ಕಾಸರಗೋಡು: ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಡೂರು ನಿವಾಸಿ ಕಲಂದರ್ ಶಾಫಿ ಎಂಬಾತನ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೊಲೆ ಯತ್ನ ಕೇಸ್ ದಾಖಲಿಸಿಕೊಂಡಿದ್ದಾರೆ. ಕಲಂದರ್ ಶಾಫಿಯ ಪತ್ನಿ ಕುಂಬ್ಡಾಜೆ ಬೆಳಿಂಜ ನಿವಾಸಿ ಸಾಜಿದಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಕಲಂದರ್ಶಾಫಿ-ಸಾಜಿದಾ ವಿವಾಹ 2019ರಲ್ಲಿ ನಡೆದಿದ್ದು, ನಂತರ ಪತಿ ಹಾಗೂ ಇತರ ಇಬ್ಬರು ಹೆಚ್ಚಿನ ವರದಕ್ಷಿಣೆ ತಂದುಕೊಡುವಂತೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ನೀರ್ಚಾಲು ಮುಗು ರಸ್ತೆಯ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಆರಂಭಿಸಿದ ನಂತರ ಪತಿ, ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ ಪತ್ನಿಯ ಮೇಲೆ ಪತಿ ಹಾಗೂ ಇತರ ಇಬ್ಬರು ಸೇರಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
