ಲೋಕಾಪುರ: ನೀತಿ, ತತ್ವ ಹಾಗೂ ಸಮಾನತೆಯ ಅಡಿಯಲ್ಲಿ ಬಸವಾದಿ ಶರಣರು ಸಮಾಜದಲ್ಲಿ ಜಾಗೃತಿ ಮೂಡಿಸಿ ಜನಮಾನಸದಲ್ಲಿ ಮಹಾತ್ಮರಾಗಿದ್ದಾರೆ ಎಂದು ಡಾ. ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ವೆಂಕಟಾಪುರ ಓಣಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಬಸವಧರ್ಮ ಪ್ರವಚನ ಮತ್ತು ಸುಗಮ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಲ್ಯಾಣ ರಾಜ್ಯದ ಪರಿಕಲ್ಪನೆಯೊಂದಿಗೆ ಸಮಾಜದಲ್ಲಿ ಸಮಾನತೆಯನ್ನು ಒಟ್ಟುಗೊಡಿಸಬೇಕು ಎಂದು ಶ್ರಮಿಸಿದ ಬಸವಣ್ಣನವರ ಬದುಕು ತ್ಯಾಗಮಯವಾಗಿತ್ತು. ಬಸವಣ್ಣನವರ ವಿಚಾರಧಾರೆ ಹಾಗೂ ತತ್ವ ಸಂದೇಶಗಳು ಸಾಮಾನ್ಯ ಜನರಿಗೂ ತಲುಪಬೇಕು ಎಂದರು.
ಗಣಿ ಉದ್ಯಮಿದಾರ ಎಂ.ಎಂ. ವಿರಕ್ತಮಠ ಮಾತನಾಡಿ, ಬಸವಣ್ಣನವರು, ದಾನಕ್ಕಿಂತಲೂ ದಾಸೋಹಭಾವ ದೊಡ್ಡದಾಗಿತ್ತು. ಸೃಷ್ಟಿ ವಿಕಾಸ ಕ್ರಮದಲ್ಲಿ ಉತ್ತಮನೆನಿಸಿದ ಮನುಷ್ಯನಲ್ಲಿ ಮಾತ್ರ ತನ್ನಲ್ಲಿರುವ ಚೇತನವನ್ನು ಅರಿವಿಗೆ ತಂದುಕೊಳ್ಳುವ ಸಾಮರ್ಥ್ಯವಿದೆ ಎಂದರು.
ದಾಕ್ಷಾಯಿಣಿ ಶ್ರೀಶೈಲ ಮುದ್ದಾಪುರ ಅವರಿಗೆ ಕೃಷಿ ಮಹಿಳಾ ಸನ್ಮಾನ ನೆರವೇರಿಸಲಾಯಿತು. ಏ.30ರವರೆಗೆ ನಂದಿಕೇಶ್ವರ ಗ್ರಾಮದ ವೀರೇಶ್ವರ ಶರಣರಿಂದ ಪ್ರತಿ ದಿನ ಪ್ರವಚನ ನಡೆಯುವುದು. ಮಡಿಕೇಶ್ವರ ಗ್ರಾಮದ ಸುರೇಶ ಕೇಶಾಪುರ ಅವರಿಂದ ಸಂಗೀತ ಸೇವೆ, ಸೌಮ್ಯ ಮತ್ತು ರಮ್ಯಾ ಹಿರೇಮಠ ಸಹೋದರಿಯರಿಂದ ಪ್ರಾರ್ಥನೆ ಸೇವೆ, ಮೃತ್ಯುಂಜಯ್ಯ ಸಂಬಾಳಮಠ ಅವರಿಂದ ತಬಲಾ ವಾದಕ ಕಾರ್ಯಕ್ರಮ ಜರುಗಲಿದೆ. ಏ.30 ಸಂಜೆ 4 ಗಂಟೆಗೆ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಹಾಗೂ ವಚನಗ್ರಂಥ ಮೆರವಣೆಗೆ ಜರುಗುವುದು.
ಹನುಮಂತ ಬುದ್ನಿ, ಪ್ರಭು ಹೊನವಾಡ, ಮಹಾದೇವ ದುಂಡಪ್ಪಗೋಳ, ಸುರೇಶ ಕೇಶಪುರ, ಲಕ್ಷ್ಮಣ ಮುದ್ದಾಪುರ, ಮಲ್ಲಯ್ಯ ಸಂಬಾಳದ, ಬಸವರಾಜ ಚಿಪ್ಪಲಕಟ್ಟಿ, ನಾಗರಾಜ ಮುದ್ದಾಪುರ ಮತ್ತಿತರರಿದ್ದರು.