| ಪ್ರೊ. ಎಚ್.ಟಿ. ಪೋತೆ, (ಲೇಖಕರು ಹಿರಿಯ ಪ್ರಾಧ್ಯಾಪಕರು ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರು)
ಲಿಂಗ ಕಟ್ಟಿದವರೆಲ್ಲರೂ ಲಿಂಗಾಯತರು ಎನ್ನುವುದು ಬಸವನೇತೃತ್ವದ ವಚನ ಚಳವಳಿಯ ಬಹುದೊಡ್ಡ ಸಿದ್ಧಾಂತ. ಅದರಡಿಯಾಗಿ ನಿಂತವರು ಬಸವಣ್ಣ. ಅವರ ಎಲ್ಲ ತತ್ವಗಳನ್ನು ಒಪ್ಪಿ ಬಂದವರಲ್ಲಿ ಅಂಬಿಗರ ಚೌಡಯ್ಯ ಕೂಡ ಒಬ್ಬ. ಶರಣ ಸಂಕುಲದ ಕ್ರಾಂತಿಕಾರಿ ವಚನಕಾರನಾಗಿ, ನೇರ, ನಿಷ್ಠುರ ಸ್ವಭಾವದವನಾಗಿ ಸಮಾಜದ ಬೂಟಾಟಿಕೆಯ ವ್ಯವಸ್ಥೆಯನ್ನು ಕಂಡು ಕೆರಳಿದ ವ್ಯಕ್ತಿತ್ವ ನಿಜಶರಣ ಅಂಬಿಗರ ಚೌಡಯ್ಯನದಾಗಿದೆ. ಈಗಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡದಾನಪುರದ ಪಂಪಾದೇವಿ ವಿರೂಪಾಕ್ಷಪ್ಪನವರ ಮಗನಾಗಿ ಜನಿಸಿದ ಚೌಡಯ್ಯ ತನ್ನ ವಚನಗಳಲ್ಲಿ ಉಗ್ರವಾದ, ವ್ಯಂಗ್ಯವಾದ ವಿಚಾರಗಳನ್ನು ವ್ಯಕ್ತಪಡಿಸುವಲ್ಲಿ ಹಿಂದೇಟು ಹಾಕಿದವನಲ್ಲ. ಕುಲ ಅಹಂಕಾರಿಗಳನ್ನು ನಿಂದಿಸದೆ ಬಿಟ್ಟವನಲ್ಲ.
ಕುಲದ ನೆಪದಲ್ಲಿ ಹೊಡೆದಾಡುವವರನ್ನು ಹಿಡಿದು ತಂದು ಮೂಗನೆ ಕೊಯ್ದು ಮೆಣಸಿನಹಿಟ್ಟು ತುಪ್ಪವ ಸವರಿ ನಮ್ಮ ಪಡಿಹಾರಿ ಉತ್ತಣ್ಣನ ಎಡದ ಪಾದುಕೆಯಿಂದ ಪಟ ಪಟನೆ ಹೊಡೆಯಬೇಕು ಎಂದು ಹಳಿಯುವ ಶರಣ ಚೌಡಯ್ಯ ಸ್ವಸ್ಥ ಸಮಸಮಾಜ ಕಟ್ಟಬೇಕೆಂದು ಹೇಳುವ ಉದ್ದೇಶದವನಾಗಿ ಕಾಣುತ್ತಾನೆ. ಪಡಿಹಾರಿ ಉತ್ತಣ್ಣನೆಂಬ ಶರಣ ಮಹಾಮನೆಯ ಬಾಗಿಲು ಕಾಯುವ ಕಾಯಕದವನು. ಈತ ನಿಷ್ಕಪಟಿ, ನಿಸ್ವಾರ್ಥಿ ಹಾಗೂ ಸ್ವಾಭಿಮಾನಿ, ಪ್ರಾಮಾಣಿಕ. ಅವನ ಪಾದುಕೆಗಳಿಂದ ಶಿಕ್ಷಿಸಿದರೆ ಕುಲಜಾತಿ ಮಡಿವಂತರಿಗೆ ಬುದ್ಧಿಬರಬಹುದೆಂಬ ಅಭೀಪ್ಸೆ ಚೌಡಯ್ಯನದಾಗಿದೆ. ಚೌಡಯ್ಯ ತನ್ನ ಅನೇಕ ವಚನಗಳಲ್ಲಿ ಉತ್ತಣ್ಣನ ಪಾದುಕೆಗಳಿಂದಲೇ ಹೊಡೆಯಬೇಕೆಂದು ಪ್ರಸ್ತಾಪಿಸುತ್ತಾನೆ.
ಗುರುವಿನ ಸ್ಥಾನ ಬಹುದೊಡ್ಡದು. ಹಾಗಿದ್ದು ಸಮಾಜ ವಿರೋಧಿಯಾಗಿ ಬದುಕಿದಾಗ ಚೌಡಯ್ಯ ಕೆರಳಿ ಕೆಂಡವಾಗುತ್ತಾನೆ. ಕುಲಹೀನ ಶಿಷ್ಯನಿಗೆ ಲಿಂಗದೀಕ್ಷೆ ನೀಡಿ, ಅನುಗ್ರಹವ ಮಾಡಿದ ಮೇಲೆ ಜೊತೆಯಾಗಿ ಉಣ್ಣುವುದು ಗುರುವಾದವನ ಧರ್ಮ. ಆದರೆ ಹಾಗೆ ಮಾಡಿದರೆ ತನ್ನ ಮೂಲ ಕುಲಕ್ಕೆ ಚ್ಯುತಿಯಾಗುತ್ತದೆಂದು ತಿಳಿಯುವ ಗುರು ನಿಜವಾದ ಗುರುವಲ್ಲ. ಅಂಥವನನ್ನು ಹಿಡಿದು ತಂದು ಮೂಗನೆ ಕೊಯ್ಯಬೇಕು, ಇಟ್ಟಂಗಿ ಕಲ್ಲಿನಿಂದ ತಿಕ್ಕಿ, ಸಾಸಿವೆಯ ಹಿಟ್ಟನ್ನು ತಳಿದು ಮೇಲೆ ಲಿಂಬಿಯ ಹುಳಿಯನು ಹಿಂಡಿ ಪಡುವಣ ಗಾಳಿಗೆ ಹಿಡಿಯಬೇಕು ಎಂದು ಉಗ್ರವಾಗಿ ಮಾತಾಡುತ್ತಾನೆ.
ಸತಿಪತಿಗಳ ಭಕ್ತಿ ಒಂದಾದರೆ ಅದು ಬದುಕಿಗೂ-ಭವಕ್ಕೂ ಹಿತವಾಗಿರುವುದು ಎನ್ನುವುದು ಶರಣ ತತ್ವದ ಬಹುದೊಡ್ಡ ಆಶಯ. ಪರಧನ, ಪರಸತಿ ಪರನಿಂದನೆ ಗಳಿಂದ ಮುಂದೆ ನರಕವೆ ಎನ್ನುವುದು ನೈತಿಕ ನೆಲೆಯನ್ನು ಉದ್ದೀಪನಗೊಳಿಸಿದರೆ, ಕುರಿಕೋಳಿ ಕಿರುಮೀನು ತಿಂಬವರು ಊರೊಳಗೆ ಇರಬಹುದು. ಅಮೃತಾನ್ನವ ಕರೆವ ಗೋವ ತಿಂಬವರ ಊರಹೊರಗಿರು ಎಂಬರು ಎನ್ನುವ ವಚನೋಕ್ತಿಗಳು ಚೌಡಯ್ಯನ ಮಾತುಗಳಿಗೆ ಶಕ್ತಿಯಾಗಿವೆ. ಸತಿಪತಿಗಳ ಬದುಕು ಹೇಗಿರಬೇಕೆನ್ನುವುದನ್ನು ಚೌಡಯ್ಯ ಮಾರ್ವಿುಕವಾಗಿ ವಿಶದೀಕರಿಸಿದ ರೀತಿ ಅನನ್ಯವಾದುದು. ಕೇಳಿರಯ್ಯಾ ಮಾನವರೆ ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದಿನ ನಂದಾದೀವಿಗೆಯ ಮುಡಿಸಿದ ಹಾಗೆ, ಬೇರೆಯಾದರೆ ಗಂಜಳದೊಳಗೆ ಹಂದಿ ಹೊರಳಾಡಿದಂತೆ, ಅವು ಒಂದನ್ನೊಂದು ಮೂಸಿ ನೋಡಿದಂತೆ ಎಂದು ಹೇಳಿ ಸಾಮರಸ್ಯದ ದಾಂಪತ್ಯ ಪಥವನ್ನು ಅರಿಯಬೇಕೆಂದು ಬೋಧಿಸುತ್ತಾನೆ.
ಅಂಬಿಗರ ಚೌಡಯ್ಯ ಬಸವಣ್ಣನವರ ಬಹುದೊಡ್ಡ ಅಭಿಮಾನಿಯಾಗಿ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡ ಶರಣ. ಸತ್ಯ-ಶುದ್ಧ ಕಾಯಕದ ಪ್ರತೀಕನಾಗಿ ಬಿಂಬಿತನಾಗಿದ್ದಾನೆ. ಅದ್ವಿತೀಯ ಭಾಷಾ ಪ್ರೌಢಿಮೆ ಹೊಂದಿದ್ದಲ್ಲದೆ, ಮೂಢ ನಂಬಿಕೆಗಳನ್ನು ಅಲ್ಲಗಳೆಯುತ್ತ ಡಾಂಭಿಕತೆಯನ್ನು ನೇರವಾಗಿ ವಿರೋಧಿಸುತ್ತಾನೆ. ಕುಲಜಾತಿ ನಿರಾಕರಣೆಯ ಜೊತೆಗೆ ನೀತಿಪ್ರಧಾನ ಬದುಕು ಮಾಡಲು ನಿರ್ದೇಶಿಸುತ್ತಾನೆ. ಶುದ್ಧ ಕಾಯಕದ ಬಗ್ಗೆ ಅಪಾರ ಗೌರವದಿಂದ ಮಾತಾಡಿದ್ದಾನೆ. ಸ್ವವಿಮರ್ಶೆ, ವೈಚಾರಿಕತೆಯ ತಿಳಿ ನೀರಿನಲ್ಲಿ ತೇಲಾಡುತ್ತಾನೆ.
ಚೌಡಯ್ಯ ಗ್ರಾಮೀಣ ಪ್ರತಿಭೆ. ಹೀಗಾಗಿ ಅವನು ಬೆಳೆದ ಬಂದ ಪರಿಸರದ ಪ್ರಭಾವದಿಂದ ನೇರವಾಗಿ ಮಾತಾಡುವುದು ಅವನ ವಿಶೇಷ ಗುಣ. ಜಾತಿ- ಕುಲ- ಗೋತ್ರಗಳನ್ನು ಹಿಡಿದು ಮಾತಾಡುವ ಮತಿಹೀನರನ್ನು ಕಂಡು ‘ಅಂಬಿಗ, ಅಂಬಿಗ ಎಂದು ಕುಂದು ನುಡಿಯದಿರಿ, ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೆಯ ಹಾಯಿಸುವನು ಅಂಬಿಗರ ಚೌಡಯ್ಯ’ ಎಂದು ಸ್ವಾಭಿಮಾನದ ಮಾತುಗಳನ್ನಾಡುತ್ತ ಲೌಕಿಕ, ಅಧ್ಯಾತ್ಮಿಕ ಪಥಗಳೆರಡನ್ನೂ ಅರಹುತ್ತಾನೆ. ಬಹಳ ಜನರಿಗೆ ಅಂಬಿಗರ ಚೌಡಯ್ಯನ ಮಾತುಗಳು ಒರಟು ಎನಿಸಿರಬಹುದು. ಆದರೆ ದುಡಿದುಣ್ಣುವವನಿಗೆ ನೀತಿವಂತನಿಗೆ ಧೈರ್ಯ-ಎದೆಗಾರಿಕೆ ಹೆಚ್ಚಿರುವುದು ಅಭಿಮಾನದ ಸಂಗತಿಯೇ ಸರಿ. ಸತ್ಯಶುದ್ಧ ಕಾಯಕದ ನೆಲೆಯಿಂದ ಬೆಳೆದು ಬಂದ ಅಪ್ಪಟ ಕನ್ನಡ ಪ್ರತಿಭೆ, ಚೌಡಯ್ಯ ಸ್ವಾಭಿಮಾನದ ಪ್ರತೀಕವಾಗಿದ್ದಾನೆ. ಅವನೆಂದೂ ನಡೆ-ನುಡಿಯಲ್ಲಿ ಹೆಜ್ಜೆ ತಪ್ಪಿದವನಲ್ಲ. ಆತ ಬಸವಾದಿ ಶರಣ ಚಳವಳಿಯ ಬಹುದೊಡ್ಡ ವಿಮರ್ಶಕನಾಗಿ ಕಾಣುತ್ತಾನೆ.