ಕುಳಗೇರಿ: ಹೋಬಳಿಯ ವಿವಿಧೆಡೆ ಬಾರಿ ಗಾಳಿಯೊಂದಿಗೆ ಸುರಿದ ಮಳೆಗೆ ಬಾಳೆ ಗಿಡಗಳು ನಾಶವಾಗಿವೆ.

ಬೆಳವಲಕೊಪ್ಪ ಗ್ರಾಮದ ರೈತರಾದ ಸೋಮರಡ್ಡಿ ಶಿವಪ್ಪ ಲಿಂಗರಡ್ಡಿ ಅವರಿಗೆ ಸೇರಿದ 4.26 ಎಕರೆ, ಅನ್ನಪೂರ್ಣ ಸೋಮರಡ್ಡಿ ಲಿಂಗರಡ್ಡಿ ಅವರಿಗೆ ಸೇರಿದ 2.03 ಎಕರೆ, ಸವಿತಾ ಭೀಮನಗೌಡ ನಾಡಗೌಡ್ರ ಅವರಿಗೆ ಸೇರಿದ 7.10 ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆ ತೋಟ ಕಟಾವಿಗೆ ಬಂದ ಸಂದರ್ಭದಲ್ಲಿ ನಾಶವಾಗಿದ್ದು, ಬೆಳೆಗಾರರಿಗೆ ನಷ್ಟವನ್ನುಂಟು ಮಾಡಿದೆ.
ತಿಮ್ಮಾಪೂರ ಎಸ್.ಎನ್. ಗ್ರಾಮದ ರೈತ ಸಂಗಯ್ಯ ಈರಯ್ಯ ಗಣಾಚಾರಿ ಅವರಿಗೆ ಸೇರಿದ ಒಂದು ಎಕರೆಯಲ್ಲಿ ಬೆಳೆದ ಬಾಳೆ ಮರಗಳು ನೆಲಕ್ಕುರುಳಿವೆ. ಈ ಕುರಿತು ಅವರ ಮಗ ಸಿದ್ದಯ್ಯ ಗಣಾಚಾರಿ ಮಾತನಾಡಿ, ಬಾಳೆ ಮರಗಳು ನಡು ಮುರಿದು ನಾಶವಾಗಿವೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವರದಿ ಕಳುಹಿಸಿದ್ದಾರೆ. ಸರ್ಕಾರದಿಂದ ಪರಿಹಾರ ದೊರಕಿದರೆ ನೆರವಾಗಲಿದೆ ಎಂದರು.
ಹಾನಿಗೊಳಗಾದ ಜಮೀನುಗಳಿಗೆ ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ, ಗ್ರಾಮ ಆಡಳಿತಾಧಿಕಾರಿಗಳಾದ ಲಕ್ಷ್ಮಣ ತಳವಾರ, ಸರಳಾ ಸೊಪ್ಪಿನ ಸೇರಿದಂತೆ ತೋಟಗಾರಿಕೆ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.