ಎಚ್.ಡಿ.ಕೋಟೆ: ತಂಬಾಕು ರೈತರಿಗೆ ಪರ್ಯಾಯ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆ ಅವಕಾಶಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಮರ್ಥನೀಯ ಪೌಷ್ಟಿಕ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಗುರಿಯನ್ನು ಜಾಗತಿಕ ಅಭಿಯಾನ ಹೊಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.

ಪಟ್ಟಣದ ವಿಶ್ವಭಾರತಿ ಕಾಲೇಜಿನಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವ ಜನಾಂಗ ಮೋಜಿಗಾಗಿ ಶುರು ಮಾಡುವ ಬೀಡಿ, ಸಿಗರೇಟ್ ಸೇವನೆ ಮುಂದಿನ ದಿನಗಳಲ್ಲಿ ಅವು ನಮ್ಮ ದೇಹವನ್ನೇ ತಿನ್ನುತ್ತವೆ ಎನ್ನುವ ಅರಿವು ಕೂಡ ಇರುವುದಿಲ್ಲ. ಧೂಮಪಾನದಿಂದ ಸ್ವಲ್ಪಮಟ್ಟಿಗೆ ಒತ್ತಡ ಕಡಿಮೆ ಆಗುತ್ತದೆ ಎನ್ನುವುದು ಸುಳ್ಳು. ಇನ್ನು ಬೀಡಿ ಅಥವಾ ಸಿಗರೇಟ್ ಸೇದುವುದರಿಂದ ರಕ್ತಪರಿಚಲನೆ ಉಂಟಾಗಿ ಇನ್ನೂ ಒತ್ತಡ ಹೆಚ್ಚಾಗುತ್ತಿದೆ. ಆರೋಗ್ಯ ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ಹಾಗಾಗಿ ತಂಬಾಕು ಸೇವನೆಯಿಂದ ದೂರ ಇದ್ದರೆ ಉತ್ತಮ ಎಂದರು.
ತಂಬಾಕಿನಿಂದ ಬರುವ ಶ್ವಾಸಕೋಶ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ವಸಡು ಕ್ಯಾನ್ಸರ್ ಸೇರಿದಂತೆ ಇನ್ನಿತರ ಮಾರಕ ರೋಗಗಳ ಬಗ್ಗೆ ಅರಿವು ಮೂಡಿಸಿದರು. ಜತೆಗೆ ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಪರಾಗ್ ಸೇರಿದಂತೆ ಇನ್ನಿತರ ತಂಬಾಕಿನಿಂದ ತಯಾರಾಗುವ ವಸ್ತುಗಳನ್ನು ಸೇವಿಸದೆ ದೂರ ಉಳಿಯುವಂತೆ ಮನವಿ ಮಾಡಿಕೊಂಡರು.
ವಿಶ್ವಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಡಿ.ಕುಮಾರಸ್ವಾಮಿ. ಉದಯ್ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ, ರವಿರಾಜ್, ಅಶೋಕ್, ಅರಳಪ್ಪ, ಸಮುದಾಯ ಆರೋಗ್ಯ ಅಧಿಕಾರಿಗಳು, ಕಾಲೇಜಿನ ಉಪನ್ಯಾಸಕರು, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.