ಶನಿವಾರಸಂತೆ : ಕೌಶಲ ಮತ್ತು ಚತುರತೆ ಇದ್ದರೆ ಮಾತ್ರ ಸಾಧನೆ ಸುಲಭವಾಗುತ್ತದೆ ಎಂದು ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಸಂಗಪ್ಪ ಹೇಳಿದರು.
ಸಮೀಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಕೊಡಗು ವಿವಿ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನರ ಅರಿವು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು. ಮಕ್ಕಳು ಸೃಜನಶೀಲತೆ ಪ್ರತೀಕವಾಗಬೇಕು. ವಿಜ್ಞಾನದ ವಿಷಯದಲ್ಲಿ ಆಸಕ್ತಿ ಮತ್ತು ಸಂಶೋಧನಾತ್ಮಕ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೊಡಗು ವಿವಿ ಕುಲಸಚಿವ ಡಾ. ಎಂ.ಸುರೇಶ್, ಚಾಮರಾಜನಗರ ವಿವಿ ಕುಲಪತಿ ಎಂ.ಆರ್.ಗಂಗಾಧರ, ಮಾತನಾಡಿದರು. ಕೊಡ್ಲಿಪೇಟೆ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಪರಮೇಶ್, ನಿರ್ದೇಶಕರಾದ ಬಿ.ಕೆ.ಯತೀಶ್, ಯು.ವಿ.ಶಿವಪ್ರಸಾದ್, ಕೊಡಗು ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಗುಣಶ್ರೀ, ಪ್ರಾಂಶುಪಾಲ ಎಂ.ಆರ್.ನಿರಂಜನ, ಯೋಗೇಂದ್ರ ಇತರರು ಇದ್ದರು.