ಶಿರಸಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಫೆ. 28 ರಿಂದ ಎರಡು ದಿನಗಳ ಕಾಲ ನಡೆಯುವ ಮಲ್ಲಮ್ಮನ ಬೆಳವಡಿ ಉತ್ಸವ ಅಂಗವಾಗಿ ಮಲ್ಲಮ್ಮನ ತವರೂರಾದ ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಂತರ ಮಠದಲ್ಲಿ ಗುರುವಾರ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಜ್ಯೋತಿ ಹೊತ್ತಿಸಲಾಯಿತು.
ಆಚಾರ್ಯ ಜಯಲಿಂಗ ಸ್ವಾಮಿ ಮಹಂತೀನ್ ಮಠ ಅವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ಮಹಂತೀನ್ ಮತ್ತು ನಾಗರಾಜ ಮಹಂತೀನ್ ಜ್ಯೋತಿ ಹೊತ್ತಿಸುವ ಕಾರ್ಯ ನೆರವೇರಿಸಿ, ಮಾತೆಯರಿಗೆ ಅರಿಶಿಣ ಕುಂಕುಮ ನೀಡಿ ತವರೂರ ಬಾಗೀನ, ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟರು.
ಬಳಿಕ ನಡೆದ ಸಭೆಯಲ್ಲಿ ಬೆಳವಡಿಯ ಬಸಯ್ಯ ವಿರಕ್ತಮಠ ಅವರು ಮಾತನಾಡಿ, ರಾಣಿ ಮಲ್ಲಮ್ಮ ಈಶಪ್ರಭುವಿನ ಮಡದಿಯಾಗಿ ಬೆಳವಡಿಯ ನಾಡನ್ನು ರಕ್ಷಣೆ ಮಾಡಿದ್ದಾರೆ. ರಾಜ್ಯ ಸುಭಿಕ್ಷವಾಗಿ ಪ್ರಜೆಗಳು ಸಂತೋಷದಿಂದ ಇರಲು ಮಲ್ಲಮ್ಮಾಜಿಯ ಕೊಡುಗೆ ಅಪಾರವಾಗಿದೆ ಎಂದರು.
ಬೆಳವಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಕಾರೀಮನಿ ಮಲ್ಲಮ್ಮನ ತವರೂರಿಂದ ಜ್ಯೋತಿ ಒಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ಇಂತಹ ಪವಿತ್ರ ಕಾರ್ಯದಲ್ಲಿ ಬೆಳವಡಿಯ ಪಂಚಾಯಿತಿಯ ಎಲ್ಲ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದು, ಎರಡು ದಿನಗಳ ಕಾಲ ನಡೆಯುವ ಈ ಅದ್ದೂರಿಯ ಉತ್ಸವಕ್ಕೆ ಸುಧಾಪುರ ಕ್ಷೇತ್ರದ ನಾಗರಿಕರು ಹಾಗೂ ಅಧಿಕಾರಿಗಳನ್ನು ಸೋಂದಾ ಗ್ರಾಮ ಪಂಚಾಯಿತಿ ಹಾಗೂ ಶಿರಸಿ ತಾಲೂಕು ಆಡಳಿತದವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಿದರು. ಬೆಳವಡಿ ಮಲ್ಲಮ್ಮನ ಪ್ರಾಧಿಕಾರ ರಚನೆಯಾದರೆ ಬೆಳವಡಿ ಹಾಗೂ ಮಲ್ಲಮ್ಮನ ತವರೂರಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈ ಕಾರ್ಯಕ್ಕೆ ನಾವು ಸುಧಾಪುರದ ಎಲ್ಲ ಸಂಘ ಸಂಸ್ಥೆಗಳ ಸೋಂದಾ ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿ ನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸೋಂದಾ ಜಾಗೃತ ವೇದಿಕೆಯ ಕಾರ್ಯಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ಮಾತನಾಡಿ, 1995 ರಿಂದ ಸುಧಾಪುರ ಕ್ಷೇತ್ರದಲ್ಲಿ ಎಲ್ಲ ಐತಿಹಾಸಿಕ ಗುಡಿ ಗೋಪುರಗಳ ಸಂರಕ್ಷಣೆಯನ್ನು ಸೋಂದಾ ಜಾಗೃತ ವೇದಿಕೆ ಮಾಡುತ್ತಿದೆ. 2012ರಿಂದ ಬೆಳವಡಿಯ ಮಲ್ಲಮ್ಮನ ಉತ್ಸವಕ್ಕೆ ಮಲ್ಲಮ್ಮನ ತವರೂರನಿಂದ ಜ್ಯೋತಿ ಒಯ್ಯುವ ಐತಿಹಾಸಿಕ ಕ್ಷಣಕ್ಕೆ ಸೋಂದಾ ಜಾಗೃತ ವೇದಿಕೆ ಮೂಲ ಕಾರಣವಾಗಿದೆ ಎಂದರು.
ಸೋಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಹೆಗಡೆ ಹೊಸಗದ್ದೆ ಅಧ್ಯಕ್ಷತೆ ವಹಿಸಿದ್ದರು. ಸೋಂದಾ ಗ್ರಾಪಂ ಉಪಾಧ್ಯಕ್ಷೆ ಭಾರತಿ ಚೆನ್ನಯ್ಯ, ಸದಸ್ಯರಾದ ಗಜಾನನ ನಾಯಕ್, ಮಂಜುನಾಥ್ ಬಂಡಾರಿ, ಮಮತಾ ಜೈನ, ಕಂದಾಯ ನಿರೀಕ್ಷಕ ಚಂದ್ರಕಾಂತ ಗೌಡ, ಗ್ರಾಮ ಆಡಳಿತ ಅಧಿಕಾರಿಗಳಾದ ಕಾವ್ಯ ಕೆ. ಇತರರಿದ್ದರು. ಮಹಂತರ ಮಠದಿಂದ ಹೊರಟ ಜ್ಯೊತಿಗೆ ಸೋದೆ ಶ್ರೀ ವಾದಿರಾಜ ಮಠ, ಸ್ವಾದಿ ಶ್ರೀ ಜೈನಮಠ ಹಾಗೂ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದಲೂ ಪೂಜೆ ಸಲ್ಲಿಸಿ, ಬೀಳ್ಕೊಡಲಾಯಿತು.