ಸಂಪಾದಕೀಯ | ಆರ್​ಟಿಐ ದುರ್ಬಳಕೆ ತಪ್ಪಿಸಿ

blank

ಸರ್ಕಾರಿ ಇಲಾಖೆಗಳ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜನರ ಕೈಗೆ ಸಿಕ್ಕ ಅಸ್ತ್ರವೇ ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ). ಸರ್ಕಾರದ ಯೋಜನೆ ಯಾವುದು, ಅದಕ್ಕೆ ಎಷ್ಟು ಖರ್ಚು ಆಗಿದೆ, ಯಾವಾಗ ಕಾಮಗಾರಿ ಪೂರ್ಣಗೊಳ್ಳುತ್ತದೆ… ಹೀಗೆ ಪ್ರತಿಯೊಂದನ್ನೂ ಪ್ರಶ್ನಿಸಿ ಮಾಹಿತಿ ತಿಳಿದುಕೊಳ್ಳಲು ಸರ್ಕಾರವೇ ಜನರಿಗೆ ಒದಗಿಸಿದ ಸೌಲಭ್ಯ ಇದು. ಆದರೆ ಇದು ಕೆಲವು ವ್ಯಕ್ತಿಗಳಿಂದ ದುರ್ಬಳಕೆ ಆಗುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಸರ್ಕಾರದ ಎಲ್ಲ ಇಲಾಖೆಗಳಿಗೂ ಆರ್​ಟಿಐನಡಿ ಸಾವಿರಾರು ಅರ್ಜಿಗಳನ್ನು ಸಲ್ಲಿಸುವುದನ್ನೇ ಕೆಲವರು ವೃತ್ತಿ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ದಾವಲ್​ಸಾಬ್ ಎಂ. ಮಿಯಾನವರ್ ಎಂಬಾತ ಬರೋಬ್ಬರಿ 9,646 ಅರ್ಜಿಗಳನ್ನು ಸಲ್ಲಿಸಿದ್ದು ಇದಕ್ಕೆ ಸಾಕ್ಷಿ. ಈ ಎಲ್ಲ ಅರ್ಜಿಗಳನ್ನು ಮಾಹಿತಿ ಹಕ್ಕು ಆಯೋಗ ವಜಾಗೊಳಿಸಿತ್ತು. ಈ ಕ್ರಮವನ್ನು ಹೈಕೋರ್ಟ್ ಕೂಡ ಈಗ ಪುರಸ್ಕರಿಸಿದೆ. ‘ಅರ್ಜಿದಾರರು ಆರ್​ಟಿಐ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ನ್ಯಾಯಸಮ್ಮತ ಕಾರಣಗಳಿಲ್ಲದೆ ಸಾವಿರಾರು ಅರ್ಜಿಗಳನ್ನು ವಿವಿಧ ಇಲಾಖೆಗಳಿಗೆ ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗ್ದುಂ ತರಾಟೆಗೆ ತೆಗೆದುಕೊಂಡಿದ್ದಾರೆ.

9,64,600 ರೂ. ಕೋರ್ಟ್ ಶುಲ್ಕವನ್ನು ಅರ್ಜಿದಾರರಿಂದ ವಸೂಲಿ ಮಾಡುವಂತೆಯೂ ಆದೇಶಿಸಿದ್ದಾರೆ. ಆರ್​ಟಿಐ ದುರ್ಬಳಕೆಗೆ ಇದೊಂದು ಸ್ಪಷ್ಟ ಉದಾಹರಣೆ. ಇಂತಹ ನೂರಾರು ಪ್ರಕರಣಗಳಿವೆ. ಇಲಾಖೆಗೆ ಪದೇಪದೆ ಆರ್​ಟಿಐನಡಿ ಅರ್ಜಿಗಳನ್ನು ಸಲ್ಲಿಸಿ ದೊಡ್ಡ ಪ್ರಮಾಣದಲ್ಲಿ ಮಾಹಿತಿ ಕೇಳುವುದು, ಅರ್ಜಿದಾರರಿಗೆ ಸಂಬಂಧವೇ ಇಲ್ಲದ ಮಾಹಿತಿಯನ್ನು ಕೇಳುವುದು, ಅಧಿಕಾರಿಗಳು ಮಾಹಿತಿ ನೀಡದ ಸ್ಥಿತಿಯಲ್ಲಿದ್ದರೆ ಹಣ ಕೀಳುವುದು ಹಾಗೂ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುವ ಉದ್ದೇಶದಿಂದಲೇ ಅರ್ಜಿ ಸಲ್ಲಿಸುವುದು – ಹೀಗೆ ಮಾಡುವ ಮೂಲಕ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ ಮಾಹಿತಿ ಹಕ್ಕು ಆಯೋಗದಲ್ಲಿ ಬೆರಳೆಣಿಕೆಯಷ್ಟು ವ್ಯಕ್ತಿಗಳು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ.

ಇದರಿಂದಾಗಿಯೇ ಸದುದ್ದೇಶದಿಂದ ಸಾಮಾನ್ಯ ಜನರು ಮತ್ತು ರೈತರು ಸಲ್ಲಿಸಿರುವ ಒಂದೋ ಎರಡೋ ಅರ್ಜಿಗಳು ಸಹ ವಿಲೇವಾರಿಯಾಗದೆ ಉಳಿದಿವೆ. ಇದೇ ಕಾರಣಕ್ಕಾಗಿ ಈ ಹಿಂದೆ 2023ರ ಆ. 31ರವರೆಗೆ ಮಾಹಿತಿ ಹಕ್ಕು ಆಯೋಗದಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ 300ಕ್ಕಿಂತ ಹೆಚ್ಚು ಮೇಲ್ಮನವಿಗಳನ್ನು ಸಲ್ಲಿಸಿರುವ ಅರ್ಜಿದಾರರ ಪಟ್ಟಿ ಸಿದ್ಧಪಡಿಸಿಕೊಂಡು ಅದರಂತೆ ಪ್ರತಿ ವಾರ ಪೂರ್ಣಪೀಠ ರಚಿಸಿಕೊಂಡು ಪ್ರಕರಣಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಆಗ ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂಬ ಕಾರಣಕ್ಕೆ ಬರೀ ಮೂವರು ಸಲ್ಲಿಸಿದ್ದ 12,382 ಅರ್ಜಿಗಳನ್ನು ಪೂರ್ಣಪೀಠ ವಜಾಗೊಳಿಸಿತ್ತು. ಇದೆಲ್ಲವೂ ಆರ್​ಟಿಐ ಹೇಗೆ ಕೆಲವರಿಂದ ದುರ್ಬಳಕೆ ಆಗುತ್ತಿದೆ ಎಂಬುದಕ್ಕೆ ಸಾಕ್ಷಿ. ಇದನ್ನು ತಪ್ಪಿಸಲು ಮತ್ತು ದುರ್ಬಳಕೆ ಮಾಡಿಕೊಂಡವರನ್ನು ಶಿಕ್ಷೆಗೊಳಪಡಿಸಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕಾಗಿದೆ.

ಚಿರಂಜೀವಿ, ಮಹೇಶ್​ ಬಾಬು… ಯಾರೊಬ್ಬರು ಸ್ಪಂದಿಸುತ್ತಿಲ್ಲ, ಸಾಯುವುದೇ ಉಳಿದಿರುವ ದಾರಿ! ಹಿರಿಯ ನಟಿ ಕಣ್ಣೀರು | Pavala Syamala

 

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…