ಶಿವಮೊಗ್ಗ: ನಗರದ ಆಲ್ಕೊಳದಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ ಇಬ್ಬರನ್ನು ವಿನೋಬನಗರ ಠಾಣೆ ಪೊಲೀಸರು ಕೇವಲ 24 ಗಂಟೆಯಲ್ಲೇ ಬಂಧಿಸಿ 1.09 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ದಾವಣಗೆರೆಯ ಶ್ರೀರಾಮ ಬಡಾವಣೆಯ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದ ನಿವಾಸಿ ಎ.ಆರ್.ರಾಹುಲ್ (26) ಮತ್ತು ಶಿವಮೊಗ್ಗ ಬೊಮ್ಮನಕಟ್ಟೆ ಬಿ ಬ್ಲಾಕ್ನ ಗಣೇಶ್ (28) ಬಂಧಿತರು. ಶುಕ್ರವಾರ (ಜ.27) ಆಲ್ಕೊಳದ ನಿವಾಸಿ ಮಾಣಿಕ್ಯಂ ಅವರು ಮನೆ ಬೀಗ ಹಾಕಿ ಕೀಯನ್ನು ಆವರಣದಲಿದ್ದ ನೀರಿನ ಮೋಟಾರ್ ಕೆಳಗಿಟ್ಟಿದ್ದರು. ಅದನ್ನು ಗಮನಿಸಿದ್ದ ಇಬ್ಬರು ಅದೇ ಬೀಗದಿಂದ ಮನೆ ಬಾಗಿಲು ತೆರೆದು ಬೀರುವಿನಲ್ಲಿದ್ದ ಬಂಗಾರ ಮತ್ತು ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿದ್ದರು. ಈ ಬಗ್ಗೆ ಮಾಣಿಕ್ಯಂ ಅವರು ವಿನೋಬನಗರ ಠಾಣೆಗೆ ದೂರು ನೀಡಿದ್ದರು.
ಶಿವಮೊಗ್ಗ ಉಪವಿಭಾಗ-2ರ ಡಿವೈಎಸ್ಪಿ ಎಂ.ಸುರೇಶ್ ಅವರ ಮೇಲ್ವಿಚಾರಣೆಯಲ್ಲಿ ವಿನೋಬನಗರ ಸಿಪಿಐ ಎನ್.ಎಸ್.ರವಿ ನೇತೃತ್ವದಲ್ಲಿ ಎಎಸ್ಐ ರಮೇಶ್, ಸಿಬ್ಬಂದಿಗಳಾದ ಕೆ.ಆರ್.ರಾಜು, ಚಂದ್ರನಾಯ್ಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ 30 ಗ್ರಾಂ ಬಂಗಾರದ ಆಭರಣ ಮತ್ತು 100 ಗ್ರಾಂ ಬೆಳ್ಳಿಯ ಚೈನ್ ಅನ್ನು ಜಪ್ತಿ ಮಾಡಿದ್ದಾರೆ. 24 ಗಂಟೆಯಲ್ಲೇ ಆರೋಪಿತರನ್ನು ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಬಹುಮಾನ ಘೋಷಿಸಿದ್ದಾರೆ.