ದಾಸೋಹಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಅನಿಸಿಕೆ
ಕೈಲಾಂಚ: ನಾಟಕಗಳು ಇಂದಿನ ಆಧುನಿಕ ಜಗತ್ತಿಗೆ ಅತ್ಯವಶ್ಯಕವಾಗಿವೆ. ನಾಟಕಗಳಲ್ಲಿ ಗ್ರಾಮೀಣ ಕಲಾವಿದರ ನೈಜ ಕಲೆ ಹೊರಹೊಮ್ಮಲಿದೆ ಎಂದು ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ದಾಸೋಹಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕೈಲಾಂಚ ಮತ್ತು ಹುಲಿಕೆರೆ ಗುನ್ನೂರು ಗ್ರಾಪಂನ ಗೆಳೆಯರ ಬಳಗದಿಂದ ಮಂಗಳವಾರ ರಾತ್ರಿ ಆಯೋಜಿಸಿದ್ದ ಕುರುಕ್ಷೇತ್ರ ಮತ್ತು ಧರ್ಮರಾಜ್ಯ ಸ್ಥಾಪನೆ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ರಂಗ ಕಲೆ ಉತ್ತಮ ಮಾಹಿತಿಯನ್ನು ಒಳಗೊಂಡಿದ್ದು, ಜನರಜೀವನದಲ್ಲಿ ಬಹಳ ಮನರಂಜನೆಯನ್ನು ನೀಡುತ್ತಾ ಜನರನ್ನು ಉತ್ತಮ ದಾರಿಗೆ ತರಲು ಪ್ರಯತ್ನಿಸುತ್ತಿದೆ. ಜೀವನದ ನೀತಿ ಪಾಠವನ್ನು ನಾಟಕಗಳಿಂದ ಕಲಿಯಬೇಕಾಗಿರುವುದರಿಂದ ನಾಟಕಕಲೆ ಉಳಿಸಿ ಬೆಳೆಸಬೇಕಾಗಿದೆ ಎಂದರು.
ಮಾಜಿ ಶಾಸಕ ಕೆ.ರಾಜು ಮಾತನಾಡಿ, ನಾಟಕಗಳಲ್ಲಿ ಜೀವನದ ನೀತಿ ಪಾಠಗಳು ಕಂಡುಬರುತ್ತವೆ. ಮುಂದಿನ ತಲೆಮಾರಿಗೆ ಸಂಸ್ಕೃತಿ ಸಾರಲು ನಾಟಕಗಳು ಸಹಕಾರಿ. ನಾಟಕಗಳು ನಮ್ಮ ಸಂಸ್ಕೃತಿಯ ಪ್ರತೀಕ. ವಿಚಾರತೆ, ಸಂಸ್ಕೃತಿ ಉಳ್ಳ ನಾಟಕಗಳಿಗೆ ಜನರಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ ಮಾತನಾಡಿ, ಎರಡೂ ಗ್ರಾಪಂನ ಗೆಳೆಯರು ಸೇರಿ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ನಾಟಕ ಕಲೆ ಪ್ರದರ್ಶಿಸಿ ಜಾತ್ರೆೆಗೆ ಬಂದ ಭಕ್ತರಿಗೆ ಮತ್ತು ಸುತ್ತಮುತ್ತಲ ಭಕ್ತರಿಗೆ ನಾಟಕದ ನೀತಿಪಾಠ ತಿಳಿಸಿಕೊಡಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ವೈದ್ಯ ಡಾ. ಭರತ್ಕೆಂಪಣ್ಣ, ಗ್ರಾಪಂ ಸದಸ್ಯರಾದ ನಾಗೇಶ್, ಮಹದೇವಯ್ಯ, ನಿಂಗರಾಜು, ಬೆಟ್ಟೇಗೌಡ, ಮುಖಂಡರಾದ ಎಚ್.ಎಸ್.ದೇವರಾಜು, ಗೋಪಾಲನಾಯ್ಕ, ಎ.ಸಿ.ಕೆಂಪಯ್ಯ, ನಂದೀಶ್ಗೌಡ, ರಾಮಚಂದ್ರು, ಪಾಂಡುರಂಗ, ಲೋಕೇಶ್, ಕಾಳುನಾಯ್ಕ, ಶಶಿ, ನಾಗರಾಜು, ನವೀನ್, ಪುಟ್ಟಸ್ವಾಮಿ, ಗಂಗಾಧರ್, ಕುಮಾರ್, ವಿಭೂತಿಕೆರೆ ಶಿವಲಿಂಗಯ್ಯ, ಶಂಕರ್ನಾಯ್ಕ ಇದ್ದರು.
