ಕುಂದಾಪುರ: ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಬೆಳ್ಕಲ್ ಗೋವಿಂದ ತೀರ್ಥ ಪವಿತ್ರ ತೀರ್ಥ ಮಾತ್ರವಲ್ಲ, ಪಶ್ಚಿಮ ಘಟ್ಟದ ಔಷಧ ಸಸ್ಯಗಳ ನಾರು ಬೇರು ನೆನೆಸಿ ಹರಿಯುವ ನೀರಲ್ಲಿ ಔಷಧೀಯ ಗುಣವಿದೆ. ಎಳ್ಳಮಾವಾಸ್ಯೆ ದಿನ ಬೆಳ್ಕಲ್ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ಚರ್ಮ ವ್ಯಾಧಿ ಗುಣವಾಗುತ್ತದೆ ಎಂಬ ನಂಬಿಕೆಯಲ್ಲಿ ಜನ ಆಗಮಿಸುತ್ತಾರೆ.
ತೀರ್ಥಸ್ನಾನ ಸ್ಥಳಕ್ಕೆ ಬರುವ ಕೆಲವು ಪ್ರವಾಸಿಗರು, ಪರಿಸರ ಮಾಲಿನ್ಯ ಮಾಡುವುದಲ್ಲದೆ ಮೋಜು ಮಸ್ತಿ ಗೌಜು ಗದ್ದಲದಿಂದ ಕಾಡುಪ್ರಾಣಿಗಳ ಏಕಾಂತಕ್ಕೂ ಭಂಗ ತರುತ್ತಿದ್ದಾರೆ. ಇಲ್ಲಿನ ಸಂಪರ್ಕ ರಸ್ತೆ ಮತ್ತೊಂದು ಕಷ್ಟ.
ಹಿಂದೆ ವರ್ಷಕ್ಕೊಮ್ಮೆ ತೀರ್ಥಸ್ನಾನಕ್ಕೆ ಭಕ್ತರು ಬರುತ್ತಿದ್ದರೆ ಈಗ ಟ್ರೆಕ್ಕಿಂಗ್ ಪ್ರವಾಸ ಹೆಸರಲ್ಲಿ ನಿರಂತರ ಜನ ಲಗ್ಗೆ ಇಡುತ್ತಿದ್ದಾರೆ. ಪರಿಸರ ವೀಕ್ಷಿಸಿ, ತೀರ್ಥಸ್ನಾನ ಮಾಡುವ ಜತೆಗೆ ಪ್ಲಾಸ್ಟಿಕ್ ಬಾಟ್ಲಿ, ಆಹಾರ ತೊಟ್ಟೆಗಳು, ಮದ್ಯದ ಬಾಟಲಿಗಳನ್ನು ಎಸೆಯುವುದರಿಂದ ಪರಿಸರ ಮಲಿನವಾಗುತ್ತದೆ. ಪರಿಸರ ಮಾಲಿನ್ಯದ ಪರಿಣಾಮ ಪ್ರಾಣಿಗಳ ಮೇಲಾಗುತ್ತಿದೆ.
ಬೆಳ್ಕಲ್ ತೀರ್ಥಕ್ಕೆ ಯಾರು ಬರುತ್ತಾರೆ ಹೋಗುತ್ತಾರೆ ಎನ್ನೋದು ಗೊತ್ತಾಗದ ಕಾರಣ ಯಾರು ಬೇಕಾದರೂ ಜೋಡಿಯಾಗಿ ಬರುತ್ತಾರೆ. ರಾತ್ರಿಯಾದ ನಂತರ ಇಳಿದು ಹೋಗುತ್ತಾರೆ. ಮೋಜು ಮಸ್ತಿಯಷ್ಟೇ ಅಲ್ಲದೆ, ಅಕ್ರಮ ಚಟುವಟಿಕೆ ಕೂಡ ನಡೆಯುತ್ತಿದೆ. ಅರಣ್ಯ ಇಲಾಖೆ ಬೆಳ್ಕಲ್ ತೀರ್ಥಕ್ಕೆ ಹೋಗುವ ರಸ್ತೆಯಲ್ಲಿ ಗೇಟ್ ಅಳವಡಿಸಿ, ಸಿಸಿಟಿವಿ ಕ್ಯಾಮರಾ ಅಳವಡಿಸಿ ಪ್ರವಾಸಿಗರ ದಾಖಲೆ ಮಾಡಿಕೊಳ್ಳುವ ಕೆಲಸ ಮಾಡಿದರೆ ಎಲ್ಲ ಸರಿಯಾಗುತ್ತದೆ. ಹಿಂದು ಸಂಘಟನೆಗಳು ಬೆಳ್ಕಲ್ ತೀರ್ಥ ಪಾವಿತ್ರೃ ಉಳಿಸಲು ಹೋರಾಟಕ್ಕೂ ಸಿದ್ಧ.
ಜಗದೀಶ್ ಕೊಲ್ಲೂರು, ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹ ಸಂಚಾಲಕ
ಬೆಳ್ಕಲ್ ತೀರ್ಥಕ್ಕೆ ಹೋಗುವ ರಸ್ತೆಯಲ್ಲಿ ಗೇಟ್ ಅಳವಡಿಸಿ, ಪ್ರವಾಸಿಗರ ದಾಖಲೀಕರಣ ಮಾಡಲು ಸಿಬ್ಬಂದಿ ನೇಮಕ ಮಾಡಿ, ನಿಗಾ ಇಡುವ ಪ್ರಯತ್ನ ಇಲಾಖೆಯಿಂದ ಮಾಡಲಾಗುತ್ತದೆ. ಪ್ಲಾಸ್ಟಿಕ್, ನೀರಿನ ಬಾಟಲಿ, ಮಧ್ಯದ ಬಾಟಲಿ ಒಯ್ಯದಂತೆ ಕಣ್ಣಿಡುವುದಲ್ಲದೆ, ಮೊಬೈಲ್, ಆಧಾರ್ ನಂಬರ್ ದಾಖಲಿಸಿ, ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರಿಂದ ಬರುವ ವರಮಾನದಲ್ಲಿ ಶೇ.30ರಷ್ಟು ಸ್ಥಳೀಯ ಅಭಿವೃದ್ಧಿಗೆ ಬಳಸಲಾಗುತ್ತದೆ.
ರಾಘವೇಂದ್ರ ನಾಯ್ಕ, ಆರ್ಎಫ್ಒ, ಕೊಲ್ಲೂರು ವೈಲ್ಡ್ಲೈಪ್ ವಲಯ