ಧಾರವಾಡ: ಜಿಪಂ ಸದಸ್ಯನಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿ ಹತ್ಯೆಗೆ ಸುಪಾರಿ ಕೊಡಲು ವಿನಯ ಕುಲಕರ್ಣಿ ಸಂಚು ನಡೆಸಿದ್ದಾಗಿ ಸಿಬಿಐ ತನಿಖೆ ವೇಳೆ ಗೊತ್ತಾಗಿದೆ. ಬುಧವಾರ ವಿಚಾರಣೆಯ ನಂತರ ಠಾಣೆಯಿಂದ ಹೊರಬಂದ ಬಸವರಾಜ ಮುತ್ತಗಿ ಈ ವಿಷಯವಾಗಿ ಮಾಧ್ಯಮಗಳಿಗೆ ಮತ್ತೊಮ್ಮೆ ಪ್ರತಿಕ್ರಿಯಿಸಿದರು.
‘ಸುಪಾರಿ ವಿಷಯವನ್ನು ಈವರೆಗೂ ಅರಗಿಸಿಕೊಳ್ಳ ಲಾಗುತ್ತಿಲ್ಲ. ಚಾಡಿ ಕೇಳುವ ದೌರ್ಬಲ್ಯ ಕೆಲವರಿಗೆ ಇರುತ್ತದೆ. ಎಲ್ಲೋ ಒಂದು ಕಡೆ ಹಾಗಾಗಿರಬಹುದು. ತನಿಖೆಯ ವಿಷಯವನ್ನು ಹೊರಗಡೆ ಮಾತನಾಡಲು ಬರುವುದಿಲ್ಲ. ಅವರ (ವಿನಯ ಕುಲಕರ್ಣಿ) ಜತೆಗೆ ಸಾಕಷ್ಟು ಬಾರಿ ಕುಳಿತು ಊಟ ಮಾಡಿದ್ದೇವೆ. ಎರಡು ಚಮಚ ವಿಷ ಹಾಕಿಕೊಟ್ಟಿದ್ದರೆ ಖುಷಿಯಿಂದ ಕುಡಿದು ಬಿಡುತ್ತಿದ್ದೆ. ಅವರು ಒಂದುವೇಳೆ ಸುಪಾರಿ ಕೊಡುವ ಸಂಚು ಮಾಡಿದ್ದರೆ ಈ ಮಟ್ಟಕ್ಕೆ ಇಳಿಯುವುದು ಶೋಭೆ ತರುವಂಥದ್ದಲ್ಲ. ಮಹಾಭಾರತದಲ್ಲಿ ಶಕುನಿ ಮಾಮಾ ಇದ್ದಂತೆ, ನಮ್ಮೆಲ್ಲರ ಬದುಕಿನಲ್ಲಿ ಚಂದು ಮಾಮಾ (ವಿನಯ ಕುಲಕರ್ಣಿ ಮಾವ ಚಂದ್ರಶೇಖರ ಇಂಡಿ) ಎಂಬ ವ್ಯಕ್ತಿ ಎಂಟ್ರಿಯಾಗಿ ಎಲ್ಲರ ಬದುಕುನ್ನೇ ಹಾಳು ಮಾಡಿದಂತಾಗಿದೆ. ಈ ಸಂಬಂಧ ದೂರು ಕೊಡುವ ಕುರಿತು ವಕೀಲರೊಂದಿಗೆ ರ್ಚಚಿಸುತ್ತೇನೆ’ ಎಂದರು.
ಮುಂದುವರಿದ ವಿಚಾರಣೆ: ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತ ಚಂದ್ರಶೇಖರ ಇಂಡಿಯನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ಬುಧವಾರ ಇಡೀ ದಿನ ಇಲ್ಲಿನ ಉಪನಗರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದರು. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿ ಇತರ ಕೆಲವರನ್ನೂ ಠಾಣೆಗೆ ಕರೆಸಿಕೊಂಡು ಮಾಹಿತಿ ಕಲೆ ಹಾಕಿದರು.
ಅದೆಲ್ಲ ಸುಳ್ಳು: ವಿಚಾರಣೆ ಎದುರಿಸಿ ಠಾಣೆಯಿಂದ ಹೊರಗೆ ಬಂದ ವಿಜಯ ಕುಲಕರ್ಣಿ ಪ್ರತಿಕ್ರಿಯಿಸಿ, ‘ಬಸವರಾಜ ಮುತ್ತಗಿ ಸುಪಾರಿ ವಿಚಾರ ಸತ್ಯಕ್ಕೆ ದೂರವಾದದ್ದು. ಮುತ್ತಗಿ ಮತ್ತು ನಾವು ಒಂದೇ ಕುಟುಂಬದವರಿದ್ದಂತೆ. ಸುಪಾರಿ ವಿಷಯ ಯಾರು ಹಬ್ಬಿಸಿದ್ದಾರೋ ಗೊತ್ತಿಲ್ಲ. ಅದೆಲ್ಲವೂ ಸುಳ್ಳು’ ಎಂದರು.