ಆರ್. ತುಳಸಿಕುಮಾರ್ ಬೆಂಗಳೂರು
ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ಮಧ್ಯೆ ಸಾರ್ವಜನಿಕರು ಬಸ್ ನಿಲ್ದಾಣ ತಲುಪಿ, ಗಮ್ಯ ತಲುಪಲು ಹರಸಾಹಸ ಪಡಬೇಕಿದೆ. ಹೆಚ್ಚಿನ ಕಡೆಗಳಲ್ಲಿ ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಸೂಕ್ತ ತಂಗುದಾಣಗಳಿಲ್ಲದ ಹಾಗೂ ಪ್ರಯಾಣಿಕ ಸ್ನೇಹಿ ಸೌಲಭ್ಯಗಳ ಅಭಾವವಿದೆ. ಈ ಸಮಸ್ಯೆ ನಿವಾರಣೆ ಉದ್ದೇಶದಿಂದ ಮಹಿಳೆಯರು- ಮಕ್ಕಳು ಹಾಗೂ ಹಿರಿಯ ನಾಗರಿಕರು ಸುಲಭವಾಗಿ ಸಂಚರಿಸಲು ಸುರಕ್ಷಿತ ತಂಗುದಾಣಗಳನ್ನು ನಿರ್ವಿುಸಲು ಬಿಬಿಎಂಪಿ ಮುಂದಾಗಿದೆ.

ಹಾಲಿ ಕಾರ್ಯಾಚರಿಸುತ್ತಿರುವ ತಂಗುದಾಣಗಳು ಪ್ರಯಾಣಿಕರು ಬಸ್ ಹತ್ತಿ ಇಳಿಯಲಷ್ಟೇ ಸೌಲಭ್ಯ ಒದಗಿಸುತ್ತಿದ್ದು, ಹೆಚ್ಚಿನ ಸೌಕರ್ಯವುಳ್ಳ ವ್ಯವಸ್ಥಿತ ಬಸ್ ಶೆಲ್ಟರ್ಗಳಾಗಿ ಬದಲಾವಣೆಗೊಳ್ಳಲಿವೆ. ಅದರಲ್ಲೂ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ. ಪ್ರಸ್ತುತ ನಿಲ್ದಾಣಗಳನ್ನೇ ಸುರಕ್ಷಿತ ಸ್ಥಳವಾಗಿ ಪರಿವರ್ತಿಸಲು ತಂಗುದಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ವಿದ್ಯುದ್ದೀಪದ ವ್ಯವಸ್ಥೆ, ಉತ್ತಮ ಆಸನ, ಕುಡಿಯುವ ನೀರು, ಬಸ್ ಮಾರ್ಗಗಳ ಫಲಕ ಇರಲಿದ್ದು, ತಂಗುದಾಣಗಳು ಸ್ವಚ್ಛ ಸುಂದರವಾಗಿ ರೂಪಾಂತರಗೊಳಿಸಲು ಯೋಜಿಸಲಾಗಿದೆ.
3 ಸ್ಥಳಗಳಲ್ಲಿ ಪ್ರಾಯೋಗಿಕ ಜಾರಿ: ಪ್ರಯಾಣಿಕರಿಗೆ ಉತ್ತಮ ಸೌಲಭ್ಯವಿರುವ ಸುರಕ್ಷಿತ ತಂಗುದಾಣಗಳನ್ನು ಶೀಘ್ರವೇ ಪ್ರಾಯೋಗಿಕವಾಗಿ ಕೆ.ಆರ್. ಸರ್ಕಲ್, ಫೋರಂ ಮಾಲ್ ಹಾಗೂ ಕಾಡುಬೀಸನಹಳ್ಳಿ ಬಸ್ ನಿಲುಗಡೆ ಸ್ಥಳದಲ್ಲಿ ಜಾರಿ ಮಾಡಲಾಗುತ್ತದೆ. ಇದಕ್ಕೆ ತಗುಲುವ ವೆಚ್ಚವನ್ನು ಸಿಎಸ್ಆರ್ ನಿಧಿ ಅಡಿಯಲ್ಲಿ ಭರಿಸಲಾಗುತ್ತದೆ. ಇವುಗಳ ಸಾಧಕ- ಬಾಧಕವನ್ನು ಗಮನಿಸಿದ ಬಳಿಕ ಇನ್ನಿತರ ಸ್ಥಳಗಳಿಗೂ ವಿಸ್ತರಿಸಲು ಪಾಲಿಕೆ ಮುಂದಾಗಲಿದೆ.
3 ವರ್ಷದಲ್ಲಿ 1,136 ತಂಗುದಾಣ ನಿರ್ಮಾಣ: ಮಹಾನಗರ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ತಂಗುದಾಣ ಗಳನ್ನು ನಿರ್ವಿುಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬಿಎಂಟಿಸಿ ಸಲಹೆ ಆಧರಿಸಿ ಒಟ್ಟು 2,212 ಕಡೆಗಳಲ್ಲಿ ತಂಗುದಾಣಕ್ಕೆ ಒಪ್ಪಿಗೆ ಸಿಕ್ಕಿದ್ದು, 3 ವರ್ಷದಲ್ಲಿ 1,076 ಬಸ್ ಶೆಲ್ಟರ್ಗಳನ್ನು ನಿರ್ವಿುಸಲಾ ಗಿದೆ. ಇನ್ನೂ 1,136 ತಂಗುದಾಣಗಳನ್ನು ನಿರ್ವಿುಸ ಬೇಕಿದ್ದು, 250 ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ಟಿಇಸಿ ಕೋಶ (ಟ್ರಾಫಿಕ್ ಇಂಜಿನಿಯರಿಂಗ್ ಸೆಲ್) ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಬಗೆಯ ತಂಗುದಾಣ ಏಕೆ?: ನಗರದಲ್ಲಿ ಸುಮಾರು 7 ಸಾವಿರ ಬಸ್ ನಿಲ್ದಾಣಗಳಿದ್ದು, ಈ ಪೈಕಿ ಶೇ.20 ‘ರಿಕ್ವೆಸ್ಟ್ ಸ್ಟಾಪ್’ಗಳಾಗಿ ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಅರ್ಧದಷ್ಟು ಕಡೆಗಳಲ್ಲಿ ತಂಗುದಾಣಗಳಿಲ್ಲ. ಹೆಚ್ಚಿನ ಜನಸಂದಣಿ ಇರುವೆಡೆ ಬಸ್ ಶೆಲ್ಟರ್ಗಳಿದ್ದರೂ ಹೆಚ್ಚು ಮಂದಿಗೆ ಆಶ್ರಯ ನೀಡುವಂತಿಲ್ಲ. ನಗರದ ಮಧ್ಯ ಭಾಗ ಹಾಗೂ ಪ್ರಮುಖ ರಸ್ತೆಗಳಲ್ಲಿ ತಂಗುದಾಣಗಳು ಉತ್ತಮವಾಗಿದ್ದರೂ, ರಾತ್ರಿ ವೇಳೆ ಒಂಟಿ ಪ್ರಯಾಣಿಕರಿಗೆ ಸುರಕ್ಷೆಯ ಕೊರತೆ ಕಾಡುತ್ತಿದೆ. ಈ ವಿಚಾರವಾಗಿ ಬಿ-ಪ್ಯಾಕ್ ಸಂಘಟನೆಯು ಮಹದೇವಪುರ, ಮಲ್ಲೇಶ್ವರ, ದಾಸರಹಳ್ಳಿ, ಹೆಬ್ಬಾಳ ಹಾಗೂ ಶಿವಾಜಿನಗರ ಕ್ಷೇತ್ರಗಳಲ್ಲಿ ನಡೆಸಿದ ಸರ್ವೆಯಲ್ಲಿ ಶೇ.93 ಸ್ಥಳಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದನ್ನು ನಾಗರಿಕರು ಅಭಿಪ್ರಾಯ ದಾಖಲಿಸಿದ್ದರು. ಇದನ್ನಾಧರಿಸಿ ಇತರ ಸೌಲಭ್ಯಗಳನ್ನು ಒದಗಿಸುವಂತೆ ಬಿಬಿಎಂಪಿಗೆ ಮನವಿ ನೀಡಲಾಗಿತ್ತು. ಈ ವಿಚಾರವಾಗಿ ಪಾಲಿಕೆ ಮುಖ್ಯ ಆಯುಕ್ತರು ಕೆಳ ಹಂತದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೊಸದಾಗಿ ನಿರ್ವಿುಸುವ ಬಸ್ ಶೆಲ್ಟರ್ಗಳನ್ನು ಸುರಕ್ಷಿತ ತಂಗುದಾಣಗಳಾಗಿ ನಿರ್ವಿುಸಲು ಒಪ್ಪಿಗೆ ಸೂಚಿಸಿದ್ದಾರೆ.
ನಾಗರಿಕರ ಸಲಹೆಗಳು
- ಬಸ್ ನಿಲ್ದಾಣಗಳಲ್ಲಿ ಅನ್ಯ ವಾಹನ ನಿಲುಗಡೆ ಬೇಡ
- ಬಸ್ ಶೆಲ್ಟರ್ಗಳ ನಿಯಮಿತ ಸ್ವಚ್ಛತೆಗೆ ಆದ್ಯತೆ
- ಮುಂಜಾನೆ, ರಾತ್ರಿ ವೇಳೆ ಕೆಲ ಕಾಲ ಹೊಯ್ಸಳ- ಚೀತಾ ಗಸ್ತು ಪೊಲೀಸರ ನಿಯೋಜಿಸಿ
- ಮಳೆಯಿಂದ ಆಶ್ರಯ ಪಡೆಯಲು ವಿಸ್ತಾರ ತಂಗುದಾಣ ಅಗತ್ಯ.
- ಶಿಥಿಲಾವಸ್ಥೆಯ ಬಸ್ ಶೆಲ್ಟರ್ ಬದಲಾವಣೆ, ಹೊಸ ಸ್ಥಳಗಳಲ್ಲೂ ತಂಗುದಾಣ ನಿರ್ವಣ.
ಸರ್ವೆಯಲ್ಲಿ ನಿಲ್ದಾಣಗಳ ಸ್ಥಿತಿ
- ಶೇ.93: ಸುರಕ್ಷತೆ ಮಾಹಿತಿ ಅಲಭ್ಯ
- ಶೇ.93: ಸಿಸಿ ಕ್ಯಾಮರಾ ಅಗತ್ಯ
- ಶೇ.70: ಮಾರ್ಗ ನಕ್ಷೆ ಕೊರತೆ
- ಶೇ.77: ಗುಣಮಟ್ಟದ ಆಸನಗಳಿಲ್ಲ
- ಶೇ.55: ಉತ್ತಮ ಬೆಳಕಿನ ವ್ಯವಸ್ಥೆ ಅಗತ್ಯ
- ಶೇ.28: ಹಿಂಭಾಗದ ಜಾಗ ಅನೈರ್ಮಲ್ಯ