ಬೆಂಗಳೂರು: ರಾಜಕಾರಣಿ, ಉದ್ಯಮಿಗಳಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಚಿನ್ನ, ನಗದು ಮತ್ತು ಬ್ಯಾಂಕ್ ಖಾತೆ ಮೂಲಕ ಹಣ ಪಡೆದು ಐಶ್ವರ್ಯಾ ಗೌಡ ವಂಚನೆ ಮಾಡಿರುವುದು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಯಿಂದ ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ. ಸುರೇಶ್ ಸಹೋದರಿ ಸೋಗಿನಲ್ಲಿ ವಂಚನೆ ಮಾಡಿದ್ದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ.ಎನ್. ಹರೀಶ್ ಮನೆ ಮೇಲೆ ಏ. 24 ಮತ್ತು 25ರಂದು ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೆ, ಐಶ್ವರ್ಯಾ ಜತೆಗೆ ಸಂಪರ್ಕ ಹೊಂದಿದ್ದ ಶಾಸಕ ವಿನಯ್ ಕುಲಕರ್ಣಿ, ಕಾಂಗ್ರೆಸ್ ಮುಖಂಡ ತಿಬ್ಬೇಗೌಡ ಸೇರಿ ಹಲವರಿಗೆ ಸೇರಿ ಮನೆ, ಕಚೇರಿ ಸೇರಿ 14 ಸ್ಥಳಗಳಲ್ಲಿ ಶೋಧ ನಡೆಸಿದ್ದರು. 2.25 ಕೋಟಿ ರೂ. ನಗದು ಮತ್ತು ಅಕ್ರಮ ಹಣಕಾಸು ವಹಿವಾಟು ಸಂಬಂಧ ದಾಖಲೆಪತ್ರಗಳನ್ನು ಜಪ್ತಿ ಮಾಡಿದ್ದರು.
ಇದಲ್ಲದೆ, ಐಶ್ವರ್ಯಾ ಗೌಡನನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿ 14 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಇ.ಡಿ. ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಐಶ್ವರ್ಯಾ ಮತ್ತು ಹರೀಶ್ ಸೇರಿ ಉದ್ಯಮಿಗಳು, ರಾಜಕಾರಣಿಗಳಿಗೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಅವರಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಮತ್ತು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ.
ಯಾರಿಗೂ ಭರವಸೆ ನೀಡಿದಂತೆ ಲಾಭಾಂಶ ಅಥವಾ ಅಸಲು ನೀಡದೆ ವಂಚನೆ ಮಾಡಿದ್ದಾರೆ. ವಾಪಸ್ ಹಣ ಕೇಳಿದಾಗ, ‘ನನಗೆ ಪ್ರಭಾವಿ ರಾಜಕಾರಣಿಗಳು ಗೊತ್ತಿದ್ದಾರೆ’ ಎಂದು ಬೆದರಿಕೆವೊಡ್ಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.