ಬೆಂಗಳೂರು: ಅನ್ನ ಭಾಗ್ಯಯೋಜನೆಯಡಿ ಐದು ಕೆಜಿ ಅಕ್ಕಿ ವಿತರಣೆ ಸಾಕು. ರಾಗಿ, ಜೋಳ ವಿತರಿಸಿ, ಕಡಲೆಕಾಯಿ ಎಣ್ಣೆ ಕೊಡಿ ಎಂದು ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ವಿಕಾಸಸೌಧದಲ್ಲಿ ಬುಧವಾರ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ನಡೆಸಿದ ಸಭೆಯಲ್ಲಿ ಈ ಪ್ರಸ್ತಾಪವಾಗಿದೆ. ಹಾಲಿ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಹೆಚ್ಚುವರಿ ಅಕ್ಕಿಗೆ ಹಣ ನೀಡುವ ಬದಲು ಪೌಷ್ಠಿಕ ಆಹಾರ ರಾಗಿ, ಜೋಳ, ಕಡಲೆಕಾಯಿ ಎಣ್ಣೆ ವಿತರಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವು ಪ್ರಗತಿಪರ ರೈತರು, ರೈತ ಸಂಘಟನೆ ಪ್ರತಿನಿಧಿಗಳು ಸಭೆಯಲ್ಲಿದ್ದು ತಮ್ಮ ಅಭಿಪ್ರಾಯ ಮಂಡಿಸಿದರು.
ಸಚಿವರು ಉತ್ತರ ನೀಡಿ, ಅನ್ನಭಾಗ್ಯದಲ್ಲಿ ಹತ್ತು ಕೆಜಿ ಅಕ್ಕಿ ಕೊಡಬೇಕೆಂಬುದು ಸರ್ಕಾರದ ನಿರ್ಧಾರ. ಅದನ್ನು ಬದಲಿಸುವ ವಿಚಾರವನ್ನು ಚರ್ಚೆ ಮಾಡಬೇಕಾಗುತ್ತದೆ. ಮುಂದೆ ನೋಡೋಣ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬೆಳೆ ವಿಮೆ ವಿಚಾರದಲ್ಲಿ ಗೊಂದಲ ಉಂಟಾಗಿರುವ ಬಗ್ಗೆ ರೈತರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಫ್ರೂಟ್ಸ್ ಸಾಫ್ಟ್ ವೇರ್ ಬಳಸಿ ಗೊಂದಲ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.