ಬೆಂಗಳೂರು: ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ವಿಳಂಬ ಆಗುವುದಿಲ್ಲ. ಇನ್ನು ಎರಡು ದಿನಗಳಲ್ಲಿ ಯಾರ್ಯಾರಿಗೆ ಯಾವ ಖಾತೆ ಎಂಬುದು ಗೊತ್ತಾಗಲಿದೆ. ಖಾತೆ ಹಂಚಿಕೆಯನ್ನು ನಾನೇ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಸಚಿವರು ಹಳೇ ಖಾತೆ ಕೊಡಿ, ಇಂತಹ ಖಾತೆಯೇ ಕೊಡಿ ಎಂದು ಕೇಳಿಲ್ಲ. ನೀವು ಯಾವ ಖಾತೆ ಕೊಡುತ್ತೀರಾ ಅದನ್ನೇ ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮೊದಲ ನಿರ್ಣಯವಾಗಿ ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿ ವೀಕ್ಷಣೆ ಮತ್ತು ಪರಿಶೀಲನೆ ಮಾಡಲು ನಾಳೆ ಸಚಿವರುಗಳಿಗೆ ಜವಬ್ದಾರಿಯನ್ನು ನೀಡುತ್ತೇವೆ. ಜವಬ್ದಾರಿ ಹೊತ್ತ ಸಚಿವರು ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ಕೋವಿಡ್ ಟಾಸ್ಕ್ ಪೋರ್ಸ್ ಮತ್ತೆ ರಚನೆ ಮಾಡುತ್ತೇವೆ ಎಂದು ತಿಳಿಸಿದರು.
ಎಸ್ಟಿ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲು ತೀರ್ಮಾನ ಮಾಡಿದ್ದೇವೆ. ಎಸ್ಸಿ ಮತ್ತು ಓಬಿಸಿಗೆ ಈಗಾಗಲೇ ಸಚಿವಾಲಯ ಇದೆ ಎಂದು ಹೇಳಿದ ಬೊಮ್ಮಾಯಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳ ಮೇಲ್ವಿಚಾರಣೆ, ಅನುಷ್ಠಾನ ಪರಿಶೀಲನೆಗೆ ಸಿಎಂ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚನೆ ಮಾಡುವುದಾಗಿ ತಿಳಿಸಿದರು.
ಸಚಿವ ಸ್ಥಾನದ ಅಸಮಧಾನಿತರ ವಿಚಾರವಾಗಿ ಎಲ್ಲರೂ ನಮ್ಮವರೇ, ಅವರ ಜೊತೆ ಕೂತು ಮಾತನಾಡುತ್ತೇವೆ. ಅವರನ್ನು ಸಮಾಧಾನ ಮಾಡುತ್ತೇವೆ. ಮುಂದೆ ಅವರಿಗೆ ಅವಕಾಶ ಕೊಡುತ್ತೇವೆ ಎಂದು ಬೊಮ್ಮಾಯಿ ಅವರು ಹೇಳಿದರು. 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡದ ವಿಚಾರವಾಗಿ ಈಗಿರುವ ಸಚಿವರ ಮೂಲಕ 13 ಜಿಲ್ಲೆಗಳಿಗೆ ಪ್ರಾತಿನಧ್ಯ ನೀಡಲಾಗುತ್ತದೆ. ಸೂಕ್ತ ಆದವರನ್ನು ಆ ಪ್ರಾಂತ್ಯದಲ್ಲಿ ಬಳಸಿಕೊಳ್ಳುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್)
ಪ್ರಮಾಣವಚನ ಸ್ವೀಕರಿಸಲು 25 ನಿಮಿಷ ತಡವಾಗಿ ಓಡೋಡಿ ಬಂದ ಶಶಿಕಲಾ ಜೊಲ್ಲೆ!