ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಪ್ರತಿಪಕ್ಷದ ನಾಯಕರುಗಳಿಗೆ ಸವಾಲೊಂದನ್ನು ಎಸೆದಿದ್ದು, ಚರ್ಚೆ ನಡೆಯಲಿ, ಬಳಿಕ ಏನು ನಿರ್ಣಯವಾಗಲಿದೆಯೋ ಅದನ್ನು ಘೋಷಿಸೋಣ. ಅಂತಿಮವಾಗಿ ನ್ಯಾಯವೇ ಗೆಲ್ಲಲಿದೆ ಎಂದಿದ್ದಾರೆ.
ಲಖನೌದಲ್ಲಿ ಸಿಎಎ ಕುರಿತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಯಾರು ಪ್ರತಿಭಟನೆ ಮಾಡುತ್ತಾರೆ ಎಂಬುದು ನಮಗೊಂದು ವಿಚಾರವೇ ಅಲ್ಲ. ನಾವು ಪ್ರತಿಪಕ್ಷದವರಿಗೆ ಅಂಜುವುದೂ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರತಿಪಕ್ಷದವರಿಗೆ ವಾಸ್ತವಾಂಶ ತಿಳಿಯುತ್ತಿಲ್ಲ. ಅವರ ಮುಖ ವೋಟ್ಬ್ಯಾಂಕ್ ರಾಜಕಾರಣದಿಂದ ಸುತ್ತುವರಿದಿದೆ ಎಂದು ಜರಿದರು.
ಕಾಯ್ದೆ ಕುರಿತು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಷಾ, ಸುಳ್ಳುಗಳನ್ನು ಹರಡುತ್ತಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಾದರೂ ಸರಿ ಕಾಯ್ದೆ ಬಗ್ಗೆ ಚರ್ಚಿಸಲು ಮಮತಾ ದೀದಿ, ಅಖಿಲೇಶ್ ಜಿ ಹಾಗೂ ಮಾಯಾವತಿ ಜಿಗೆ ಸವಾಲು ಹಾಕುತ್ತಿದ್ದೇನೆ. ಪೌರತ್ವವನ್ನು ಕಿತ್ತುಕೊಳ್ಳಲಿದೆ ಎಂಬ ಒಂದೇ ಒಂದು ಅಂಶವನ್ನು ಕಾಯ್ದೆಯಲ್ಲಿ ತೋರಿಸಿ ಎಂದರು.
ಅಕ್ರಮ ವಲಸಿಗರು ಮತ್ತು ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್ ಒಮ್ಮೆಯೂ ಚಿಂತಿಸಿರಲಿಲ್ಲ. ಆಲಿಯಾ, ಮಾಲಿಯಾ ಮತ್ತು ಜಮಾಲಿಯಾ ಪಾಕಿಸ್ತಾನದಿಂದ ಬಂದು ಬಾಂಬ್ ಸ್ಫೋಟಿಸಿ ಹೋಗುತ್ತಿದ್ದರು. ಆದರೆ, ಮನಮೋಹನ್ಸಿಂಗ್ ಮೌನಿ ಬಾಬಾ ಆಗಿದ್ದರು. ಶಬ್ದವೇ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಸಿಎಎ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ಮುಂದುವರಿಯುತ್ತಿದ್ದು, ಕಾಯ್ದೆ ಕುರಿತು ಬಿಜೆಪಿ ಜಾಗೃತಿ ಮೂಡಿಸುವ ಕೆಲಸವನ್ನು ಇನ್ನೊಂದೆಡೆ ಮಾಡಿಕೊಂಡು ಬರುತ್ತಿದೆ. (ಏಜೆನ್ಸೀಸ್)