More

    ಭರವಸೆ ಬಿತ್ತುವ, ಸಂದೇಶ ಸಾರುವ ಪವಿತ್ರ ಮಾಸ

    ಭರವಸೆ ಬಿತ್ತುವ, ಸಂದೇಶ ಸಾರುವ ಪವಿತ್ರ ಮಾಸ| ಸಬಿಹಾ ಫಾತಿಮಾ

    ಚಾಂದ್ರಮಾನ ಕ್ಯಾಲೆಂಡರ್ ಅಥವಾ ಹಿಜರಿ ಕ್ಯಾಲೆಂಡರಿನ ಪ್ರಥಮ ತಿಂಗಳ ಹೆಸರೇ ಮೊಹರಂ. ಬಹುಧರ್ವಿುಯ, ಬಹು ಸಂಸ್ಕೃತಿಯ ಭವ್ಯ ಭಾರತದಲ್ಲಿ ಬಾಳಿ ಬದುಕುತ್ತಿರುವವರಲ್ಲಿ ಮೊಹರಂ ಎಂಬುದು ಮುಸ್ಲಿಮರ ಒಂದು ಹಬ್ಬ ಎಂಬ ನಂಬಿಕೆ ಪ್ರಚಲಿತವಾಗಿದೆ. ಆದರೆ ಇಸ್ಲಾಮಿನಲ್ಲಿ ಎರಡೇ ಹಬ್ಬಗಳು. ಚಾಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳು ರಂಜಾನಿನ ಉಪವಾಸ ಮುಗಿಸಿ 10ನೇ ತಿಂಗಳ ಆರಂಭ ಶವ್ವಾಲ್ ತಿಂಗಳ ಒಂದರಂದು ಆಚರಿಸುವ ಈದುಲ್ ಫಿತ್ರ್ ಮತ್ತು ಅದರ ಎರಡು ತಿಂಗಳು 10 ದಿನಗಳ ಬಳಿಕ ಆಚರಿಸುವ ಈದುಲ್ ಅಝ್ಹಾ ಎಂಬ ಬಕ್ರೀದ್ ಅಥವಾ ಬಲಿದಾನದ ಹಬ್ಬ. ಈ ಎರಡು ಹಬ್ಬಗಳ ಹೊರತು ಬರುವ ವಿಶೇಷ ದಿನಗಳನ್ನು ಸಹಜವಾಗಿಯೇ ಹಬ್ಬದ ದಿನಗಳು ಎಂದು ತಿಳಿಯಲಾಗುತ್ತದೆ. ಮೊಹರಂ ಎಂಬುದು ಹಬ್ಬದ ಹೆಸರಲ್ಲ ತಿಂಗಳ ಹೆಸರು. ಈ ತಿಂಗಳ ಹತ್ತನೇ ತಾರೀಖು ಆಶೂರ ದಿನ ಎಂದು ಕರೆಯಲ್ಪಡುತ್ತದೆ. ಈ ದಿನ ಉಪವಾಸವಿರುವುದು ಅತಿ ಹೆಚ್ಚು ಪ್ರತಿಫಲಕ್ಕೆ ಅರ್ಹವಾದದು ಎಂದು ಪ್ರವಾದಿ ಮುಹಮ್ಮದರು ಕಲಿಸಿಕೊಟ್ಟಿದ್ದಾರೆ.

    ಈ ತಿಂಗಳ ವಿಶೇಷತೆ: ಇದು ಹಿಜರಿ 1444 ನೇ ವರ್ಷದ ಮೊಹರಂ ತಿಂಗಳು. ಸೃಷ್ಟಿಕರ್ತನಾದ ಅಲ್ಲಾಹನು ಪ್ರಥಮ ಮಾನವ ಆದಮರನ್ನು ಸೃಷ್ಟಿಸಿ ಸ್ವರ್ಗದಲ್ಲಿ ಇರಿಸಿದನು. ಬಳಿಕ ಅವರಿಗೆ ಜತೆಗಾತಿಯಾಗಿ ಹವ್ವಾ ಎಂಬ ಸ್ತ್ರೀಯನ್ನು ಸೃಷ್ಟಿಸಿದನು. ಇವರು ಜಗತ್ತಿನ ಆದಿಪಿತ ಮತ್ತು ಆದಿಮಾತೆ. ಇವರು ಸ್ವರ್ಗದಲ್ಲಿ ಪರೀಕ್ಷಿಸಲ್ಪಟ್ಟು ಭೂಮಿಗೆ ಕಳುಹಿಸಲ್ಪಟ್ಟ ತಿಂಗಳು ಮೊಹರಂ. ಅವರ ಸಂತಾನ ಪರಂಪರೆಗಳೇ ಮುಂದುವರಿದುಕೊಂಡು ಜಗತ್ತಿನಾದ್ಯಂತ ಚದುರಿ ಹಲವು ಕುಲ, ಗೋತ್ರ, ಜನಾಂಗಗಳಾಗಿ ವಿಭಜನೆಯಾದವು. ಇದು ಪರಸ್ಪರರನ್ನು ಗುರುತಿಸಲಿಕ್ಕಿರುವ ಉಪಾದಿ ಮಾತ್ರ ಎಂದು ಪವಿತ್ರ ಕುರಾನ್ ಹೇಳುತ್ತದೆ.

    ‘ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಿಚಯಪಟ್ಟುಕೊಳ್ಳಲಿಕ್ಕಾಗಿ ಜನಾಂಗಗಳನ್ನು ಗೋತ್ರಗಳನ್ನಾಗಿಯೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠೆ ಇರುವವನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನು ವಿವರಪೂರ್ಣನು ಆಗಿರುತ್ತಾನೆ’(49:13)

    ಅದೇ ರೀತಿ ಕಾಲಾಂತರದಲ್ಲಿ ಬಂದ ಪ್ರವಾದಿ ನೂಹರನ್ನು ಹಡಗಿನ ಮೂಲಕ ಪ್ರಳಯದಿಂದ ಪಾರುಗೊಳಿಸಿ ದುಷ್ಟ ವ್ಯಕ್ತಿಗಳಿಂದ ಸಂರಕ್ಷಿಸಿದ ಘಟನೆ ಕೂಡ ಇದೇ ತಿಂಗಳಲ್ಲಿ ನಡೆಯಿತು. ಸಹಸ್ರಾರು ವರ್ಷಗಳ ಬಳಿಕ ಬಂದ ದೇವ ಸಂದೇಶವಾಹಕ ಮೂಸಾ ಅಂದಿನ ದುಷ್ಟ ಚಕ್ರವರ್ತಿ ಸ್ವೇಚ್ಛಾಧಿಕಾರಿ, ಕ್ರೂರಿ ಫರೋವನ ವಿರುದ್ಧ, ಅವನ ಅಧಿಕಾರದ ವಿರುದ್ಧ ಸೆಟೆದು ನಿಂತು ಅವನಿಂದ ತುಳಿತಕ್ಕೊಳಗಾದ ಬಡಪಾಯಿ ಇಸ್ರಾಯಿಲಿ ವಂಶದವರನ್ನು ದೇವನ ಆದೇಶದ ಪ್ರಕಾರ ನೈಲ್ ನದಿ ದಾಟಿಸಿ ರಕ್ಷಿಸಿದ ಮತ್ತು ಫರೋವನು ಅದೇ ಸಮುದ್ರದಲ್ಲಿ ಮುಳುಗಿ ಸತ್ತ ಘಟನೆಯು ಸಂಭವಿಸಿದ ಐತಿಹಾಸಿಕ ಮಹತ್ವವುಳ್ಳ ತಿಂಗಳು.

    ಕಾಲಾಂತರಗಳಲ್ಲಿ ಇಂದಿಗೆ ಸರಿಸುಮಾರು 1450 ವರ್ಷಗಳ ಹಿಂದೆ ಮಕ್ಕಾದಲ್ಲಿ ಬಂದ ಪ್ರವಾದಿ ಮುಹಮ್ಮದರು ‘ನಾನು ಕೇವಲ ದೇವನ ಸಂದೇಶವಾಹಕನಾಗಿ ನಿಯುಕ್ತನಾಗಿದ್ದೇನೆ’ ಎಂಬ ಸತ್ಯದ ಸಂದೇಶವನ್ನು ಜನರಿಗೆ ತಲುಪಿಸಲು ಪ್ರಯತ್ನಿಸಿದ ಕಾರಣಕ್ಕಾಗಿ ಅದುವರೆಗೆ ಸಮಾಜದಲ್ಲಿ ಸತ್ಯಸಂಧ, ಪ್ರಾಮಾಣಿಕ ಎಂದು ಬಿರುದುಕೊಟ್ಟು ಗೌರವಿಸಿದ್ದ ವ್ಯಕ್ತಿಯನ್ನು ತಿರಸ್ಕರಿಸಿಬಿಟ್ಟರು. 13 ವರ್ಷಗಳ ಕಾಲ ನಿರಂತರ ನಿಂದನೆ, ಪೀಡನೆ ಮತ್ತು ಅವಮಾನಗಳಿಗೆ ಗುರಿಯಾಗಿಸಿದರು.

    ಇವೆಲ್ಲವುಗಳನ್ನು ಸಹಿಸಿ ಕೊನೆಗೆ ದೇವನ ಆದೇಶದ ಪ್ರಕಾರ ಆ ಮಕ್ಕಾವನ್ನು ತೊರೆದು ಮದೀನಾಕ್ಕೆ ವಲಸೆ ಹೋದ ಘಟನೆ ಇತಿಹಾಸ ಪ್ರಸಿದ್ಧವಾದ ಹಿಜರ ಸಂಭವಿಸಿದ್ದು ಇದೇ ಮೊಹರಂ ತಿಂಗಳಲ್ಲಾಗಿತ್ತು. ಹಿಜರ ಒಂದು ಪಲಾಯನವಾಗಿರಲಿಲ್ಲ. ಅದೊಂದು ಹೊಸ ಭರವಸೆಯಾಗಿತ್ತು. ಹಿಜರ ಹೋಗುವಾಗ ದಾರಿ ಮಧ್ಯೆ ಸೌರ್ ಎಂಬ ಗುಹೆಯಲ್ಲಿ ಪ್ರವಾದಿ ಮುಹಮ್ಮದ್ ಗೆಳೆಯ ಅಬೂಬಕರ್​ರೊಂದಿಗೆ ಅಡಗಿಕೊಂಡರು. ಅಬೂಬಕ್ಕರ್ ಹೆದರಿಬಿಟ್ಟಿದ್ದರು. ಆದರೆ ಪ್ರವಾದಿಯವರು ‘ನೀವು ಭಯಪಡಬೇಡಿರಿ. ಅಲ್ಲಾಹನು ನಮ್ಮೊಂದಿಗೆ ಇದ್ದಾನೆ’ ಎಂಬ ಭರವಸೆಯನ್ನು ನೀಡಿದರು. ಈ ರೀತಿ ಹತ್ತು ಹಲವು ಅವಿಸ್ಮರಣೀಯ ಪಾಠಪ್ರದವಾದ ಘಟನೆಗಳಿಗೆ ಕಾರಣವಾದ ಈ ತಿಂಗಳನ್ನು ಅಂತಿಮ ಪ್ರವಾದಿಯವರಿಗೆ ಅವತೀರ್ಣಗೊಳಿಸಿದ ಪವಿತ್ರ ಕುರಾನ್​ನಲ್ಲಿ ‘ಶಹರುಲ್ಲಾಹ್’ ಅಂದರೆ ಅಲ್ಲಾಹನ ತಿಂಗಳು ಎಂದು ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಈ ಪವಿತ್ರ ತಿಂಗಳಲ್ಲಿ ಹೊಸ ವರ್ಷದ ಆರಂಭ ಎಂಬ ನಿಟ್ಟಿನಲ್ಲಿ ಮನುಷ್ಯನಿಗೆ ತನ್ನ ಬಗ್ಗೆ ಆಲೋಚಿಸಲು, ತನ್ನಿಂದ ಸಂಭವಿಸಿದ ತಪ್ಪುಗಳಿಗಾಗಿ ದೇವನೊಂದಿಗೆ ಕ್ಷಮೆಯಾಚಿಸಲು, ದೇವನೊಂದಿಗೆ ಇಟ್ಟುಕೊಂಡಂತೆಯೇ ಸಹಜೀವಿಗಳೊಂದಿಗೂ ಅತ್ಯುತ್ತಮ ಸಂಬಂಧ ಇರಿಸಿಕೊಳ್ಳಲು ಹೊಸ ಸ್ಪೂರ್ತಿಯನ್ನು ಈ ತಿಂಗಳು ನೀಡುತ್ತದೆ.

    ವರ್ಷಗಳು ಉರುಳುತ್ತಿರುತ್ತವೆ. ಆದರೆ ನಾವೆಷ್ಟು ದಿನ ಬದುಕಿರುತ್ತೇವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇರುವಷ್ಟು ಕಾಲ ದೇವನು ಹೇಳಿದಂತೆ ಬಾಳನ್ನು ಸಾಗಿಸುವ ಬಗೆ ಹೇಗೆ ಮತ್ತು ಅಂತಹ ವ್ಯಕ್ತಿಗಳನ್ನು ದೇವನು ಹೇಗೆ ಸಹಾಯ ಮಾಡಿ ಸಂರಕ್ಷಿಸುತ್ತಾನೆ ಎಂಬುದನ್ನು ಮೊಹರಂ ನಮಗೆ ನೆನಪಿಸಿಕೊಡುತ್ತದೆ.

    ಮೊಹರಂ ಸಂದೇಶ

    ಅನ್ಯಾಯ, ಅನೀತಿ, ಕೆಡುಕುಗಳು ತುಂಬಿ ತುಳುಕುತ್ತಿರುವ ಮತ್ತು ಅರಾಜಕತೆ ರಾರಾಜಿಸುತ್ತಿರುವ ಸಮಾಜದಲ್ಲಿ ನಿಜವಾದ ಮಾನವೀಯ ಕಳಕಳಿಯುಳ್ಳ ಮನುಷ್ಯನಿಗೆ ಹತಾಶೆ ಉಂಟಾಗುವುದು ಸಹಜ. ಆದರೆ ಇದು ಖಂಡಿತವಾಗಿಯೂ ಶಾಶ್ವತವಾಗಿ ಉಳಿಯುವ ವ್ಯವಸ್ಥೆಯಲ್ಲ. ಇಂತಹ ಹಲವು ದುಷ್ಟವ್ಯವಸ್ಥೆಗಳನ್ನು ನಿರ್ನಾಮ ಮಾಡಲು ನಮ್ಮನ್ನು ನಿಯಂತ್ರಿಸುವ ದೇವನೊಬ್ಬನಿದ್ದಾನೆ ಎಂಬ ಹೊಸ ಭರವಸೆಯನ್ನು ಮೊಹರಂ ತಿಂಗಳು ನಮಗೆ ನೀಡುತ್ತದೆ. ಆದರೆ ನಾವು ನಿಷ್ಕ್ರಿಯರಾಗಿದ್ದರೆ ಏನನ್ನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಸಮಾಜದಲ್ಲಿ ಕಂಡುಬರುವ ಕೆಡುಕು, ಅನ್ಯಾಯಗಳ ವಿರುದ್ಧ ಗಟ್ಟಿಧ್ವನಿಯನ್ನು ಎತ್ತಲೇಬೇಕು. ಕನಿಷ್ಠ ಆ ಮಾನವೀಯ ಕಾಳಜಿಯನ್ನು ನಮ್ಮಲ್ಲಿ ಜೀವಂತವಾಗಿಟ್ಟುಕೊಳ್ಳಬೇಕು. ಇದೇ ಮೊಹರಂ ನಮಗೆ ನೀಡುವ ಸಂದೇಶ.

    ಹೊಸ ಆಚರಣೆಗಳು: ಸರಿಸುಮಾರು 1380 ವರ್ಷಗಳ ಹಿಂದೆ ಹಿಜರಿ ಶಕ 61ನೆಯ ಮೊಹರಂ ಹತ್ತರಂದು ಪ್ರವಾದಿಯವರ ಮಮತೆಯ ಮೊಮ್ಮಗನಾದ, ಫಾತಿಮಾ ಅಲಿ ದಂಪತಿಗಳ ಪುತ್ರ, ಇಮಾಮ್ ಹುಸೇನ್ ಕರ್ಬಲ ಮೈದಾನದಲ್ಲಿ ತಮ್ಮ ಸಂಗಡಿಗರೊಂದಿಗೆ ಹುತಾತ್ಮರಾದರು. ಇದು ಕಾಕತಾಳೀಯ ಸಂಭವವಾಗಿತ್ತು. ಅನ್ಯಾಯದ ವಿರುದ್ಧ ಸತ್ಯದ ಹರಿಕಾರರಾಗಿ ತನುಮನಧನಗಳನ್ನು ತ್ಯಾಗ ಮಾಡಿ ಹುತಾತ್ಮರಾದ ದಿನವಿದು. ಇದರ ಹೆಸರಿನಲ್ಲಿ ಹೊಸಹೊಸ ಆಚರಣೆಗಳನ್ನು ಜನರು ರೂಢಿಗೆ ತಂದಿರುವರು. ಇವುಗಳಿಗೂ ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ. ಕಪ್ಪು ಬಟ್ಟೆ ಧರಿಸಿ, ಹರಿತವಾದ ಆಯುಧಗಳಿಂದ ದೇಹದಂಡನೆ ಮಾಡಿಕೊಳ್ಳುವುದು, ಹುತಾತ್ಮರ ನೆನಪಿಗಾಗಿ ಮೆರವಣಿಗೆ ಮಾಡುವುದು, ಎದೆ ಬಡಿದುಕೊಂಡು ಗಟ್ಟಿಯಾಗಿ ರೋದಿಸುವುದು, ಲೋಹದಲ್ಲಿ ತಯಾರಿಸಿದ ಹುತಾತ್ಮರ ಹಸ್ತಗಳನ್ನು ಇಟ್ಟು ಅವುಗಳ ಮುಂದೆ ತಲೆಬಾಗುವುದು, ಹುಲಿ, ಕರಡಿ, ಚಿರತೆ, ವೇಷ ಹಾಕಿಕೊಂಡು ಕುಣಿದು ಕುಪ್ಪಳಿಸುವುದು- ಇವುಗಳಿಗೂ ಈ ತಿಂಗಳಿಗೂ ಯಾವುದೇ ಸಂಬಂಧವಿಲ್ಲ. ಪವಿತ್ರ ಕುರಾನ್​ನಲ್ಲಾಗಲಿ, ಪ್ರವಾದಿ ವಚನಗಳಲ್ಲಾಗಲಿ ಇಂತಹ ಆಚರಣೆಗಳ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ.

    (ಲೇಖಕರು ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts