ಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಷಾ ಸಮ್ಮುಖ ಶನಿವಾರ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನಜಾಗೃತಿ ಸಮಾವೇಶಕ್ಕೆ ವಾಣಿಜ್ಯನಗರಿ ಹುಬ್ಬಳ್ಳಿ ಸಂಪೂರ್ಣ ಸಜ್ಜಾಗಿದೆ. ಪ್ರಮುಖ ರಸ್ತೆಗಳೆಲ್ಲ ಕೇಸರಿಮಯವಾಗಿದ್ದು, ಎಲ್ಲಿ ನೋಡಿದರಲ್ಲಿ ಬಿಜೆಪಿ ಧ್ವಜ, ಹೋರ್ಡಿಂಗ್ಸ್ ಕಂಡುಬರುತ್ತಿವೆ. ಪೊಲೀಸರ ಸರ್ಪಗಾವಲು ಕಾಣಿಸುತ್ತಿದ್ದು, ನೆಹರು ಮೈದಾನದ ಸುತ್ತಮುತ್ತಲಿನ ಪ್ರದೇಶವೆಲ್ಲ ಖಾಕಿಮಯವಾಗಿದೆ.
ಸಂಜೆ 4.30ಕ್ಕೆ ಸಮಾವೇಶ ನಿಗದಿ ಯಾಗಿದ್ದು, ಸುಮಾರು ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬೇರೆಡೆಯಿಂದ ಬರುವವರಿಗೆ ಹೊರವಲಯಗಳಲ್ಲಿ ಲಘು ಉಪಹಾರ ನೀಡುವುದಕ್ಕಾಗಿ ಪೆಂಡಾಲ್ ಹಾಕಲಾಗಿದೆ. ಅಮಿತ್ ಷಾ ಅವರೊಂದಿಗೆ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ನಗರಕ್ಕೆ ಬಂದಿಳಿಯಲಿದ್ದಾರೆ. ನೆಹರು ಮೈದಾನದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮೈದಾನದ ಸುತ್ತಲೂ ಪೊಲೀಸರು ಪರಿಶೀಲನೆ ನಡೆಸಿದ್ದು, ಷಾ ಆಗಮಿಸಲಿರುವ ಸ್ಥಳದ ಸುತ್ತಲಿನ ಕಟ್ಟಡಗಳಿಗೆ ಬೀಗ ಹಾಕುವಂತೆ ಸೂಚಿಸಿದ್ದಾರೆ.
ಷಾ ಕಾರ್ಯಕ್ರಮ: ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಅಮಿತ್ ಷಾರನ್ನು ಶನಿವಾರ ಮಧ್ಯಾಹ್ನ 12.15ಕ್ಕೆ ಸಿಎಂ ಬಿಎಸ್ವೈ ಬರ ಮಾಡಿಕೊಳ್ಳಲಿದ್ದಾರೆ. ಬಳಿಕ ಅರಮನೆ ಆವರಣದ ಕೃಷ್ಣ ವಿಹಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಆನಂತರ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು.
ಗಣ್ಯರ ಪಟ್ಟಿಗೆ ಕತ್ತರಿ
ಸಮಾವೇಶದ ಮುಖ್ಯವೇದಿಕೆಯಲ್ಲಿ ಆಸೀನರಾಗಲಿರುವ ಗಣ್ಯ ವ್ಯಕ್ತಿಗಳ ಪಟ್ಟಿಗೆ ಎನ್ಎಸ್ಜಿ ಭದ್ರತಾ ಪಡೆ ಕತ್ತರಿ ಹಾಕಿದೆ. ವೇದಿಕೆಯಲ್ಲಿ ಆಸೀನರಾಗಲು 45 ಗಣ್ಯರ ಪಟ್ಟಿಯನ್ನು ಬಿಜೆಪಿ ಮುಖಂಡರು ಸಿದ್ಧಪಡಿಸಿದ್ದರು. ಆದರೆ ಎನ್ಎಸ್ಜಿ ಅಧಿಕಾರಿಗಳು 20ಕ್ಕಿಂತ ಹೆಚ್ಚು ಜನ ಆಸೀನರಾಗದಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಎನ್ಎಸ್ಜಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವ ಮುಖಂಡರು, ಹೆಚ್ಚಿನ ಗಣ್ಯರು ಆಸೀನರಾಗಲು ಅನುಮತಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.