ಮಂಗಳೂರು: ಕರಾವಳಿ ಭಾಗದ ಜನತೆಯ ಶಾಂತಿ, ಸೌಹಾರ್ದ ಹಾಗೂ ಸಾಮರಸ್ಯದ ಬದುಕಿಗೆ ಕೋಮುವಾದವು ಗಂಡಾಂತರ ತಂದೊಡ್ಡಿದೆ. ಯುವಜನತೆ ಕೋಮುವಾದಕ್ಕೆ ಬಲಿಯಾಗದೆ ಘನತೆಯ ಬದುಕಿಗೆ ಅತ್ಯಗತ್ಯವಾಗಿರುವ ಉದ್ಯೋಗ, ಶಿಕ್ಷಣ, ಆರೋಗ್ಯಕ್ಕಾಗಿ ಐಕ್ಯತೆಯಿಂದ ಪ್ರಬಲವಾಗಿ ಧ್ವನಿ ಎತ್ತಬೇಕು ಎಂದು ಡಿವೈಎಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಕರೆ ನೀಡಿದರು.
ನಗರದ ಕಲಾಂಗಣದಲ್ಲಿ ಭಾನುವಾರದಿಂದ ಎರಡು ದಿನಗಳ ಕಾಲ ಉದ್ಯೋಗ ಸೃಷ್ಟಿಸಿ.. ನಿರುದ್ಯೋಗದಿಂದ ರಕ್ಷಿಸಿ… ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಿ…. ಘೋಷಣೆಯಡಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನರ ಸಂಘಟನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಪ್ರದೇಶದ ಜನತೆಯ ಸಾಮರಸ್ಯದ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುತ್ತಿರುವ ಕೋಮುವಾದವನ್ನು ಮಟ್ಟ ಹಾಕುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ತಮ್ಮ ರಾಜಕೀಯ ಲಾಭಕ್ಕಾಗಿ ಜನ ಸಮಾನ್ಯರನ್ನು ಬಲಿಕೊಡುವ ಹೀನ ರಾಜಕಾರಣವನ್ನು ಜನತೆ ಐಕ್ಯತೆಯಿಂದ ಸೋಲಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ಮುಖಂಡರಾದ ನಿತಿನ್ ಕುತ್ತಾರ್, ಮಾಧುರಿ ಬೋಳಾರ್, ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.