ವಿಜಯವಾಣಿ ಸುದ್ದಿಜಾಲ ಮಂಗಳೂರು
ಪಠ್ಯದ ಜತೆಗೆ ಕತೆ, ಕವಿತೆ, ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಅಧ್ಯಯನ ನಡೆಸುವ ಅಭಿರುಚಿ ಬೆಳೆಸಿಕೊಂಡ ವಿದ್ಯಾರ್ಥಿಗಳು ಶಾಲಾ ಪರೀಕ್ಷೆಗಳನ್ನು ನಿಭಾಯಿಸಲು ಹೆದರುವುದಿಲ್ಲ. ಯಾಕೆಂದರೆ ಸಾಹಿತ್ಯದ ಓದುಗರು ಶಾಲಾ ಪರೀಕ್ಷೆ ಸಹಿತ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ಮನೋಬಲವನ್ನು ರೂಢಿಸಿಕೊಳ್ಳುತ್ತಾರೆ ಎಂದು ಲೇಖಕಿ ಹಾಗೂ ಶಿಕ್ಷಕಿ ಸುಧಾ ನಾಗೇಶ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ ‘ಬಲೆ ತುಳು ಓದುಗ’ ಅಭಿಯಾನದ ಕೂಟ- 4 ಕಾರ್ಯಕ್ರಮದ ಭಾಗವಾಗಿ ನಗರದ ಉರ್ವಾಸ್ಟೋರ್ನಲ್ಲಿರುವ ತುಳು ಭವನದ ಗ್ರಂಥಾಲಯಕ್ಕೆ ಮಂಗಳವಾರ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಭೇಟಿ ಸಂದರ್ಭ ಏರ್ಪಡಿಸಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕತೆ, ಕವಿತೆ, ಕೋಟಿ ಚೆನ್ನಯ, ತುಳು ಪಾಡ್ದನ, ಕಾದಂಬರಿ ಓದಬೇಕು. ಕಯ್ಯಾರ ಕಿಂಞಣ್ಣ ರೈ, ಪಾಲ್ತಾಡಿ ರಾಮಕೃಷ್ಣ ಆಚಾರ್ ಮತ್ತಿತರರು ಬರೆದಿರುವ ತುಳು ಸಾಹಿತ್ಯ ಓದಬೇಕು. ತುಳುವರಿಗೆ ಪರ್ಬ ಯಾವುದು? ಪಾಡ್ದನದಲ್ಲಿ ಪಂಜುರ್ಲಿ ದೈವ ಘಟ್ಟದ ಮೇಲಿನಿಂದ ಇಳಿಯುವ ಸಂದರ್ಭ ತುಳುನಾಡನ್ನು ಹೇಗೆ ಬಣ್ಣಿಸಿದೆ? ಎಂದು ತಿಳಿಯಬೇಕು ಎಂದು ಹೇಳಿದ ಅವರು, ಮೊಬೈಲ್ ನಲ್ಲಿ ಕಳೆದುಹೋಗದಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
* ಓದುವ ಅಭಿರುಚಿ ಇಳಿಕೆ
ಹೊಸ ತಲೆಮಾರಿನ ಜನರಲ್ಲಿ ಓದುವ ಅಭ್ಯಾಸ ಕಡಿಮೆಯಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಪುಷ್ಪರಾಜ ಬಿ.ಎನ್. ಅವರು ಜ್ಞಾನದ ಬೆಳಕು ಬೆಳಗಲು ಸಾಹಿತ್ಯದ ಒದು ಆವಶ್ಯಕ. ದೇಶ ಸುತ್ತಿ ನೋಡು. ಕೋಶ ಓದಿ ನೋಡು ಎನ್ನುತ್ತಾರೆ ತಜ್ಞರು. ಹಿಂದಿನ ಕಾಲದಲ್ಲಿ ಬೀಡಿ ಕಟ್ಟುವಂತಹ ಕಾರ್ಮಿಕರಲ್ಲಿ ಕೂಡ ಓದುವ ಹವ್ಯಾಸ ಇತ್ತು ಎಂದು ನೆನಪಿಸಿಕೊಂಡರು.
ಭಾಷೆಯ ಜತೆ ಒಂದು ಸಂಸ್ಕೃತಿ ಕೂಡ ನಾಶವಾಗುತ್ತದೆ ಎನ್ನುತ್ತಾರೆ ಹಿರಿಯರು. ಶ್ರೀಮಂತ ಸಂಸ್ಕೃತಿ, ಅಗಾಧವಾದ ಸಾಹಿತ್ಯ, ಶಬ್ಧ ಬಂಡಾರ ಹೊಂದಿರುವ ತುಳು ಭಾಷೆ, ಸಾಹಿತ್ಯವನ್ನು ಹೆಚ್ಚು ಬಳಸುವಂತೆ ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.
* ಸಮೃದ್ಧ ಭಾಷೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅವರು, ಕನ್ನಡ, ಇಂಗ್ಲಿಷ್ ಸಾಹಿತ್ಯದ ಕುರಿತು ಮಾತನಾಡುವ ತುಂಬಾ ಮಂದಿ ತುಳುವಿನಲ್ಲಿ ಏನು ಇದೆ ಎಂದು ಪ್ರಶ್ನಿಸುತ್ತಾರೆ. ತುಳು ಭವನದಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 4000 ಪುಸ್ತಕಗಳಿದ್ದು, ಅವುಗಳಲ್ಲಿ ತುಳುವಿನಲ್ಲಿಯೇ ಬರೆದಿರುವ ಸುಮಾರು 2,500 ಪುಸ್ತಕಗಳು ಹಾಗೂ ಉಳಿದವು ತುಳುವಿನ ಬಗ್ಗೆ ಬರೆದಿರುವ ಇತರ ಭಾಷೆಯ ಕೃತಿಗಳು. ತುಳುವಿನ ಮಹಾಕಾವ್ಯ, ಕಾವ್ಯ, ಕಾದಂಬರಿ, ಕವಿತೆ ಸಹಿತ ಇತರ ಭಾಷೆಯಲ್ಲಿ ಲಭ್ಯವಾಗುವ ಎಲ್ಲ ಪ್ರಕಾರಗಳ ಸಾಹಿತ್ಯ ಕೃತಿಗಳು ಇಲ್ಲಿವೆ ಎಮದು ಹೇಳಿದರು.
ತುಳು ಭಾಷೆ, ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ‘ಬಲೆ ತುಳು ಓದುಗ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿ ಸಮೂಹ ಹಾಗೂ ಶಾಲಾ ಆಡಳಿತ ವ್ಯವಸ್ಥೆಯಿಂದ ಉತ್ತಮ ಸ್ಪಂದನೆ ದೊರೆತ್ತಿದೆ ಎಂದರು.ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕಿ ಪ್ರಾಧ್ಯಾಪಕಿ ತನುಜ ಎಂ ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿನಿ ಪ್ರತಿನಿಧಿ ತೇಜಸ್ವಿ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಸಂಚಾಲಕ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರ್ವಹಿಸಿದರು.
( ಚಿತ್ರ: ತುಳುಭವನದ ಗ್ರಂಥಾಲಯದಲ್ಲಿ ಅಧ್ಯಯನ ನಿರತ ವಿದ್ಯಾರ್ಥಿನಿಯರು)
