ಜಗಳೂರು: ಮೈಕ್ರೋ ಫೈನಾನ್ಸ್ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರಿವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿರುವುದನ್ನು ಖಂಡಿಸಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ತಾಲೂಕು ಕಚೇರಿ ಮುಂಭಾಗಲ್ಲಿ ಭಾನುವಾರ ರೈತ ಮುಖಂಡರು ರಾಜ್ಯಪಾಲರ ವಿರುದ್ಧ ಘೊಷಣೆ ಕೂಗಿದರು. ನಂತರ ಉಪ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಾದ್ಯಂತ ರೈತರಿಗೆ ಸಾಲ ನೀಡಿರುವ ಖಾಸಗಿ ವ್ಯಕ್ತಿಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲವನ್ನು ಮರುಪಾವತಿಸುವಂತೆ ಕಿರುಕುಳ ಹಾಗೂ ದೌರ್ಜನ್ಯ ಎಸಗುತ್ತಿರುವುದು ಎಲ್ಲರ ಗಮನದಲ್ಲಿದೆ. ಇದರಿಂದ ಬೇಸತ್ತವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರದ ಆದೇಶವನ್ನು ತಿರಸ್ಕರಿಸುವ ಮೂಲಕ ರಾಜ್ಯಪಾಲರು ಬಡವರಿಗೆ ಅನ್ಯಾಯ ಮಾಡಿರುವುದು ಖಂಡನೀಯ. ಕೂಡಲೇ ಈ ನಿರ್ಧಾರವನ್ನು ವಾಪಸ್ಸು ಪಡೆದು ಅಂಕಿತ ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಭೈರನಾಯಕನಹಳ್ಳಿ ರಾಜು ಮಾತನಾಡಿ, ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದಾಗಿ ಬೆಳೆಗಳು ರೈತರ ಕೈಗೆ ಸಿಕ್ಕಿಲ್ಲ. ಸಾಕಷ್ಟು ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಜೀವನ ನಿರ್ವಹಣೆ ಮತ್ತು ಜಮೀನುಗಳಿಗೆ ರೈತರು ಕೈ ಸಾಲ ಪಡೆದುಕೊಂಡಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಫೈನಾನ್ಸ್ನವರು ಮನೆ ಮುಂದೆ ಬಂದು ಗಲಾಟೆ ಮಾಡುವುದು, ಮನೆಗಳಿಗೆ ಬೀಗ ಹಾಕುವುದು, ವಾಹನಗಳನ್ನು ತೆಗದುಕೊಂಡು ಹೋಗಲು ಮುಂದಾಗುತ್ತಿದ್ದಾರೆ ಎಂದರು.
ರಾಜ್ಯಪಾಲರು ಅಥವಾ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಕಾನೂನು ಜಾರಿ ಮಾಡಿ ಮೈಕ್ರೋ ಫೈನಾನ್ಸ್ಗಳ ಹಾವಳಿ ಮತ್ತು ದೌರ್ಜನ್ಯವನ್ನು ನಿಯಂತ್ರಣಕ್ಕೆ ತರದೆ ಹೋದಲ್ಲಿ ನಮ್ಮ ಸಂಘಟನೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ಕಸವನಹಳ್ಳಿ ನಾಗರಾಜ್, ಮಡ್ರಳ್ಳಿ ತಿಪ್ಪಣ್ಣ, ಯರಲಕಟ್ಟೆ ಕೆಂಚಪ್ಪ, ಮಡ್ರಳ್ಳಿ ಪರಸಪ್ಪ, ದೊಣೆಹಳ್ಳಿ ತಿಪ್ಪೇಸ್ವಾಮಿ, ರಂಗಾಪುರ ನಿಂಗಪ್ಪ, ಸಹದೇವರೆಡ್ಡಿ, ಮಲ್ಲೇಶಿ, ಹೊನ್ನೂರ್, ಹನುಮಂತಪ್ಪ, ಮೇಘನಾಥ, ತಿಪ್ಪೇಸ್ವಾಮಿ, ಸುಪುತ್ರಪ್ಪ, ಅಂಜಿನಪ್ಪ, ಲಿಂಗನಹಳ್ಳಿ ವೀರೇಶ್ ಪ್ರಕಾಶ, ಮಾರೇಶ್ ಸೇರಿ ಮತ್ತಿತರರಿದ್ದರು.