ಬೆಂಗಳೂರು: ಅನಧಿಕೃತ ಕಟ್ಟಡ ಹಾಗೂ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಪರಿಶೀಲಿಸಿ ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಹದೇವಪುರ ವಲಯದ ನಲ್ಲೂರುಹಳ್ಳಿ ಮೆಟ್ರೋ ಸ್ಟೇಷನ್ನಿಂದ ವೈಟ್ಫೀಲ್ಡ್ ಮುಖ್ಯರಸ್ತೆವರೆಗೆ
4.5 ಕಿ.ಮೀ. ಉದ್ದಕ್ಕೂ ಪಾದಚಾರಿ ಮಾರ್ಗ ಪರಿಶೀಲನೆ ಬಳಿಕ ಅವರು ಈ ಸೂಚನೆಯನ್ನು ಬುಧವಾರ ನೀಡಿದರು.
ನಲ್ಲೂರಹಳ್ಳಿ ಕಾಲೊನಿಯ 3ನೇ ಅಡ್ಡರಸ್ತೆ ಹಾಗೂ 7ನೇ ಅಡ್ಡರಸ್ತೆಯಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡಗಳನ್ನು ನಿರ್ಮಿಸಿರುವುದನ್ನು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು ಅನಧಿಕೃತ ಕಟ್ಟಡವೆಂದು ದೃಢಪಟ್ಟಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ನಿರ್ದೇಶಿಸಿದರು. ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳುವ ಜತೆಗೆ ನಾಲಾ ಪಕ್ಕದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡ ತೆರವುಗೊಳಿಸಿ, ಬಫರ್ ವಲಯದಲ್ಲಿ ಯಾವುದೇ ಬಿಲ್ಡಿಂಗ್ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡದಂತೆ ಸೂಚಿಸಿದರು.
ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಿ:
ನಲ್ಲೂರಹಳ್ಳಿ ಮೆಟ್ರೋ ಸ್ಟೇಷನ್ನಿಂದ ಬೋರ್ವೆಲ್ ರಸ್ತೆ ಮೂಲಕ ವೈಟ್ಫೀಲ್ಡ್ ಮುಖ್ಯರಸ್ತೆಯವರೆಗೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ತ್ವರಿತವಾಗಿ ಸಿಡಿಪಿ ಅನ್ವಯ ಅಗಲೀಕರಣ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು. ವಲಯ ವ್ಯಾಪ್ತಿಯಲ್ಲಿನ ಪರಿತ್ಯಾಜನ ಜಾಗಗಳನ್ನು ಸ್ವಾಧೀನಕ್ಕೆ ಪಡೆದು, ಅವಕಾಶವಿದ್ದಲ್ಲಿ ವೆಂಡಿಂಗ್ ಜೋನ್ ಮತ್ತು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಪರಿಶೀಲನೆಯ ವೇಳೆ ಮಹದೇವಪುರ ವಲಯ ಆಯುಕ್ತ ರಮೇಶ್, ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್, ಬೆಸ್ಕಾಂ ಹಾಗೂ ಜಲಮಂಡಳಿಯ ಅಧಿಕಾರಿಗಳು ಹಾಜರಿದ್ದರು.
ಅನಧಿಕೃತ ವಾಹನ ನಿಲುಗಡೆಗೆ ದಂಡ:
ನಲ್ಲೂರಹಳ್ಳಿ ಮುಖ್ಯರಸ್ತೆಯು ಅಧಿಕ ಸಂಚಾರ ದಟ್ಟಣೆ ಹೊಂದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಹಿನ್ನೆಲೆ ಅನಧಿಕೃತವಾಗಿ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವ ವಾಹನ ಮಾಲೀಕರಿಗೆ ದಂಡ ವಿಧಿಸಿ ಸಂಚಾರ ಪೊಲೀಸರ ಮೂಲಕ ವಾಹನಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತರು ಸೂಚಿಸಿದರು.