ಮಂಗಳೂರು: ಕೂಳೂರುನಲ್ಲಿದ್ದ ಬ್ಯಾಂಕ್ ಆಫ್ ಬರೋಡ ಶಾಖೆಯನ್ನು ಪಂಜಿಮೊಗರುಗೆ ಸ್ಥಳಾಂತರಿಸುವುದರನ್ನು ನಾಗರಿಕ ಹಿತರಕ್ಷಣಾ ಸಮಿತಿ ಕೂಳೂರು ವಿರೋಧಿಸಿದೆ.
ಬ್ಯಾಂಕ್ನ ಪ್ರಾಂತೀಯ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ ಸಮಿತಿ ಸದಸ್ಯರು, ಶಾಖೆಯನ್ನು ಸ್ಥಳಾಂತರ ಮಾಡದಂತೆ ಒತ್ತಾಯಿಸಿದ್ದರು. ಅದಕ್ಕೆ ಬ್ಯಾಂಕ್ ಅಧಿಕಾರಿಗಳು ಸ್ಥಳಾಂತರಿಸುವುದಿಲ್ಲ ಎನ್ನುವ ಭರವಸೆ ನೀಡಿದ್ದರು. ಆದರೆ ಈಗ ಸದ್ದಿಲ್ಲದೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ.
ಸ್ಥಳಾಂತರ ಮಾಡಿದರೆ ಕೂಳೂರಿನಲ್ಲಿ ಯಾವುದೇ ಬ್ಯಾಂಕ್ ಅಥವಾ ಎಟಿಎಂ ಇಲ್ಲ. ಈ ಒಂದೇ ಬ್ಯಾಂಕನ್ನು ನಂಬಿಕೊಂಡಿರುವ ಈ ಭಾಗದ ಗ್ರಾಹಕರಿಗೆ ತೊಂದರೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನೆಲ ಅಂತಸ್ತಿನಲ್ಲಿ ವಿಶಾಲ ಪಾರ್ಕಿಂಗ್ ಸ್ಥಳ ಹೊಂದಿರುವ ಹೊಸ ಕಟ್ಟಡವಿದ್ದು, ಅದರಲ್ಲಿ ಶಾಖೆ ತೆರೆಯಲು ಅವಕಾಶವಿದೆ. ಬ್ಯಾಂಕ್ ಆಫ್ ಬರೋಡ ಶಾಖೆಯನ್ನು ಕೂಳೂರಿನಲ್ಲೇ ಉಳಿಸಬೇಕು ಎಂದು ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.