ಶ್ರೀರಂಗಪಟ್ಟಣ: ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುವ ಬಡ ರೋಗಿಗಳೊಂದಿಗೆ ವೈದ್ಯರು ಮೊದಲು ಸಂಯಮ ಹಾಗೂ ಮಾನವೀಯತೆಯಿಂದ ವರ್ತಿಸಲು ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಪಿ.ಮಾರುತಿ ಅವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಅವರು ಆಸ್ಪತ್ರೆಯ ವಾತಾವರಣ, ವಾರ್ಡ್ಗಳು, ವೈದ್ಯಕೀಯ ವ್ಯವಸ್ಥೆ ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸಾ ಸೇವೆಯ ಕುರಿತು ಖುದ್ದು ಪರಿಶೀಲಿಸಿ ಸ್ಥಳದಲ್ಲಿದ್ದ ರೋಗಿಗಳಿಂದ ಮಾಹಿತಿ ಪಡೆದ ಅವರು ಬಳಿಕ ವೈದ್ಯಾಧಿಕಾರಿಯ ಕಚೇರಿಯಲ್ಲಿ ದಾಖಲೆಗಳ ಪರಿಶೀಲಿಸಿ ವಿವಿಧ ದೂರುಗಳ ಪಟ್ಟಿ ಕುರಿತು ಒಂದೊಂದಾಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಗೆ ರೋಗಿಗಳು ಬಂದಾಗ ವೈದ್ಯರು ಗೈರಾಗಿರಲು ಕಾರಣವೇನು..? ಇನ್ನು ರಾತ್ರಿ ವೇಳೆಯೂ ಇಂತಹ ಆರೋಪ ಹೆಚ್ಚಾಗಿರುವುದು ಸತ್ಯವೇ..! ಸಮಸ್ಯೆ ಹೇಳುವ ಬಡ ಹಾಗೂ ವೃದ್ಧ ರೋಗಿಗಳೊಂದಿಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಏರುಧ್ವನಿಯಲ್ಲಿ ಮಾತನಾಡುವುದು. ತಾತ್ಸಾರ ತೋರುವುದು ಏಕೆ..? ಗಾಯಾಳುಗಳಿಗೆ ಸರಿಯಾದ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ನೀಡದೆ ಕರ್ತವ್ಯ ಲೋಪ ಎಸಗುವುದು ಹಾಗೂ ವಿವಿಧ ಸೇವೆ ಮತ್ತು ಪ್ರಮಾಣ ಪತ್ರ ನೀಡಲು ಬಡಜನರ ಬಳಿ ಹಣ ಕೇಳುವುದು ಯಾಕೆ..? ಎಂದು ಸಾರ್ವಜನಿಕರ ಮುಂದೆಯೇ ಡಾ.ಮಾರುತಿ ಅವರಿಗೆ ಸರಣಿ ಪ್ರೆಶ್ನೆಗಳ ಸುರಿಮಳೆಗೈದರು.
ಡಾ.ಮಾರುತಿ ತಮ್ಮೊಂದಿಗೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರಾದ ಡಾ.ಮೊಹಮದ್ ಹಾಗೂ ಡಾ.ಸೌಮ್ಯಾ ಅವರೊಂದಿಗೆ ನ್ಯಾಯಾಧೀಶರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಪ್ರಸ್ತುತ ಕೇಳಿಬಂದಿರುವ ದೂರುಗಳು ಸತ್ಯಕ್ಕೆ ದೂರವಾಗಿದೆ. ಆಸ್ಪತ್ರೆ ಸಿಬ್ಬಂದಿಗೆ ತಿಳಿಹೇಳುವ ಜತೆಗೆ ತಾವು ಸಹ ಜಾಗೃತಿ ವಹಿಸಿ ಮುನ್ನಡೆದು ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಬಗ್ಗೆ ಭರವಸೆ ನೀಡಿದರು.
ಬಳಿಕ ಮಾತನಾಡಿದ ನ್ಯಾಯಾಧೀಶ ಎಂ.ಆನಂದ್ ಅವರು, ಸರ್ಕಾರಿ ಆಸ್ಪತ್ರೆಯ ವೈದ್ಯರು ತಮ್ಮ ಕೆಲಸವನ್ನು ಸಾಮಾಜಿಕ ಸೇವೆಯನ್ನಾಗಿ ಭಾವಿಸಿ ಬಡ ರೋಗಿಗಳು ಗುಣಾತ್ಮಕ ಚಿಕಿತ್ಸೆ ನೀಡಬೇಕು. ನಿಮ್ಮ ತಾಳ್ಮೆ ಹಾಗೂ ಭರವಸೆಯ ಮಾತುಗಳಿಂದ ಅವರಲ್ಲಿನ ಕಾಯಿಲೆಗಳು ಅರ್ಧದಷ್ಟು ವಾಸಿಯಾಗುವಂತೆ ನಡೆದುಕೊಳ್ಳುವ ಗುಣ ನಿಮ್ಮಲ್ಲಿರಲಿ. ಯಾವುದೇ ಔಷಧಗಳನ್ನು ರೋಗಿಗಳು ಹೊರಭಾಗದ ಖಾಸಗಿ ಅಂಗಡಿಗಳಿಂದ ಖರೀದಿಸದೆ ಸರ್ಕಾರಿ ಔಷಧಗಳನ್ನೇ ವಿತರಿಸಿ. ಆಸ್ಪತ್ರೆಯಲ್ಲಿ ವೈದ್ಯರು ಗೈರಾಗದೆ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಉತ್ತಮ, ಶೌಚಗೃಹ ಹಾಗೂ ಪ್ರಯೋಗಾಲಯದ ಸೇವೆ ನೀಡಬೇಕು. ಇಂತಹ ದೂರುಗಳು ಕೇಳಿಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಾಕೀತು ಮಾಡಿದರು.
ಬಳಿಕ ಪಟ್ಟಣದ ವೆಲ್ಲೆಸ್ಲೀ ಸೇತುವೆ ಬಳಿಗೆ ಆಗಮಿಸಿದ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಅವರು, ಕಾವೇರಿ ನದಿಗೆ ಚರಂಡಿ ನೀರು ಸೇರ್ಪಡೆ ಆಗುತ್ತಿರುವ ಸ್ಥಳ ವೀಕ್ಷಿಸಿ, ಬಳಿಕ ವಾಟರ್ ಗೇಟ್ ಬಳಿ ಕಾವೇರಿ ನದಿಗೆ ನೀರು ಸೇರದಂತೆ ತಡೆದು ಒಳಚರಂಡಿ ಸಂಸ್ಕರಣ ಘಟಕಕ್ಕೆ ಸರಬರಾಜು ಮಾಡಲು ಕೈಗೊಂಡ ತಡೆಗೋಡೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಸ್ಥಳದಲ್ಲಿ ಕೆಲ ದಿನಗಳಿಂದ ಕಾಮಗಾರಿ ಸ್ಥಗಿತಗೊಳಿಸುವಂತೆ ಸಂಘಟನೆಗಳಿಂದ ನಡೆಸಲಾಗಿದ್ದ ಪ್ರತಿಭಟನೆ ಕುರಿತು ಭಾರತೀಯ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಸುನೀಲ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ಉಪ ತಹಸೀಲ್ದಾರ್ ಚೈತ್ರಾ ಹಾಗೂ ಒಳಚರಂಡಿ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದ ಅವರು, ಕಾಮಗಾರಿಗೆ ಬೇಕಿರುವ ಅಧಿಕೃತ ಅನುಮತಿ ಪತ್ರ ನೀಡಿ ಮಳೆಗಾಲ ಪ್ರಾರಂಭವಾಗುವ ಮೊದಲು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಈ ವೇಳೆ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಎಂ.ಗುರುಪ್ರಸಾದ್, ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮೃತಾ ವಿ.ಕುರನೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಡ ರೋಗಿಗಳ ಜತೆ ಸೌಮ್ಯದಿಂದ ವರ್ತಿಸಿ

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits
Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…
ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್! Cardiac Arrest
Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…