ನಿವೇಶನರಹಿತರರಿಗೆ ನಿವೇಶನ ಹಂಚಲಾಗುವುದು ಎಂದರು.
ಜನರ ಆಕ್ರೋಶ
ಮುಖ್ಯರಸ್ತೆ ಅಗಲೀಕರಣದ ವೇಳೆ ನಿವೇಶನ ಕಳೆದುಕೊಂಡವರು ಹಕ್ಕುಪತ್ರ ವಿತರಣಾ ಪಟ್ಟಿ ಬಗ್ಗೆ ಆಕ್ರೋಶ ಹೊರಹಾಕಿದರು. ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿ ಸಂಪೂರ್ಣವಾಗಿ ತಪ್ಪಾಗಿದೆ. ಈ ಪಟ್ಟಿಯಲ್ಲಿ ಬಹುತೇಕರು ಆಸ್ತಿ ಹೊಂದಿರುವವರೇ ಇದ್ದಾರೆ. ರಸ್ತೆಗಾಗಿ ಸಂಪೂರ್ಣವಾಗಿ ಮನೆ ಕಳೆದುಕೊಂಡವರ ಹೆಸರು ಪಟ್ಟಿಯಲ್ಲಿಲ್ಲ. ಹಣ ಕೊಟ್ಟವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಆದ್ದರಿಂದ ಆಶ್ರಯ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕರು ಈ ಪಟ್ಟಿಗೆ ತಡೆ ನೀಡಬೇಕು ಹಾಗೂ ಸಂಪೂರ್ಣವಾಗಿ ನಿವೇಶನ ಕಳೆದುಕೊಂಡವರಿಗೆ ಆದ್ಯತೆ ಮೇಲೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ ಪಪಂ ನಿಧಿಯಿಂದ ಪ್ರೋತ್ಸಾಹಧನ ವಿತರಿಸಲಾಯಿತು.
ತಾಪಂ ಇಒ ನಾಗಮಣಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಮುಖ್ಯಾಧಿಕಾರಿ ಸಬಾ ಶಿರೀನ್, ಸದಸ್ಯರು, ಸಿಬ್ಬಂದಿ ಇದ್ದರು.
ಹಣ ಕೇಳಿದರೆ ಶಿಸ್ತುಕ್ರಮ
ನಿವೇಶನ ನೀಡುವುದು ಬಡವರಿಗಾಗಿ. ಅವರ ಬಳಿ ಯಾವುದೇ ಜನಪ್ರತಿನಿಧಿಯಾಗಲೀ, ಅಧಿಕಾರಿಗಳಾಗಲೀ ಹಣ ಕೇಳಿದರೆ ಅಥವಾ ಈಗಾಗಲೇ ಯಾರಿಗಾದರೂ ಹಣ ನೀಡಿದ್ದರೆ ತಿಳಿಸಿ. ಅಂತಹವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಎಚ್ಚರಿಸಿದರು.
ಇಂದಿನಿಂದ ಸರ್ವೇ
ಕಳೆದ ಆಶ್ರಯ ಸಮಿತಿ ಸಭೆಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶನ ನೀಡುವಂತೆ ಸೂಚಿಸಿದ್ದೇನೆ. ಆದರೂ, ದೂರುಗಳು ಕೇಳಿಬರುತ್ತಿವೆ. ಹಾಗಾಗಿ ತಾತ್ಕಾಲಿಕವಾಗಿ ಹಕ್ಕುಪತ್ರಗಳನ್ನು ನೀಡಲಾಗಿದೆ. ಸೋಮವಾರದಿಂದಲೇ ಸರ್ವೇ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅನರ್ಹರು ಕಂಡುಬಂದಲ್ಲಿ ಕೂಡಲೇ ಪಟ್ಟಿಯಿಂದ ತೆಗೆದು ಹಕ್ಕುಪತ್ರ ರದ್ದು ಮಾಡಲಾಗುವುದು. ಅರ್ಹರಿಗಷ್ಟೇ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.