ನವದೆಹಲಿ: ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2024ರ ಮೂಲಕ ಪ್ರಸ್ತಾಪಿಸಲಾದ ಬದಲಾವಣೆ ಗಳು ಬ್ಯಾಂಕಿಂಗ್ ವಲಯದ ಆಡಳಿತ ಬಲಪಡಿಸಲಿದೆ ಮತ್ತು ಗ್ರಾಹಕರ ಅನುಕೂಲತೆ ಹೆಚ್ಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಸೂದೆ ಮಂಡಿಸಿದ ಸಚಿವರು, ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ-1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ-1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970 ಮತ್ತು ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1980ರಲ್ಲಿ ಬದಲಾವಣೆಗಳನ್ನು ತರಲು ಒಟ್ಟು 19 ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಖಾತೆದಾರರು ತಮ್ಮ ಖಾತೆಯಲ್ಲಿ ನಾಲ್ಕು ನಾಮಿನಿಗಳನ್ನು ಹೊಂದಲು ಈ ಮಸೂದೆ ಪ್ರಸ್ತಾಪಿಸುತ್ತದೆ. ಒಟ್ಟಾರೆ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವ ಹಲವು ಅಂಶಗಳು ಈ ಮಸೂದೆಯಲ್ಲಿವೆ. ಬ್ಯಾಂಕಿಂಗ್ ಕ್ಷೇತ್ರವು ವರ್ಷಗಳಲ್ಲಿ ವಿಕಸನಗೊಂಡಿರುವುದರಿಂದ ಮತ್ತು ಬ್ಯಾಂಕ್ ಆಡಳಿತ, ಹೂಡಿಕೆದಾರರ ರಕ್ಷಣೆಯನ್ನು ಸುಧಾರಿಸುವ ದೃಷ್ಟಿಯಿಂದ ಐದು ಕಾಯ್ದೆಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡುವುದು ಅಗತ್ಯವಾಗಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ, 2024ನ್ನು ಲೋಕಸಭೆ ಅಂಗೀಕರಿಸಿದೆ. ಬ್ಯಾಂಕ್ ಖಾತೆದಾರರಿಗೆ ನಾಲ್ಕು ಫಲಾನುಭವಿಗಳನ್ನು ನಾಮ ನಿರ್ದೇಶನ ಮಾಡುವ ನಿಬಂಧನೆಗಳನ್ನು ಈ ಕಾಯ್ದೆ ಪರಿಚಯಿಸಿದೆ. ಸಂವಿಧಾನದ (97ನೇ ತಿದ್ದುಪಡಿ) ಕಾಯ್ದೆ-2011 ಕ್ಕೆ ಅನುಗುಣವಾಗಿ, ಅಧ್ಯಕ್ಷ ಮತ್ತು ಪೂರ್ಣಾವಧಿಯ ನಿರ್ದೇಶಕರನ್ನು ಹೊರತುಪಡಿಸಿ ಸಹಕಾರಿ ಬ್ಯಾಂಕ್ಗಳಲ್ಲಿನ ನಿರ್ದೇಶಕರ ಅಧಿಕಾರಾವಧಿಯನ್ನು 8ರಿಂದ 10 ವರ್ಷಗಳವರೆಗೆ ವಿಸ್ತರಿಸಲು ತಿದ್ದುಪಡಿ ಪ್ರಸ್ತಾಪಿಸಿದೆ. ಕೇಂದ್ರ ಸಹಕಾರಿ ಬ್ಯಾಂಕ್ಗಳ ನಿರ್ದೇಶಕರು ರಾಜ್ಯ ಸಹಕಾರಿ ಬ್ಯಾಂಕ್ಗಳಲ್ಲಿ ಮಂಡಳಿಯ ಸ್ಥಾನಗಳನ್ನು ಹೊಂದಲು ಅನುಮತಿ ನೀಡಲೂ ಮಸೂದೆ ಪ್ರಸ್ತಾಪಿಸಿದೆ.
ಧ್ವನಿಮತದ ಅಂಗೀಕಾರ: ತೈಲ ಮತ್ತು ಅನಿಲದ ಪರಿಶೋಧನೆ, ಉತ್ಪಾದನೆಯನ್ನು ನಿಯಂತ್ರಿಸುವ ಕಾನೂನನ್ನು ತಿದ್ದುಪಡಿ ಮಾಡಲು ಮತ್ತು ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಗಣಿಗಾರಿಕೆ ಕಾರ್ಯಾಚರಣೆಗಳಿಂದ ಪೆಟ್ರೋಲಿಯಂ ಕಾರ್ಯಾಚರಣೆಗಳನ್ನು ಡಿ-ಲಿಂಕ್ ಮಾಡಲು ಪ್ರಯತ್ನಿಸುವ ಮಸೂದೆಯನ್ನು ರಾಜ್ಯಸಭೆ ಮಂಗಳವಾರ ಅಂಗೀಕರಿಸಿತು. ಈ ವರ್ಷದ ಆಗಸ್ಟ್ನಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲಾದ ತೈಲ ಕ್ಷೇತ್ರಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ-2024ನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.
ವಾರಾಂತ್ಯ ಅಧಿವೇಶನ ನಡೆಸುವ ಎಚ್ಚರಿಕೆ: ಲೋಕಸಭೆ ಕಲಾಪ ನಡೆಸಲು ವಿಪಕ್ಷಗಳು ನಿರಂತರ ಅಡಚಣೆ ಮಾಡುತ್ತಿರುವುದರಿಂದ ಸಮಯದ ನಷ್ಟ ಸರಿದೂಗಿಸಲು ವಾರಾಂತ್ಯದಲ್ಲಿ ಅಧಿವೇಶನ ನಡೆಸಬೇಕಾಗಬಹುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದ್ದಾರೆ. ಅದಾನಿ ವಿವಾದ ಮತ್ತು ಉತ್ತರ ಪ್ರದೇಶದ ಸಂಭಾಲ್ನಲ್ಲಿನ ಹಿಂಸಾಚಾರ ಸೇರಿ ವಿವಿಧ ವಿಷಯಗಳ ಕುರಿತು ಚರ್ಚೆ ಮಾಡಿ ಎಂದು ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆ ನಡೆಸುತ್ತಿರುವುದರಿಂದ ಸದನ ಆಗಾಗ್ಗೆ ಮುಂದೂಡಲ್ಪಡುತ್ತಿದೆ. ನವೆಂಬರ್ 25ರಂದು ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಸಂಸತ್ತಿನ ಕಲಾಪಗಳಿಗೆ ವಿಪಕ್ಷಗಳು ಪದೇಪದೇ ಅಡ್ಡಿಪಡಿಸುತ್ತಿವೆ.
ವಿಪಕ್ಷಗಳ ಪ್ರತಿಭಟನೆ: ಉದ್ಯಮಿ ಗೌತಮ್ ಅದಾನಿ ವಿಚಾರವಾಗಿ ಸಂಸತ್ ಆವರಣದಲ್ಲಿ ಐಎನ್ಡಿಐಎ ಮೈತ್ರಿಕೂಟದ ಸಂಸದರು ಪ್ರತಿಭಟನೆ ನಡೆಸಿ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ಕಾಂಗ್ರೆಸ್, ಎಎಪಿ, ಆರ್ಜೆಡಿ, ಶಿವಸೇನೆ (ಯುಬಿಟಿ), ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ಪ್ರಧಾನಿ ಮೋದಿ ವಿರುದ್ಧ ಘೊಷಣೆ ಕೂಗಿದರು.
IPL ಹರಾಜಿನಲ್ಲಿ ಅನ್ಸೋಲ್ಡ್; ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ಯುವ ಬ್ಯಾಟರ್
ಭಾರತವು ಲ್ಯಾಬೋರೇಟರಿಯಂತೆ ಹೊಸ ಪ್ರಯೋಗಗಳನ್ನು ಮಾಡಬಹುದು; ವಿವಾದದ ಕಿಡಿ ಹೊತ್ತಿಸಿದ Bill Gates ಹೇಳಿಕೆ