ಕೊಪ್ಪಳ: ಚುನಾವಣೆ ಹಿನ್ನೆಲೆಯಲ್ಲಿ ನಗರದ ಗವಿಸಿದ್ಧೇಶ್ವರ ಕಾಲೇಜಿನಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಸಾಮಾನ್ಯ, ಚುನಾವಣಾ ವೆಚ್ಚ ಮತ್ತು ಪೊಲೀಸ್ ವೀಕ್ಷಕರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾಮಾನ್ಯ ವೀಕ್ಷಕರಾದ ವಿ.ಸಂಪತ್, ಸ್ವಪ್ನಿಲ್ ಎಂ. ನಾಯಕ, ಭಾನಾ ಪ್ರಕಾಶ ಯಾತರಾ ಹಾಗೂ ಪೊಲೀಸ್ ವೀಕ್ಷಕ ಮನೋಜ್ ತಿವಾರಿ ಮತ್ತು ಚುನಾವಣಾ ವೆಚ್ಚ ವೀಕ್ಷಕ ಎಸ್.ಆರ್.ನೆಡುಮಾರನ್ ಎಣಿಕೆ ಕೇಂದ್ರದ ಸಿದ್ಧತೆ, ಬಂದೋಬಸ್ತ್ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಚುನಾವಣೆ ಮೂಲಸೌಕರ್ಯ ಕಲ್ಪಿಸಲಾಗಿದೆ
ಡಿಸಿ ಎಂ.ಸುಂದರೇಶ ಬಾಬು ಮಾತನಾಡಿ, ನೆಲ ಮಹಡಿಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ 1 ಮತ ಎಣಿಕೆ ಕೇಂದ್ರ ಮತ್ತು 2 ಭದ್ರತಾ ಕೊಠಡಿಗಳನ್ನು, ಕುಷ್ಟಗಿ ವಿಧಾನಸಭಾ ಕ್ಷೇತ್ರದ 1 ಮತ ಎಣಿಕೆ ಕೇಂದ್ರ ಮತ್ತು 1 ಭದ್ರತಾ ಕೊಠಡಿ ನಿರ್ಮಿಸಲಾಗಿದೆ.
1ನೇ ಮಹಡಿಯಲ್ಲಿ ಗಂಗಾವತಿ, ಯಲಬುರ್ಗಾ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ 1 ಮತ ಎಣಿಕೆ ಕೇಂದ್ರ ಮತ್ತು ಭದ್ರತಾ ಕೊಠಡಿ ಗುರುತಿಸಲಾಗಿದೆ. ಇದರೊಂದಿಗೆ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸುವ ವಾಹನ ಸವಾರರೇ ಹುಷಾರ್; ಚುನಾವಣೆ ಬಳಿಕ ಮನೆಗೆ ಬಂದು ದಂಡ ಸಂಗ್ರಹಿಸಲಿದ್ದಾರೆ ಪೊಲೀಸರು!
ವಿವಿಧ ಕಡೆಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ
ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ, ಬ್ಯಾರಿಕೇಡಿಂಗ್ ವ್ಯವಸ್ಥೆ ಮತ್ತು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ದಿನದಂದು ವಾಹನ ದಟ್ಟಣೆ ತಡೆಯಲು ವಿವಿಧ ಕಡೆಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಸಿಬ್ಬಂದಿ, ಎಣಿಕೆ ಏಜೆಂಟರ ತಪಾಸಣೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳಿದ್ದರು.