ವಿರಾಜಪೇಟೆ: ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಗ್ರಾಮದಲ್ಲಿ ನೆಲೆಗೊಂಡಿರುವ ಆದಿ ದೇವಿ ಶ್ರೀ ಕಂಚಿಕಾಮಾಕ್ಷಿ ದೇವಾಲಯದ ವಾರ್ಷಿಕ ಕರಗ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.

ಶುಕ್ರವಾರ ಬೆಳಗ್ಗೆ ಸ್ಥಳೀಯ ಪುರೋಹಿತರಿಂದ ಗಣಪತಿ ಹೋಮದೊಂದಿಗೆ ಆರಂಭವಾಯಿತು. ನಂತರ ಪ್ರತಿಷ್ಠಾನ ಪೂಜೆ, ಶ್ರೀ ದೇವಿಗೆ ಮಹಾಪೂಜೆ ಸಲ್ಲಿಕೆಯಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನ 3ರ ವೇಳೆಯಲ್ಲಿ ಮಡಿಕೇರಿಯ ಕರಗ ಪೂಜಾರಿಯಾದ ಕೃಷ್ಣ ಮತ್ತು ಪೆರುಂಬಾಡಿಯ ಕಿರಣ್ ನೇತೃತ್ವದಲ್ಲಿ ಕಂಚಿ ಕಾಮಾಕ್ಷಿ ಮತ್ತು ಮಾರಿಯಮ್ಮ ಕರಗಗಳನ್ನು ಶೃಂಗಾರ ಮಾಡಲಾಯಿತು.
ಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಗ್ರಾಮಸ್ಥರ ಮನೆಗಳಿಗೆ ತೆರಳಿದ ಕರಗಗಳು ಭಕ್ತರಿಂದ ಪೂಜೆಗಳನ್ನು ಪಡೆದುಕೊಂಡಿತು. ಗ್ರಾಮ ನಿವಾಸಿಗಳ ಪೂಜೆ ಸ್ವೀಕರಿಸಿ ಸಂಜೆ 7 ರ ವೇಳೆಗೆ ದೇಗುಲದ ಪ್ರವೇಶವಾಯಿತು. ರಾತ್ರಿ 8 ಗಂಟೆಗೆ ಮಹಿಳೆಯರು ತಯಾರಿಸಿದ ತಂಬಿಟ್ಟು ಆರತಿ ದೇವಿಗೆ ಸಲ್ಲಿಕೆಯಾದವು. ರಾತ್ರಿ 9 ಗಂಟೆಗೆ ಶ್ರೀ ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಶನಿವಾರ ಬೆಳಗ್ಗೆ ಶ್ರೀ ಕಂಚಿ ಕಾಮಾಕ್ಷಿ ದೇವಿಗೆ ವಿಶೇಷ ಅಲಂಕಾರ ಹಾಗೂ ಮಾಹಾಪೂಜೆ ಸಲ್ಲಿಸಲಾಯಿತು. 12 ಗಂಟೆಗೆ ಮಾಹಾಪೂಜೆ ಪ್ರಸಾದ ವಿನಿಯೋಗ ನಡೆಯಿತು. ಭಕ್ತರ ಸಮ್ಮುಖದಲ್ಲಿ ಸಹಾಯಾರ್ಥ ದೇಣಿಗೆ ಲಕ್ಕಿ ಡ್ರಾ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಕರಗ ವಿಸರ್ಜನೆ ನಡೆದು ವಾರ್ಷಿಕ ಕರಗ ಮಹೋತ್ಸವಕ್ಕೆ ವರ್ಣರಂಜಿತ ತೆರೆಬಿದ್ದಿತು.
ಆಡಳಿತ ಮಂಡಳಿ ಅಧ್ಯಕ್ಷ ಜಿ.ಕೆ.ಬಾಲಕೃಷ್ಣ, ಕಾರ್ಯದರ್ಶಿ ಜಿ.ಡಿ.ಕಿರಣ್, ಕೋಶಾಧಿಕಾರಿ ರಿಜು, ದೇಗುಲ ಸಮಿತಿ ಸದಸ್ಯರು, ಕ್ಯಾಲಿಕಟ್, ವಯನಾಡ್, ಕಣ್ಣೂರು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಕರಗ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು.