ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸೋಮವಾರ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ, ರೋಡ್ ಶೋ ಕಾರಣದಿಂದಾಗಿ ಮಂಗಳವಾರಕ್ಕೆ ಮುಂದೂಡಲಾಗಿದೆ.
ಕೇಜ್ರಿವಾಲ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೃಹತ್ ರೋಡ್ ಶೋ ಆಯೋಜಿಸಲಾಗಿತ್ತು. 3 ಗಂಟೆಯ ಒಳಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ, ರೋಡ್ ಶೋ ಕಾರಣದಿಂದಾಗಿ ನಿಗದಿತ ಸಮಯದಲ್ಲಿ ನಾಮಪತ್ರ ಸಲ್ಲಿಸುವ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಕಾರಣ ನಾಳೆಗೆ ಮುಂದೂಡಲಾಗಿದೆ. ಅದಲ್ಲದೆ ನಾಮಪತ್ರ ಸಲ್ಲಿಕೆಗೆ ನಾಳೆಯೇ ಕೊನೆಯ ದಿನವಾಗಿದೆ.
ಈ ಬಗ್ಗೆ ಮಾತನಾಡಿರುವ ಕೇಜ್ರಿವಾಲ್, ನಾನು ನಾಮಪತ್ರ ಸಲ್ಲಿಸಬೇಕೆಂದು ಹೇಳಿದೆ. ಆದರೆ, ನಾನು ಹೇಗೆ ಅವರನ್ನು(ರೋಡ್ ಶೋಗೆ ಬಂದಿದ್ದ ಜನರು) ಬಿಟ್ಟು ಹೋಗಲಿ? ಹೀಗಾಗಿ ನಾಳೆ ಹೋಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಬೃಹತ್ ರೋಡ್ ಶೋ ವಾಲ್ಮೀಕಿ ಮಂದಿರದಿಂದ ಆರಂಭವಾಗಿ ಕೇಜ್ರವಾಲ್ ಅವರ ವಿಧಾನಸಭಾ ಕ್ಷೇತ್ರ ನವದೆಹಲಿಯ ಚುನಾವಣಾ ಕಚೇರಿಗೆ ಹೋಗಬೇಕಾಗಿತ್ತು. ಆದರೆ, ತುಂಬಾ ಜನ ಇದ್ದುದರಿಂದ ನಿಗದಿತ ಸಮಯಕ್ಕೆ ಸ್ಥಳ ತಲುಪಲು ಸಾಧ್ಯವಾಗಲಿಲ್ಲ.
ತೆರೆದ ವಾಹನದಲ್ಲಿ ಆಮ್ ಆದ್ಮಿ ಪಕ್ಷದ ಸಂಕೇತವನ್ನು ಹಿಡಿದು ಕೇಜ್ರಿವಾಲ್ ನಾಮಪತ್ರ ಸಲ್ಲಿಸಲು ಹೊರಟಿದ್ದರು. ಅವರ ಸುತ್ತ ಸಾವಿರಾರು ಮಂದಿ ಪಕ್ಷದ ಪರ ಹಾಗೂ ಕೇಜ್ರಿವಾಲ್ ಪರ ಜಯಘೋಷ ಮೊಳಗಿಸಿದರು.
ಅಂದಹಾಗೆ ದೆಹಲಿ ಚುನಾವಣೆ ಫೆ.8ಕ್ಕೆ ನಡೆಯಲಿದ್ದು, ಫೆ.11ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)