More

    ಮುಚ್ಚುತ್ತಿರುವ ಕನ್ನಡ ಶಾಲೆ ಭಾಷೆ ಉಳಿವಿಗೆ ಸವಾಲು, ಹರಿಕೃಷ್ಣ ಪುನರೂರು ಆತಂಕ

    ಕಾರ್ಕಳ: ರಾಜ್ಯದಲ್ಲಿ ವರ್ಷಕ್ಕೆ ಮೂರರಿಂದ ನಾಲ್ಕು ಸಾವಿರ ಕನ್ನಡ ಶಾಲೆಗಳು ಕಣ್ಣು ಮುಚ್ಚಿಕೊಳ್ಳುತ್ತಿವೆ. ಕನ್ನಡ ಉಳಿಸಬೇಕಾದ ಆಸಕ್ತಿ ಸರ್ಕಾರಕ್ಕೇ ಇಲ್ಲವಾಗಿದೆ. ಆಳುವವರೆಲ್ಲರೂ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವಾಗ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯಾಸಕ್ತಿ, ಭಾಷೆಯ ಅಭಿವೃದ್ಧಿ ಹೇಗೆ ನಿರೀಕ್ಷಿಸಲು ಸಾಧ್ಯ? ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
    ಕಾಂತಾವರದ ಕನ್ನಡ ಸಂಘದ ಕನ್ನಡ ಭವನದದಲ್ಲಿ ಭಾನುವಾರ ಆಯೋಜಿಸಲಾದ ಸಂಘದ 2020ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಶಸ್ತಿಗಳನ್ನು ಪ್ರದಾನಿಸಿ ಮಾತನಾಡಿದರು.

    ನಾಡೋಜ ಕೆ.ಪಿ.ರಾವ್ ಮಾತನಾಡಿ, ಭಾಷೆಗಳು ಮನುಷ್ಯನ ಮೆದುಳಿನ ಕನ್ನಡಿ. ಆಮೂರ್ತದಿಂದ ಮೂರ್ತಕ್ಕೆ ಭಾಷೆಗಳ ಮೂಲಕ ಸಂಬಂಧ ಕಲ್ಪಿಸುವುದು ತನಗಿನ್ನೂ ಸವಾಲಾಗಿಯೇ ಉಳಿದಿದೆ ಎಂದು ಹೇಳಿದರು. ಡಾ.ಯು.ಪಿ.ಉಪಾಧ್ಯಾಯರ ಜತೆ ಜಾನಪದ ಕ್ಷೇತ್ರ ಕಾರ್ಯದಲ್ಲಿ ತೊಡಗಿಕೊಂಡ ತಮಗೆ ಅವರ ಹೆಸರಿನಲ್ಲೇ ಪಡೆದ ಪ್ರಶಸ್ತಿಯ ಗೌರವದಿಂದ ಸಂತಸವಾಗಿದೆ ಎಂದು ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಅಭಿಪ್ರಾಯಪಟ್ಟರು.
    ಬರೆಯಬೇಕೆನ್ನಿಸಿದಾಗ ಬರೆದದ್ದೇ ನಿಜವಾದ ಸಾಹಿತ್ಯ ಎಂದು ಟಿ.ಎ.ಎನ್. ಖಂಡಿಗೆ ಹೇಳಿದರು. ಕಲೆ, ಶಿಕ್ಷಣ, ಸಮಾಜ ಸೇವೆಯಲ್ಲಿ ಕಂಡ ಧನ್ಯತೆಯನ್ನು ಮುರಲಿ ಕಡೆಕಾರ್‌ವಿವರಿಸಿದರು. ಇದೇ ಸಂದರ್ಭದಲ್ಲಿ ನಾಡಿಗೆ ನಮಸ್ಕಾರ ಮಾಲಿಕೆಯ ನಾಡೋಜ ಕೆ.ಪಿ.ರಾವ್, ಬೆನಗಲ್ ರಾಮರಾವ್ ಕೃತಿಗಳ ಲೋಕಾರ್ಪಣೆ ನಡೆಯಿತು.

    ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಸ್ತಾವಿಸಿದರು. ಕೃತಿಕಾರರಾದ ಡಾ.ಎನ್.ಟಿ.ಭಟ್, ಡಾ.ಸಂಪೂರ್ಣಾನಂದ ಬಳ್ಕೂರ ಅವರನ್ನು ಗೌರವಿಸಲಾಯಿತು. ಸಂಚಾಲಕ ವಿಠಲ ಬೇಲಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ತಾಮ್ರ ಮಾನಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ನಿರೂಪಿಸಿ, ವಂದಿಸಿದರು. ಕನ್ನಡ ಸಂಘದ ಕಾರ್ಯಾಧ್ಯಕ್ಷ ನಿರಂಜನ ಮೊಗಸಾಲೆ ಪ್ರಶಸ್ತಿಗಳ ಪ್ರಾಯೋಜಕರ ಪೈಕಿ ಡಾ.ಸಿ.ಕೆ.ಬಲ್ಲಾಳ್, ಕಾಂತಾವರ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ಉಪಸ್ಥಿತರಿದ್ದರು. ಅಗಲಿದ ಹಿರಿಯ ಸಾಹಿತಿ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ, ಬನ್ನಂಜೆ ಗೋವಿಂದಾಚಾರ್ಯ ಅವರ ಗೌರವಾರ್ಥ ಸಭೆಯಲ್ಲಿ ಮೌನ ಪ್ರಾರ್ಥನೆ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಪ್ರಶಸ್ತಿ ಪ್ರದಾನ: ಭಾರತೀಯ ಭಾಷಾ ಗಣಕ ಪಿತಾಮಹನ ನಾಡೋಜ ಕೆ.ಪಿ.ರಾವ್ ಅವರಿಗೆ ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗಡೆ ಸ್ಮಾರಕ ಪ್ರಶಸ್ತಿ, ವಿದ್ವಾಂಸ ಚಿಂತಕ ಕೆ.ಎಲ್.ಕುಂಡಂತಾಯ ಅವರಿಗೆ ಭಾಷಾವಿಜ್ಞಾನಿ ಡಾ.ಯು.ಪಿ.ಉಪಾಧ್ಯಾಯರ ದತ್ತಿನಿಧಿಯ ಮಹೋಪಾಧ್ಯಾಯ ಪ್ರಶಸ್ತಿ ಸಾಹಿತಿ-ಚಿಂತಕ ಟಿಎಎನ್ ಖಂಡಿಗೆ ಅವರಿಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕಾಂತಾವರ ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ಅವರ ಸಾಹಿತ್ಯ ಪ್ರಶಸ್ತಿ ಮತ್ತು ಅಪರೂಪದ ನಿವೃತ್ತ ಶಿಕ್ಷಕ ಮುರಳಿ ಕಡೆಕಾರ್ ಉಡುಪಿ ಅವರಿಗೆ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಂಪತಿ ದಿ.ಕೆ.ಬಾಲಕೃಷ್ಣ ಆಚಾರ್ಯ ಮತ್ತು ವಾಣಿ.ಬಿ. ಆಚಾರ್ಯ ಅವರ ದತ್ತಿ ನಿಧಿಯ ಶೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts