ಬೆಂಗಳೂರು: ಟಿಪ್ಪರ್ ಡಿಕ್ಕಿ ಹೊಡೆದು ಬಿಬಿಎಂಪಿ ಮಹಿಳಾ ಪೌರ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಸ್ಟ್ ಆ್ ಕಾರ್ಡ್ ರಸ್ತೆಯ ದೋಬಿ ಘಾಟ್ ಬಳಿ ಮಂಗಳವಾರ ಈ ಘಟನೆ ನಡೆದಿದೆ.
ಶ್ರೀರಾಂಪುರದ ಬಳಿಯ ಆಶ್ರಯ ನಗರ ನಿವಾಸಿ ಸರೋಜಾ (೫೦) ಸಾವನ್ನಪ್ಪಿದವರು. ಪಾಲಿಕೆಯಲ್ಲಿ ಗುತ್ತಿಗೆ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಬೆಳಗ್ಗೆ ಸುಮಾರು ೬:೩೦ ರ ವೇಳೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಶಿವನಗರ ವಾರ್ಡ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನೆರಡು ದಿನಗಳಲ್ಲಿ ಸರೋಜಾ ಅವರಿಗೆ ಕಾಯಂ ಪೌರ ಕಾರ್ಮಿಕ ನೇಮಕಾತಿ ಪತ್ರ ಹಸ್ತಾಂತರವಾಗಬೇಕಿತ್ತು.
ಸರೋಜಾ ಅವರು ಪ್ರತಿನಿತ್ಯದಂತೆ ಬಯೋಮೆಟ್ರಿಕ್ ಹಾಜರಾತಿ ಹಾಕಲು ಪಾಲಿಕೆಯ ವಾರ್ಡ್ ಕಚೇರಿಯತ್ತ ನಡೆದು ಹೋಗುತ್ತಿದ್ದರು. ಟ್ರಾಫಿಕ್ ಸಿಗ್ನಲ್ನಲ್ಲಿ ಅವರು ರಸ್ತೆ ದಾಟುವ ಯತ್ನದಲ್ಲಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದ ಅವರ ಮೇಲೆ ಟಿಪ್ಪರ್ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪು ಸಿಗ್ನಲ್ ಇದ್ದ ಕಾರಣಕ್ಕೆ ವಾಹನಗಳೆಲ್ಲಾ ನಿಂತಿದ್ದರಿಂದ ಸರೋಜಾ ಅವರು ರಸ್ತೆ ದಾಟಲು ಮುಂದಾಗಿದ್ದಾರೆ. ಅದೇ ವೇಳೆಗೆ ಸಿಗ್ನಲ್ ಬಿಟ್ಟಿದ್ದರಿಂದ ಟಿಪ್ಪರ್ ಚಾಲಕ, ಸರೋಜಾ ಅವರನ್ನು ಗಮನಿಸದೆ ಮುಂದಕ್ಕೆ ವಾಹನ ಚಾಲನೆ ಮಾಡಿದ್ದಾನೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ. ಘಟನೆ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
