ಮುನವಳ್ಳಿ: ಮಣಿಪುರದಲ್ಲಿ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದ ಅಸ್ಸಾಂ ರೈಫಲ್ಸ್ನ ಯೋಧ ಸತ್ಯಪ್ಪ ಶಿದ್ಲಿಂಗಪ್ಪ ನರಿ (39) ಅವರ ಅಂತ್ಯಕ್ರಿಯೆ ಶುಕ್ರವಾರ ಸ್ವಗ್ರಾಮ ಮಬನೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಬೆಳಗ್ಗೆ 11 ಗಂಟೆಗೆ ಯೋಧನ ಪಾರ್ಥಿವ ಶರೀರ ಆಂಬುಲೆನ್ಸ್ ಮೂಲಕ ಗ್ರಾಮಕ್ಕೆ ಆಗಮಿಸಿತು. ಮಾರ್ಗ ಮಧ್ಯೆ ಮುನವಳ್ಳಿಯ ನಾಗರಿಕರು, ಮುಖಂಡರು, ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೂಮಾಲೆ ಹಾಕಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಶಾಲೆ-ಕಾಲೇಜು ವಿದ್ಯಾರ್ಥಿಗಳು ರಸ್ತೆ ಅಕ್ಕಪಕ್ಕದಲ್ಲಿ ನಿಂತು ಯೋಧನಿಗೆ ನಮನ ಸಲ್ಲಿಸಿದರು.
ಪಾರ್ಥಿವ ಶರೀರ ಮಬನೂರ ಗ್ರಾಮ ತಲುಪುತ್ತಿದಂತೆ ಗ್ರಾಮಸ್ಥರ ದುಃಖ ಇಮ್ಮಡಿಸಿತು. ಮೆರವಣಿಗೆ ಮೂಲಕ ಗ್ರಾಮ ಪಂಚಾಯಿತಿ ಆವರಣಕ್ಕೆ ಪಾರ್ಥಿವ ಶರೀರ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಯೋಧನ ದರ್ಶನ ಪಡೆದರು.
ಮೃತನ ತಂದೆ ಸಿದ್ದಲಿಂಗಪ್ಪ ನರಿ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಿತು. ಮುರುಘೇಂದ್ರ ಸ್ವಾಮೀಜಿ, ಶಾಸಕ ಆನಂದ ಮಾಮನಿ, ತಹಸೀಲ್ದಾರ್ ಶಂಕರ ಗೌಡಿ, ಜಿಪಂ ಸದಸ್ಯ ಫಕೀರಪ್ಪ ಹದ್ದಣ್ಣವರ, ಪುಂಡಲೀಕ ಮೇಟಿ, ಯಲ್ಲಪ್ಪ ಬಿ. ನರಿ, ಕಲ್ಲೊಳೆಪ್ಪ ನರಿ, ಅಂಬರೀಷ ಯಲಿಗಾರ ಹಾಗೂ ಸುತ್ತಲಿನ ಗ್ರಾಮಸ್ಥರು ಹಾಗೂ ಪೊಲೀಸರು ಉಪಸ್ಥಿತರಿದ್ದರು.
ಮೃತ ಯೋಧನ ಕುಟುಂಬಕ್ಕೆ ಪರಮಾತ್ಮ ದುಃಖ ಭರಿಸುವ ಶಕ್ತಿ ನೀಡಲಿ. ಯೋಧನ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ನೀಡಲಾಗುವುದು. ಯೋಧನ ಸ್ಮಾರಕಕ್ಕೆ ಮೂರ್ತಿಯನ್ನು ಸ್ವಂತ ಖರ್ಚಿನಲ್ಲಿ ಮಾಡಿಸಿಕೊಡುತ್ತೇನೆ.
ಆನಂದ ಚಂ. ಮಾಮನಿ ಶಾಸಕ