ಕೋಲಾರ: ಆಳುವ ಸರ್ಕಾರಗಳು ದುಡಿಯು ಕೈಗಳನ್ನು ಕಡೆಗಣಿಸಿ, ಬಂಡವಾಳ ಶಾಹಿಗಳಪರ ಕಾನೂನು ಜಾರಿಗೊಳಿಸುತ್ತಿದೆ. ಆ ಮೂಲಕ ಕಾರ್ಮಿಕ ವರ್ಗವನ್ನು ಬೀದಿಗೆ ತಳ್ಳುವ ವಾತಾವರಣ ದೇಶದಲ್ಲಿದೆ ಎಂದು ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ.ಕೃಷ್ಣಪ್ಪ ಹೇಳಿದರು.
ನಗರದ ಪಾಲಸಂದ್ರ ಲೇಔಟ್ನಲ್ಲಿ ಸಿಐಟಿಯು ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ದೇಶದ ಐಕ್ಯತೆ, ಸಮಾನತೆಗಾಗಿ ನಾವೆಲ್ಲ ಮತ್ತೊಮ್ಮೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ.
ಬಂಡವಾಳಶಾಹಿ ವ್ಯವಸ್ಥೆಯನ್ನು ಕುತಂತ್ರ ಅರಿಯದಿದ್ದರೆ ದೇಶವು ಅವರ ಹತೋಟಿಗೆ ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ನೂರಾರು ವರ್ಷಗಳ ಹಿಂದೆ ಕಾರ್ಮಿಕ ವರ್ಗ ಸಂಘಟಿತವಾಗಿರಲಿಲ್ಲ. ಐಕ್ಯ ಹೋರಾಟಗಳು ಬೆಳೆದು ಬಂದಿರಲಿಲ್ಲ. ಸಮಸ್ಯೆ, ಅತೃಪ್ತಿ, ಅಸಮಾಧಾನವಿತ್ತು. ಆದರೆ ಈಗ ಕಾರ್ಮಿಕ ವರ್ಗ, ಜನಸಾಮಾನ್ಯರು, ರೈತಾಪಿ ವರ್ಗದವರು ಎದುರಿಸುವ ಸಮಸ್ಯೆಗಳಿಗೆ ಮೂಲ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ$್ಯಕ್ಕೆ ಬೆಲೆ ಇಲ್ಲದ ಪರಿಸ್ಥಿತಿ ನಿಮಾರ್ಣವಾಗಿದೆ. ಮತೀಯ, ಧಾರ್ಮಿಕ ಆಡಳಿತ ವ್ಯವಸ್ಥೆಯನ್ನು ತರಬೇಕೆಂದು ರಾಜಕೀಯ ಪಕ್ಷಗಳು ಪ್ರಯತ್ನ ನಡೆಸುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯಿಂದ ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಮಿಕ ವರ್ಗ ಐಕ್ಯ ಹೋರಾಟ ನಡೆಸುತ್ತಾ ಬಂದಿದೆ ಎಂದು ತಿಳಿಸಿದರು.
ಎಲ್ಲರಿಗೂ ವಸತಿ, ವಿದ್ಯಾಭ್ಯಾಸ, ಆರೋಗ್ಯ ಸೇವೆ ನೀಡುವುದು ಮುಖ್ಯವಾಗಬೇಕು. ಸುಳ್ಳನ್ನು ಹೇಳಿ ಮತ್ತೆ ಮತ್ತೆ ಸರಿಪಡಿಸುತ್ತೇವೆ ಎಂದು ಜನರನ್ನು ನಂಬಿಸುವ, ಬಂಡವಾಳಶಾಹಿಗಳ ಹಿಂದೆ ನಿಂತಿರುವ ರಾಜಕೀಯ ಪಕ್ಷಗಳ ನಡೆಯನ್ನು ಕಾರ್ಮಿಕ ವರ್ಗ ಯುವಜನರು ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ಮೂಲ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲ ಸಂಘಟನೆಗಳು ಸಂಘಟಿತರಾಗಿ ಹೋರಾಡಬೇಕಾದ ಅಗತ್ಯವಿದೆ. ಮೇ 20ರಂದು ರಾಷ್ಟ್ರದಾದ್ಯಂತ ನಡೆಯಲಿರುವ ಮುಷ್ಕರದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡರಾದ ಆಶಾ, ಕಲ್ಪನಾ, ರಾಜಮ್ಮ, ಎಂ.ಭೀಮರಾಜ್, ರಾಮಚಂದ್ರಪ್ಪ, ನಾಗರಾಜಪ್ಪ, ಅಂಜಿನಪ್ಪ, ನಾಗೇಂದ್ರ, ನಾರಾಯಣಪ್ಪ, ಆರೋಗ್ಯನಾಥನ್, ನಾಗರಾಜ್, ರಾಘವೇಂದ್ರ ಉಪಸ್ಥಿತರಿದ್ದರು.
