ಜಮಖಂಡಿ: ಮೊದಲು ದುಡಿಯುವವರನ್ನು ಕಾರ್ಮಿಕ, ಸೇವಕ, ಜೀತದಾಳು ಎಂದು ಕರೆಯಲಾಗುತ್ತಿತ್ತು. ಆದರೆ, ದುಡಿಯುವವರು ದೊಡ್ಡವರಾಗಬೇಕು ಎಂಬ ಪರಿಕಲ್ಪನೆ ಹುಟ್ಟುಹಾಕಿ ದುಡಿಯುವವರಿಗೆ ಕಾಯಕಯೋಗಿ ಎಂಬ ಪಟ್ಟ ಕೊಟ್ಟು ನಾಡಿಗೆ ಪರಿಚಯಿಸಿದವರು ವಿಶ್ವಗುರು ಬಸವಣ್ಣ ಎಂದು ಮನಕವಾಡದ ಶ್ರೀ ದೇವ ಮಂದಿರದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಏ.15 ರಿಂದ 29ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆಯ ಹನ್ನೆರಡನೇ ದಿನವಾದ ಶನಿವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮರ-ಮರಗಳ ನಡುವಿನ ತಿಕ್ಕಾಟದಿಂದ ಕಾಡು ನಾಶ. ಮತ-ಮತಗಳ ನಡುವಿನ ತಿಕ್ಕಾಟದಿಂದ ನಾಡು ನಾಶ. ಆದ್ದರಿಂದ ಬಸವಣ್ಣನವರು ಜಾತಿ ಕಟ್ಟೆಯನ್ನು ನಿರ್ಮೂಲನ ಮಾಡಿ, ನೀತಿ ಕಟ್ಟೆಯ ಮೇಲೆ ಸ್ವಾಸ್ಥೃ ಸಮಾಜ ನಿರ್ಮಾಣ ಮಾಡಲು 12ನೇ ಶತಮಾನದಲ್ಲಿ ಮಹಾಕ್ರಾಂತಿ ಮಾಡಿದ್ದರು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ಯುವಕರು ಚಿಕ್ಕ ವಯಸ್ಸಿನಲ್ಲಿ ದಾರಿತಪ್ಪಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ದುಶ್ಚಟ ಮಾಡುತ್ತ ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆ ಮಾಡಿದರೆ ದೇವರು ಒಲಿಯುವುದಿಲ್ಲ. ಆದ್ದರಿಂದ ಯುವಕರು ಬಸವಣ್ಣನವರ ತತ್ವ ಸಿದ್ಧಾಂತ ಅರಿತು ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂವಹನ ಕಲೆ ಬಗ್ಗೆ ಕಲಿಸಿಕೊಡಲಾಗುತ್ತದೆ. ಆದರೆ, ಬಸವಾದಿ ಶಿವಶರಣರು ನುಡಿದರೆ ಮುತ್ತಿನ ಹಾರದಂತಿರಬೇಕು ..ಎಂಬ ವಚನದ ಮೂಲಕ 12ನೇ ಶತಮಾನದಲ್ಲೇ ಸಂವಹನ ಕಲೆ ಕಲಿಸಿಕೊಟ್ಟಿದ್ದಾರೆ ಎಂದರು.
ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಸುನೀತಾ ಬಳಗಾರ ಮಾತನಾಡಿದರು. ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನುಡಿ ಹಂಚಿಕೊಂಡರು. ಚಿತ್ರದುರ್ಗದ ಹಾಸ್ಯಕಲಾವಿದ ಟಿ. ಜಗನ್ನಾಥ ಮಾತನಾಡಿದರು. ಚಿಕ್ಕಲಕಿಯ ಭಗೀರಥ ಪೀಠದ ಶಿವಾನಂದ ಮಹಾಸ್ವಾಮಿಗಳು, ಹುನ್ನೂರಿನ ವಿಶ್ವನಾಥ ಶಾಸೀಗಳು ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಮಹಾದೇವಪ್ಪ ಝುಲಪಿ ವಿರಚಿತ ನೂರೊಂದು ವಚನ ದೀಪ್ತಿ ಕೃತಿ ಬಿಡುಗಡೆ ಮಾಡಲಾಯಿತು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ವಕೀಲ ಡಿ.ಎಂ. ಜತ್ತಿ, ದಸ್ತು ಬರಹಗಾರ ಈರಣ್ಣ ಬಂಡಿಗಣಿ, ಸಿಪಿಐ ಮಲ್ಲಪ್ಪ ಮಡ್ಡಿ, ಬಸವರಾಜ ಕಲೂತಿ, ಬ.ಬಾಗೇವಾಡಿ ಪೌರಾಯುಕ್ತ ರುದ್ರೇಶ ಚಿತ್ತರಗಿ, ಜಮಖಂಡಿ ನಗರಸಭೆ ಪೌರಾಯುಕ್ತ ಜ್ಯೋತಿ ಗಿರೀಶ ಎಸ್., ಸುಮಿತ್ರಾ ನ್ಯಾಮಗೌಡ, ಅರುಣಕುಮಾರ ಶೆಟ್ಟಿ, ಮಹಾದೇವ ತೆಲಬಕ್ಕನವರ, ನಂದೆಪ್ಪ ನ್ಯಾಮಗೌಡ, ಎನ್.ಆರ್. ನ್ಯಾಮಗೌಡ, ಗುರುಲಿಂಗ ನ್ಯಾಮಗೌಡ ಇತರರು ಇದ್ದರು.
ಗಂಗಾ ಬನ್ನಿಗಿಡದ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶ್ರಾವಣಿ ಟಕ್ಕಳಕಿ, ಶ್ರದ್ಧಾ ಜಕ್ಕಪ್ಪನವರ ವಚನ ನೃತ್ಯ ಪ್ರದರ್ಶಿಸಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ಸ್ವಾಗತಿಸಿದರು. ಅಣ್ಣಾಸಾಹೇಬ ಜಗದೇವ ನಿರೂಪಿಸಿದರು. ಓಲೇಮಠದ ಆನಂದ ದೇವರು ಸ್ರೀಗಳು ಶರಣು ಸಮರ್ಪಿಸಿದರು.