ಕುಂದಗೋಳ: ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲೆಂದು ವೈದ್ಯರು ಇರುತ್ತಾರೆ. ಡ್ರೆಸ್ಸಿಂಗ್, ಇಂಜೆಕ್ಷನ್ ಮಾಡಲು ನರ್ಸ್ ಇಲ್ಲವೇ ಸಿಬ್ಬಂದಿ ಇರುತ್ತಾರೆ. ಆದರೆ, ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯದ ಗಂಧಗಾಳಿಯೂ ಇಲ್ಲದ ಇಬ್ಬರು ಹೊರಗಿನ ವ್ಯಕ್ತಿಗಳು ಡ್ರೆಸ್ಸಿಂಗ್ ಹಾಗೂ ಇಂಜೆಕ್ಷನ್ ಮಾಡುತ್ತಾರೆ! ಇದರಲ್ಲಿ ಒಬ್ಬರು ಇಲೆಕ್ಟ್ರಿಷಿಯನ್ ಇದ್ದರೆ, ಮತ್ತೊಬ್ಬರು ಇಲ್ಲಿನ ನರ್ಸ್ ಅವರ ಸಂಬಂಧಿಯಾಗಿದ್ದಾರೆ.
ಸಾರ್ವಜನಿಕರೊಬ್ಬರು ಆಸ್ಪತ್ರೆಗೆ ಹೋದಾಗ ಈ ಇಬ್ಬರು ವ್ಯಕ್ತಿಗಳು, ಮಹಿಳೆಯರು ಸೇರಿದಂತೆ ಎಲ್ಲರಿಗೂ ಇಂಜೆಕ್ಷನ್ ನೀಡುತ್ತಿರುವುದನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಅವರಿಬ್ಬರು ಅಲ್ಲೇನು ಮಾಡುತ್ತಿದ್ದಾರೆ ಎಂದು ಕೇಳಿದ್ದಕ್ಕೆ, ‘ಬಾಯಿ ಮಾಡಬೇಡಿ. ಏನೂ ಆಗುವುದಿಲ್ಲ’ ಎಂದು ಕೇಳಿದವರನ್ನೇ ದಬಾಯಿಸಿದ್ದಾರೆ.
ತಾಲೂಕು ಆಸ್ಪತ್ರೆಯಲ್ಲಿ ಖಾಸಿಂ ಬಳಿಗಾರ ಎಂಬ ವ್ಯಕ್ತಿ ಹಾಗೂ ಇನ್ನೋರ್ವ ಖಾಸಗಿ ವ್ಯಕ್ತಿ ಸೇರಿಕೊಂಡು ಆಸ್ಪತ್ರೆಗೆ ಬರುವ ರೋಗಿಗಳಿಗೆ ತಾವೇ ಇಂಜೆಕ್ಷನ್ ನೀಡುತ್ತಿದ್ದಾರೆ. ಯಾರ ಭಯವಿಲ್ಲದೆ ರಾಜಾರೋಷವಾಗಿ ನರ್ಸ್ ಜತೆ ಕೈ ಜೋಡಿಸಿ ಬಡವರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದಾರೆ.
ಅನೇಕ ದಿನಗಳಿಂದ ಈ ಕೆಲಸ ನಡೆಯುತ್ತಿದ್ದರೂ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಹಾಗೂ ವೈದ್ಯರಿಗೆ ಗೊತ್ತಿದೆಯೋ ಅಥವಾ ಗೊತ್ತಿದ್ದರೂ ಗೊತ್ತಿಲ್ಲದಂತೆ ಸುಮ್ಮನಿದ್ದಾರೋ ತಿಳಿಯದು. ಆದರೆ, ಬಡವರ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಿತ್ಯ ಆಸ್ಪತ್ರೆಗೆ ಅನೇಕ ರೋಗಿಗಳು ಬರುತ್ತಾರೆ. ಇಲ್ಲಿ ಈ ವ್ಯಕ್ತಿಗಳೇ ಡಾಕ್ಟರ್ ಇದ್ದಂತೆ. ಇವರು ಹೇಳುವ ಇಂಜೆಕ್ಷನ್ ಹಾಗೂ ಮಾತ್ರೆ ತೆಗೆದುಕೊಂಡು ಹೋಗುತ್ತಾರೆ. ರೋಗಿಗಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಆಸ್ಪತ್ರೆಗೆ ಬಂದಿದ್ದ ಪಾಂಡುರಂಗ ಎಂಬುವವರು ಈ ಘಟನೆಯನ್ನು ಬಯಲಿಗೆ ತಂದಿದ್ದಾರೆ. ಹೀಗೆ ಎಷ್ಟು ರೋ
ಗಳಿಗೆ ಇಂಜೆಕ್ಷನ್ ಮಾಡಿದ್ದಾರೆ ಎಂಬುದನ್ನು ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಂದ್ರ ಅವರು ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಗಮನ ಹರಿಸದೆ ಇರುವುದು ದುರ್ದೈವದ ಸಂಗತಿ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ನಾನು ತಾಲೂಕು ಆಸ್ಪತ್ರೆಗೆ ಆರೋಗ್ಯ ಪರೀಕ್ಷೆಗೆ ಹೋಗಿದ್ದೆ. ಆಗ ಇಂಜೆಕ್ಷನ್ ಮಾಡಬೇಕಾದ ಡಾಕ್ಟರ್ ಹಾಗೂ ನರ್ಸ್ ಬಿಟ್ಟು ಖಾಸಗಿ ವ್ಯಕ್ತಿ ಹಾಗೂ ಇನ್ನೋರ್ವ ಸೇರಿಕೊಂಡು ರೋಗಿಗಳಿಗೆ ಇಂಜೆಕ್ಷನ್ ನೀಡುತ್ತಿದ್ದರು. ಅಲ್ಲಿದ್ದ ನರ್ಸ್ ಅವರನ್ನು ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಬಡವರ ಜೀವ ಉಳಿಸಬೇಕಿದೆ.
> ಪಾಂಡುರಂಗ, ಸ್ಥಳೀಯ ನಿವಾಸಿ
ಆಸ್ಪತ್ರೆಯಲ್ಲಿ ಖಾಸಗಿ ವ್ಯಕ್ತಿಗಳು ಚುಚ್ಚುಮದ್ದು ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ. ನೋಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
>ಡಾ. ಮಹೇಂದ್ರ, ಮುಖ್ಯ ವೈದ್ಯಾಧಿಕಾರಿ, ಕುಂದಗೋಳ ತಾಲೂಕು ಆಸ್ಪತ್ರೆ