ಮುಜಾಫರಾಬಾದ್: ಕಾಶ್ಮೀರಿಗರು ಭಾರತದ ವಿರುದ್ಧ ನಿಲ್ಲಬೇಕು. ಬಿಜೆಪಿ-ಆರೆಸ್ಸೆಸ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಹೋರಾಟಕ್ಕೆ ಸಿದ್ಧರಾಗಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ.
ಜಮ್ಮು- ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯುವ ಉದ್ದೇಶದಿಂದ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಾಫರಾಬಾದ್ನಲ್ಲಿ ಶುಕ್ರವಾರ ಒಗ್ಗಟ್ಟಿನ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಇಮ್ರಾನ್ ಭಾರತದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈಹಾಕಿದ್ದಾರೆ.
‘ವಿಶ್ವದೆದುರು ಕಾಶ್ಮೀರದ ರಾಯಭಾರಿಯಾಗಿ ಪಾಕ್ ಇರಲಿದೆ. ವಿಶ್ವಸಂಸ್ಥೆ ಮಹಾಅಧಿವೇಶನದಲ್ಲೂ ಕಾಶ್ಮೀರಿಗರಿಗೆ ನಿರಾಸೆ ಮಾಡುವುದಿಲ್ಲ. ಅಲ್ಲೂ ಕಾಶ್ಮೀರಿಗರ ವಿರುದ್ಧ ಭಾರತ ನಡೆಸುತ್ತಿರುವ ಅಮಾನವೀಯ ಕೃತ್ಯಗಳನ್ನು ಜಗತ್ತಿನೆದುರು ತೆರೆದಿಡುತ್ತೇನೆ ’ಎಂದಿದ್ದಾರೆ. ನರೇಂದ್ರ ಮೋದಿ ಸರ್ಕಾರ ಆರೆಸ್ಸೆಸ್ ಅಜೆಂಡಾ ಆಧರಿಸಿ ಕಾರ್ಯನಿರ್ವಹಿಸುತ್ತಿದ್ದು, ಹಿಂದುಗಳು ಮಾತ್ರವೇ ಭಾರತದಲ್ಲಿ ನೆಲೆಸಬೇಕು ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಒಂದು ವೇಳೆ ಭಾರತ ವಿಪರೀತದ ಹೆಜ್ಜೆ ಇಟ್ಟರೆ ಪಾಕಿಸ್ತಾನ ಇದಕ್ಕೆ ದಿಟ್ಟ ಉತ್ತರವನ್ನೇ ನೀಡಲಿದೆ ಎಂದು ಹೇಳಿದ್ದಾರೆ.
ಅನಿರೀಕ್ಷಿತ ಯುದ್ಧವೆಂದ ಪಾಕ್ ಸಚಿವ
ಜಮ್ಮು-ಕಾಶ್ಮೀರದಲ್ಲಿನ ಈಗಿನ ಸ್ಥಿತಿ ಅನಿರೀಕ್ಷಿತ ಯುದ್ಧಕ್ಕೆ ಕಾರಣವಾಗಬಹುದು ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಜಿನೀವಾದಲ್ಲಿ ತಿಳಿಸಿದ್ದಾರೆ. ಪಾಕ್ ಮತ್ತು ಭಾರತಕ್ಕೆ ಯುದ್ಧದ ಪರಿಣಾಮಗಳ ಬಗ್ಗೆ ಅರಿವಿದೆ ಹೀಗಾಗಿ ತಾನಾಗಿಯೇ ಯುದ್ಧಕ್ಕೆ ಮುಂದಾಗುವ ಸಾಧ್ಯತೆ ಕಡಿಮೆ. ಆದರೆ ಅನಿರೀಕ್ಷಿತ ಯುದ್ಧವನ್ನು ಅಲ್ಲಗಳೆಯಲಾಗದು ಎಂದಿದ್ದಾರೆ.
ಕಾಶ್ಮೀರಿಗಳ ತಾಳ್ಮೆ ಪರೀಕ್ಷೆ
‘ನಾವು ಶಾಂತಿಯನ್ನು ಬಯಸುತ್ತೇವೆ. ಆದರೆ, ಮೋದಿ ಅಮಾಯಕ ಕಾಶ್ಮೀರಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಕಾಶ್ಮೀರಿಗರು ಭಾರತದ ವಿರುದ್ಧ ನಿಲ್ಲಬೇಕು. ಭಾರತೀಯ ಪಡೆಗಳ ಹಿಂಸೆಯಿಂದ ಬೇಸತ್ತು 20 ವರ್ಷದ ಕಾಶ್ಮೀರಿ ಯುವಕನೊಬ್ಬ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ. ಆದರೆ, ಭಾರತ ಇದರ ಆರೋಪವನ್ನು ನಮ್ಮ ಮೇಲೆ ಹೊರಿಸಿತು. ಬಾಲಾಕೋಟ್ನಲ್ಲಿ ಏರ್ಸ್ಟ್ರೈಕ್ ನಡೆಸಿತು. ನಾವು ಅವರ ಜೆಟ್ನ್ನು ಹೊಡೆದುರುಳಿಸಿದೆವು. ಬಂಧಿತನಾದ ಪೈಲಟ್ನನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅನಾವಶ್ಯಕವಾಗಿ ಯುದ್ಧ ಬೇಡವೆಂದು ಪೈಲಟ್ನ್ನು ಹಿಂದಕ್ಕೆ ಕಳುಹಿಸಿಕೊಟ್ಟೆವು. ಆದರೆ, ಮೋದಿ ಅಂತಾರಾಷ್ಟ್ರೀಯ ಒತ್ತಡದ ಕಾರಣದಿಂದ ಪೈಲಟ್ನ್ನು ಬಿಡುಗಡೆ ಮಾಡಲಾಗಿದೆ ಎಂದು ದೇಶದ ಜನರನ್ನು ನಂಬಿಸುತ್ತಿದ್ದಾರೆ ಎಂದು ಖಾನ್ ಹೇಳಿದ್ದಾರೆ.
ಟ್ರೋಲ್ ಆಯ್ತು ಟ್ವೀಟ್
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಟ್ವಿಟ್ಟರ್ನಲ್ಲಿ ಭಾರಿ ಟ್ರೋಲ್ಗೊಳಗಾಗಿದ್ದಾರೆ. ಇತ್ತೀಚೆಗೆ ಜಿನೀವಾದಲ್ಲಿ ನಡೆದ ವಿಶ್ವ ಸಂಸ್ಥೆ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ದೇಶಗಳು ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಿಲುವಿಗೆ ಬೆಂಬಲ ಸೂಚಿಸಿವೆೆ ಎಂದು ಹೇಳಲು ಹೋಗಿ ಟ್ರೋಲ್ಗೊಳಗಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಇಮ್ರಾನ್, ಕಾಶ್ಮೀರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆ, ನಾಯಕರ ಬಂಧನ, ಇತರ ನಿರ್ಬಂಧಗಳನ್ನು ತೊಡೆದು ಹಾಕಿ ಕಾಶ್ಮೀರಿಗರನ್ನು ರಕ್ಷಿಸಬೇಕು, ಯುಎನ್ಎಸ್ಸಿ ನಿರ್ಣಯದಂತೆ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂಬ ಪಾಕಿಸ್ತಾನದ ಬೇಡಿಕೆಗೆ ಸೆ.10ರಂದು ಮಾನವಹಕ್ಕು ಮಂಡಳಿ ಸಭೆಯಲ್ಲಿ ಬೆಂಬಲಿಸಿದ 58 ರಾಷ್ಟ್ರಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರ ನಿಲುವನ್ನು ಪ್ರಶಂಸಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಆದರೆ, ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಯಲ್ಲಿ 47 ಸದಸ್ಯ ರಾಷ್ಟ್ರಗಳಿವೆ. ಹೀಗಾಗಿ ಪಾಕ್ ಬೆಂಬಲಕ್ಕೆ ನಿಂತ 58 ರಾಷ್ಟ್ರಗಳು ಯಾವುವು ಎಂದು ಕಾಲೆಳೆದಿದ್ದಾರೆ.
ಅಮೆರಿಕದ ಹಣದಲ್ಲಿ ಉಗ್ರರಿಗೆ ತರಬೇತಿ ಎಂದ ಇಮ್ರಾನ್
ಭಯೋತ್ಪಾದನೆ ನಿಯಂತ್ರಣಕ್ಕಾಗಿ ಅಮೆರಿಕದಿಂದ ಹರಿದುಬರುವ ಸಾವಿರಾರು ಕೋಟಿ ಡಾಲರ್ ಅನುದಾನ ವನ್ನು ಆಫ್ಘಾನ್ ಯುದ್ಧ ಸಂದರ್ಭದಲ್ಲಿ ಪಾಕ್ ಉಗ್ರ ಚಟುವಟಿಕೆಗಳಿಗೆ ಬಳಸಿದ್ದು ನಿಜ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
1980ರ ದಶಕದಲ್ಲಿ ಅಮೆರಿಕ ಹಣಕಾಸು ನೆರವು ಹಾಗೂ ಗುಪ್ತಚರ ಸಂಸ್ಥೆ ಸಿಐಎ ನೆರವಿನೊಂದಿಗೆ ಜಿಹಾದಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿತ್ತು ಎಂದು ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಜಿಹಾದಿಗಳು ಬೇರು ಬಿಡಲು ಅಮೆರಿಕ ಕಾರಣ. ಉಗ್ರರನ್ನು ಬೆಳೆಸಲು ಅಮೆರಿಕ ಉತ್ತೇಜಿಸಿತು. ಅದು ನೀಡಿದ ಹಣದಿಂದಲೇ ಉಗ್ರರಿಗೆ ತರಬೇತಿ ನೀಡಲಾಯಿತು ಎಂದು ‘ರಷ್ಯಾ ಟುಡೇ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಅಮೆರಿಕ ವಿರುದ್ಧ ಕಿಡಿ: 1980ರ ದಶಕದಲ್ಲಿ ಅಫ್ಘಾನಿಸ್ತಾನದ ಮೇಲೆ ಹಿಡಿತ ಹೊಂದಿದ್ದ ಸೋವಿಯತ್ ಯೂನಿಯನ್ ವಿರುದ್ಧ ಮುಜಾಹಿದ್ದೀನ್ಗಳನ್ನು ಹುಟ್ಟುಹಾಕಲಾಯಿತು. ಜಿಹಾದಿಗಳಿಗೆ ಅಮೆರಿಕವೇ ಪಾಕಿಸ್ತಾನದಲ್ಲಿ ತರಬೇತಿ ನೀಡಿತ್ತು. ಸಿಐಎಯಿಂದ ಕಠಿಣ ತರಬೇತಿಗಳನ್ನೂ ನೀಡಲಾಯಿತು. ಇದಕ್ಕೆ ಅಮೆರಿಕ ಹಣವನ್ನೂ ಪೂರೈಸುತ್ತಿತ್ತು. ಇದರ ಪರಿಣಾಮವಾಗಿ 10 ವರ್ಷಗಳ ನಂತರ ಅಫ್ಘಾನಿಸ್ತಾನದ ಮೇಲೆ ಅಮೆರಿಕ ಹಿಡಿತ ಸಾಧಿಸುವಂತಾಯಿತು. ಆದರೆ ಈಗ ಪಾಕಿಸ್ತಾನ ವಿರುದ್ಧವೇ ಆರೋಪ ಮಾಡಲಾಗುತ್ತಿದೆ ಎಂದು ಅಮೆರಿಕವನ್ನು ಇಮ್ರಾನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದು ಪಾಕ್ ತಟಸ್ಥ ನೀತಿ ಅನುಸರಿಸಿದ್ದರೆ ಈಗ ತಾಲಿಬಾನ್ ಮುಂತಾದ ಉಗ್ರ ಸಂಘಟನೆಗಳನ್ನು ಎದುರಿಸುವ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
ಹಫೀಜ್ ಸಯೀದ್ನ ಜಮಾತ್-ಉದ್-ದಾವಾ ಸೇರಿ ಹಲವು ಉಗ್ರ ಸಂಘಟನೆಗಳಿಗೆ ನೂರಾರು ಕೋಟಿ ಹಣ ಸಂದಾಯವಾಗುತ್ತಿದೆ.
| ಇಜಾಜ್ ಅಹ್ಮದ್ ಶಾ, ನಿವೃತ್ತ ಬ್ರಿಗೇಡಿಯರ್, ಪಾಕ್ನ ಆಂತರಿಕಾ ಭದ್ರತಾ ಸಚಿವ