ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಅವರೊಬ್ಬ ಮಹಾ ತಪಸ್ವಿ. ಎಂದಿಗೂ ಯಾರಿಗೂ ದೇಹೀ ಎಂದು ಕೈ ಚಾಚಿದವರಲ್ಲ. ಹೊಲದಲ್ಲಿ ಸುತ್ತಲೂ ಬಿದ್ದ ಧಾನ್ಯ ಆರಿಸಿ ತಂದು ಉಂಡು ಬಾಳಿದವರು. ಅವರಿಗೆ ಅಶ್ವತ್ಥಾಮ ಎಂಬ ಮಗ. ತಾಯಿ ಕೃಪಿ ನಿತ್ಯವೂ ಹಿಟ್ಟಿಗೆ ನೀರು ಸೇರಿಸಿ ಹಾಲು ಎಂದು ಕೊಡುತ್ತಿದ್ದಳು. ಮಗು ಅದನ್ನೇ ಕುಡಿಯುತ್ತಿದ್ದ. ಒಂದು ದಿನ ಮಾವ ಕೃಪಾಚಾರ್ಯರೊಂದಿಗೆ ಧೃತರಾಷ್ಟ್ರನ ಅರಮನೆಗೆ ಹೋದ. ಅಲ್ಲಿ ದುರ್ಯೋಧನನ ಕೈಯಿಂದ ಹಾಲು ಕುಡಿದ. ದೊಡ್ಡವರ ಒಡನಾಟ, ಅವರ ಊಟ, ಅವರ ಪೇಯ ಎಲ್ಲವೂ ಮನಸೆಳೆಯಿತು.
ಮನೆಗೆ ಬಂದು ತಾಯಿಗೆ ಹಾಲು ಕೇಳಿದ. ಎಂದಿನಂತೆ ಹಿಟ್ಟು ಕಲಿಸಿದ ಹಾಲು ಕೊಟ್ಟಳು. ಅಶ್ವತ್ಥಾಮ ಇದು ಅದಲ್ಲ ಎಂದನು. ಅಲ್ಲಿಂದಲೇ ಹೋಲಿಕೆ ಶುರುವಾಯಿತು. ಅಧಃಪತನಕ್ಕೆ ನಾಂದಿ ಹಾಕಿತು. ಹೆಂಡತಿಯ ಸಂಕಟ, ಮಗನ ಹಠ ಎರಡೂ, ತಂದೆಯ ಮನ ಛಿದ್ರಿಸಿತು. ಎಂದೂ ಕೈ ಚಾಚಿ ಬೇಡದವ ಮಗನಿಗಾಗಿ ತನ್ನ ಬಾಲ್ಯಸ್ನೇಹಿತ ದ್ರುಪದನಲ್ಲಿಗೆ ಬೇಡಲು ಹೊರಟ. ಆದರೆ ಅಲ್ಲಿ ಅವನಿಂದ ಸಿಕ್ಕಿದ್ದು ಅವಮಾನ. ಮಗನ ಹಠಕ್ಕೆ ಮಣಿದು ಮಾಡಿದ ಧರ್ವೇಲ್ಲಂಘನಕ್ಕೆ ಮೊದಲು ಸಿಕ್ಕ ಪ್ರತಿಫಲವದು. ಈ ಪುತ್ರಮೋಹವೇ ಅವಮಾನ, ದ್ವೇಷಗಳಿಗೆ ಎಳೆದೊಯ್ದಿತು. ಕೈಯಲ್ಲಿ ಶಸ್ತ್ರ ಹಿಡಿದ. ಮಹಾನ್ ತಪಸ್ವಿಯೊಬ್ಬ ಕ್ಷಾತ್ರಧರ್ಮಕ್ಕೆ ಮತಾಂತರನಾದ. ಮಗನನ್ನು ಸುಖದ ಸುಪ್ಪತ್ತಿಗೆಯಲ್ಲಿ ನೋಡುವುದೇ ಜೀವನದ ಗುರಿಯಾಯಿತು. ಮಗನಿಗಾಗಿ ದುರ್ಯೋಧನನ ದಾಸರಾದರು. ಯುದ್ಧದಲ್ಲಿ ಸಹಸ್ರಾರು ಸೈನಿಕರನ್ನು ಕೊಂದರು. ಕಂದ ಅಭಿಮನ್ಯುವನ್ನು ಕೊಲ್ಲಿಸಿದರು. ಕೊನೆಗೂ ಮಗನ ಮೋಹದಲ್ಲಿಯೇ ಪ್ರಾಣ ಬಿಟ್ಟರು. ಅವರೇ ಗುರು ದ್ರೋಣಾಚಾರ್ಯರು.
ಮಗ ಅಶ್ವತ್ಥಾಮನಾದರೂ ತಂದೆಯಿಂದ ಪಡೆದ ವಿದ್ಯೆಯಿಂದ ಪಾಂಡವರ ಐದು ಜನ ಮಕ್ಕಳನ್ನು ನಿದ್ರೆಯಲ್ಲಿದ್ದಾಗ ಕೊಂದನು. ಕೊನೆಗೆ ಕೃಷ್ಣನಿಂದ ಶಾಪವನ್ನೇ ಪಡೆದ. ಎಂಥ ತಪಸ್ವಿಗಳ ಕುಲ ಅಧಃಪತನಕ್ಕೆ ಇಳಿಯಿತು. ಕಾರಣ ಇಷ್ಟೇ. ತಾಯಿ ಕೊಟ್ಟಿದ್ದನ್ನು ಆದರ, ಪ್ರೀತಿ, ವಿಶ್ವಾಸದಿಂದ ಸ್ವೀಕರಿಸಲಿಲ್ಲ. ತಾಯಿ ಬಡಿಸುವ ಪ್ರೀತಿ ತುಂಬಿದ ಅನ್ನವನ್ನು ಮತ್ತೊಬ್ಬರ ಆಡಂಬರದ ಅನ್ನಕ್ಕೆ ಹೋಲಿಸಿದ್ದು.ಆ ತಿರಸ್ಕಾರದ ಪರಿಣಾಮವೇ ಈ ವಿನಾಶ.
ಕೆಲವೊಮ್ಮೆ ಯೋಚಿಸಿದರೆ ನಾವೂ ದ್ರೋಣ-ಕೃಪಿಯಂತಾಗುತ್ತಿದ್ದೇವೆ. ಮತ್ತೆ ನಮ್ಮ ಮಕ್ಕಳು ಅಶ್ವತ್ಥಾಮನಂತಾಗಿದ್ದಾರೆ ಎನಿಸುತ್ತದೆ. ಊಟ-ಉಡುಗೆ ಜೀವನಶೈಲಿ ಎಲ್ಲವೂ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದೇ ಜೀವನವಾಗಿದೆ. ಮನೆಯಲ್ಲಿ ಪರಿವಾರಕ್ಕಾಗಿ ಒಂದು ಅಡುಗೆಯಾದರೆ, ಮಗುವಿನ ಇಚ್ಛೆಯಂತೆ ಒಂದು ಬೇರೆ ಅಡುಗೆ. ಹೊರಗಿನ ಅನಾರೋಗ್ಯಕರ ತಿಂಡಿ, ತಿನಿಸುಗಳು ಅಮ್ಮನ ಕೈ ಅಡುಗೆಗಿಂತಲೂ ಆಕರ್ಷಕವಾಗಿವೆ. ಮಕ್ಕಳು ಏನೇ ಅಪೇಕ್ಷೆ ಪಟ್ಟರೂ ಕೊಡಲೇಬೇಕೆಂಬ ಹಠ ಬಹುಶಃ ಪಾಲಕರಲ್ಲಿಯೂ ಬೆಳೆದಿದೆ. ನಾವು ಪಡದ ಸುಖವನ್ನು ನಮ್ಮ ಮಕ್ಕಳಾದರೂ ಅನುಭವಿಸಲಿ ಎಂಬ ಗೊಡ್ಡು ಅಭಿಲಾಷೆ ಬೇರೆ. ಪರಿಸ್ಥಿತಿಗೆ ತಕ್ಕಂತೆ ಮನಃಸ್ಥಿತಿಯನ್ನು ಹೊಂದುವಂತೆ ಮಕ್ಕಳನ್ನು ಬೆಳೆಸೋಣ. ಕೆಟ್ಟ ಹಠಗಳನ್ನು ಕಿತ್ತೊಗಿಯುವ ಹಠ ಮಾಡೋಣ. ಅಮ್ಮನ ಅಂತಃಕರಣಕ್ಕೆ ಶಿರಬಾಗುವಂತೆ ಮಕ್ಕಳನ್ನು ಬೆಳೆಸೋಣ.
(ಲೇಖಕರು ಹವ್ಯಾಸಿ ಬರಹಗಾರರು)
ಈತನಿಗಾಗಿ 22ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡೆ; ಸ್ಟಾರ್ ನಟನೊಂದಿಗಿನ ಸಂಬಂಧದ ಕುರಿತು ಮೌನ ಮುರಿದ ನಟಿ